ಕನ್ನಡಪ್ರಭ ವಾರ್ತೆ ಮದ್ದೂರು

ನರಗುಂದ, ನವಲಗುಂದ ರೈತ ಬಂಡಾಯದ ವೇಳೆ ಹುತಾತ್ಮರಾದ ರೈತರ 46ನೇ ವರ್ಷದ ನೆನಪಿನಾರ್ಥ ರೈತ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ರೈತ ಹುತಾತ್ಮ ದಿನ ಆಚರಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಜ್ಯ ರೈತ ಸಂಘದ ಏಕೀಕರಣ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ದಿ.ಪ್ರೊ.ಎಂ.ಡಿ.ನಂಜುಂಡಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.

ನಂತರ ಕಚೇರಿ ಕೆಲಕಾಲ ಧರಣಿ ನಡೆಸಿದ ಕಾರ್ಯಕರ್ತರು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿ ತರುವಾಯ ತಹಸೀಲ್ದಾರ್ ಶಿವಕುಮಾರ ಬಿರಾದಾರ ಅವರ ಮೂಲಕ ಬೇಡಿಕೆ ಕುರಿತಂತೆ ರಾಜ್ಯ ಸರ್ಕಾರಕ್ಕೆ ರೈತ ಮುಖಂಡರು ಮನವಿ ಸಲ್ಲಿಸಿದರು.

ಮಳೆ ಕೊರತೆ ಕಾರಣ ರಾಜ್ಯದಲ್ಲಿ ತೀವ್ರಬರಗಾಲ ಉಂಟಾಗಿದೆ. ರೈತರಿಗೆ ಬರ ಪರಿಹಾರದ ರೂಪದಲ್ಲಿ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರು. ಪರಿಹಾರ ನೀಡಬೇಕು. ಬ್ಯಾಂಕ್‌ಗಳು ಮತ್ತು ಸಹಕಾರ ಸಂಘಗಳ ಎಲ್ಲಾ ಕೃಷಿ ಸಾಲಗಳನ್ನು ಒಂದು ವರ್ಷದ ಅವಧಿಗೆ ಮನ್ನಾ ಮಾಡುವುದು ಎಂದು ರೈತರು ಹಾಕ್ಕೊತ್ತಾಯ ಮಂಡಿಸಿದರು.


ವಿದ್ಯುತ್ ಕೊರತೆಯಿಂದಾಗಿ ಬೆಳೆದು ನಿಂತ ಬೆಳೆಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಗಲು ವೇಳೆ ಕನಿಷ್ಠ 8 ಗಂಟೆಗಳ ಕಾಲ ವಿದ್ಯುತ್ ಸರಬರಾಜು ಮಾಡಬೇಕು. ಅಕ್ರಮ, ಸಕ್ರಮಗಳ ಯೋಜನೆ ತ್ವರಿತ ಜಾರಿ ಮಾಡುವಂತೆ ಆಗ್ರಹಿಸಿದರು.

ಪ್ರಸಕ್ತ ಸಾಲಿನಲ್ಲಿ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ 15 ದಿನಗಳಲ್ಲಿ ಹಣ ಪಾವತಿ ಮಾಡುವುದು. ರಾಜ್ಯ ಸರ್ಕಾರ ಆದೇಶದ ಪ್ರಕಾರ ಹಿಂದಿನ 150 ರು.ಬಾಕಿ ಹಣದ ಜೊತೆಗೆ 50 ರು. ಪ್ರೋತ್ಸಾಹದ ಹಣವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ವಿಸಿ ನಾಲೆ ನೀರಿನ ಸೌಲಭ್ಯವನ್ನು ಶಿಂಷಾ ನದಿ ವ್ಯಾಪ್ತಿ ರೈತರಿಗೂ ವಿಸ್ತರಣೆ ಮಾಡುವ ಮೂಲಕ ಜನಜಾನುವಾರುಗಳಿಗೆ ನೀರಿನ ಸೌಲಭ್ಯ ಕಲ್ಪಿಸಬೇಕು. ಮೇವು ಬ್ಯಾಂಕ್‌ ಸೌಲಭ್ಯವನ್ನು ತಕ್ಷಣ ಜಾರಿಗೆ ಮನವಿ ಪತ್ರದ ಮೂಲಕ ಒತ್ತಾಯಿಸಿದರು.

ಧರಣಿಯಲ್ಲಿ ಪ್ರಭುಲಿಂಗ, ಇಂಡವಾಳು ಚಂದ್ರಶೇಖರ್, ಅಣ್ಣೂರು ಮಹೇಂದ್ರ, ಕೀಳಘಟ್ಟ ನಂಜುಂಡಯ್ಯ, ಸೋ.ಶಿ. ಪ್ರಕಾಶ್, ರಾಮಲಿಂಗಯ್ಯ, ವೆಂಕಟೇಶ, ರಾಮಣ್ಣ, ಉಮೇಶ್ ,ಮಂಜು ಮತ್ತಿತರರು ಭಾಗವಹಿಸಿದ್ದರು.