ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ:
ನಮ್ಮ ಸುತ್ತಮುತ್ತಲಿನ ನೈಜ ಘಟನೆಗಳು,ಸಣ್ಣ ಪುಟ್ಟ ಸಂಭ್ರಮಗಳು, ಗಂಟಲುಬ್ಬಿ ಬಂದ ನೋವಿನ ಬಿಕ್ಕಳಿಕೆಗಳು, ನಮ್ಮವೇ ಆದ ಸಮಸ್ಯೆಗಳು, ಕಥಾವಸ್ತುಗಳಾಗಿ ಗಮನ ಸೆಳೆಯುತ್ತವೆ ಎಂದು ಸಾಹಿತಿ ದಾಕ್ಷಾಯಿಣಿ ಬಿರಾದಾರ ಹೇಳಿದರು.ನಗರದ ಬ್ಯಾಂಕರ್ಸ್ ಕಾಲೋನಿಯ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಡಾ.ಎಂ.ಎಸ್.ಮಾಗಣಗೇರಿ ಕುಟುಂಬ ಆಯೋಜಿಸಿದ್ದ ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಸ್ಕ್ರತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ತಾಳಿಕೋಟಿಯ ಸವಿತಾ.ಆರ್.ಇನಾಮದಾರ ಅವರ ಅರ್ಧ ನೆನಪು ಅರ್ಧ ಕನಸು ಕಥಾ ಸಂಕಲನವನ್ನು ಪರಿಚಯಿಸಿ ಅವರು ಮಾತನಾಡಿದರು. ಇಲ್ಲಿನ ಕಥೆಗಳ ಭಾಷೆ ವಿಶೇಷವಾಗಿದೆ, ಉತ್ತರ ಕರ್ನಾಟಕದ ಭಾಷೆಯ ಲಯವನ್ನು ಸಮರ್ಥವಾಗಿ ಬಳಸುವುದರೊಟ್ಟಿಗೆ ಪ್ರಾದೇಶಿಕ ಅಸ್ಮಿತೆಯನ್ನು ಪ್ರತಿಷ್ಠಾಪಿಸಿ ಸೂಕ್ಷ್ಮ ಭಾವನೆಗಳಿಗೆ ಈ ಭಾಗದ ಭಾಷೆ ಹಾಗೂ ಅದರ ನುಡಿಗಟ್ಟುಗಳು ಸಮರ್ಥವಾಗಿವೆ ಎಮಬುದಾಗಿ ತಿಳಿಸಿದರು.
ಈ ಭಾಷೆಯನ್ನು ಲೇಖಕರು ಕತೆಗಳಲ್ಲಿ ಅಚ್ಚುಕಟ್ಟಾಗಿ ದುಡಿಸಿಕೊಂಡಿದ್ದಾರೆ. ಇವರ ಬಹುತೇಕ ಕಥೆಗಳ ಪಾತ್ರಗಳಿಗೆ ಸಶಕ್ತ ಅಭಿವ್ಯಕ್ತಿ ಒದಗಿ ಬಂದಿದೆ. ಇಲ್ಲಿರುವ ಕತೆಗಳು ಯಾವುದೋ ಕಲ್ಪನೆಯ ದಂತಗೋಪುರಗಳಲ್ಲಿ ಕುಳಿತು ಕಾಲಕ್ಷೇಪಕ್ಕಾಗಿ ಹೇಳಿಕೊಂಡ ರಮ್ಯವಾದ ಸಂಗತಿಗಳಲ್ಲ. ಗ್ರಾಮ್ಯ ಪರಿಸರದಲ್ಲಿಯೇ ಒಡಮೂಡಿ ಆಕೃತಿ ತಾಳುವ ಈ ಕಥೆಗಳು ಹಳ್ಳಿಯ ಬದುಕಿನ ಬವಣೆ, ಛಲ, ಸೇಡು, ಅಸಹಾಯಕತೆ, ಧೈರ್ಯ ಎಲ್ಲವನ್ನೂ ತೆರೆದಿಡುತ್ತವೆ ಎಂದರು.ಸರಕಾರಿ ಪದವಿ ಪೂರ್ವ ಕಾಲೇಜು ಅರ್ಜುಣಗಿಯ ಕನ್ನಡ ಉಪನ್ಯಾಸಕಿ ಡಾ.ಸವಿತಾ ಝಳಕಿ ಉದ್ಘಾಟಿಸಿದರು.ಅತಿಥಿಯಾಗಿ ಹೊಟೇಲ್ ಉದ್ಯಮಿ ನಾಗೇಶ ಶೆಟ್ಟಿ ಹಾಗೂ ಓಂ ಸಾಯಿ ಯೋಗ ಅಕಾಡೆಮಿಯ ಅಧ್ಯಕ್ಷೆ ಕೀರ್ತಿ ಮಠಪತಿ ಮಾತನಾಡಿದರು. ವ್ಯಾಯಾಮ, ಯೋಗ, ಧ್ಯಾನಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಿವ್ಯ ಔಷಧವಾದರೆ ಸಾಹಿತ್ಯ ಮತ್ತು ಓದು ಜ್ಞಾನದ ಹಸಿವನ್ನು ಇಂಗಿಸಿ ಸುಂದರ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸುಭಾಷ ಯಾದವಾಡ ಮಾತನಾಡಿ, ಕಥೆ ಕಟ್ಟುವುದು ಒಂದು ಕಲೆಯಾಗಿದ್ದು, ಬದುಕಿನ ಅನುಭವಗಳ ಸುರಳಿಯನ್ನು ಬಿಚ್ಚಿ ಕಾಲ ಗರ್ಭದ ಸತ್ಯಾಸತ್ಯತೆಗಳ ಅನಾವರಣ ಮಾಡುವುದು ಕಥೆಗಳ ಮುಖ್ಯ ಧ್ಯೇಯ ಎಂದು ವಿವರಿಸಿದರು.ಇದೇ ಸಂದರ್ಭದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಕಾವ್ಯ, ಜಾಣ, ರತ್ನ ಪರೀಕ್ಷೆಗಳ ಪಠ್ಯಪುಸ್ತಕಗಳ ರಚನಾ ಸಮಿತಿಗೆ ಉತ್ತರ ಕರ್ನಾಟಕ ಭಾಗದ ಸದಸ್ಯರಾಗಿ ಆಯ್ಕೆಗೊಂಡ ಡಾ.ಎಸ್.ಟಿ.ಮೇರವಾಡೆ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಓದುಗರ ಚಾವಡಿಯ ಸಂಚಾಲಕ ಶರಣು ಸಬರದ, ಡಾ.ವಿ.ಡಿ ಐಹೊಳ್ಳಿ, ಡಾ.ಉಷಾ ದೇವಿ ಹಿರೇಮಠ, ಪ್ರಭಾವತಿ ದೇಸಾಯಿ, ಪ್ರೊ.ಎಂ.ಎಸ್ ಝಳಕಿ, ರಮೇಶ ಚವ್ಹಾಣ, ಸಂಗಮೇಶ ಮೇತ್ರಿ, ಡಾ.ರಾಜಕುಮಾರ ಜೊಲ್ಲೆ, ಮನು ಪತ್ತಾರ ಕಲಕೇರಿ, ಶಿವಶರಣಪ್ಪ ಶಿರೂರು, ಜಿ.ಸಿ.ಹಿರೇಮಠ, ರಮೇಶ ತೇಲಿ, ಶ್ರೀಧರ ಪತ್ತಾರ, ರವೀಂದ್ರ ಝಳಕಿ, ಅಮರೇಶ ಸಾಲಕ್ಕಿ, ಸುಭಾಷಚಂದ್ರ ಕನ್ನೂರ, ಶರಣಗೌಡ ಪಾಟೀಲ್, ಮಯೂರ ತಿಳಗೂಳಕರ, ಡಾ.ಶಶಿಧರ ಶಿರಹಟ್ಟಿ, ಸೋಮಶೇಖರ ಕುರ್ಲೆ, ಉಪಸ್ಥಿತರಿದ್ದರು.ಶ್ರೀನಿಧಿ ಮಾಗಣಗೇರಿ ಪ್ರಾರ್ಥಿಸಿದರು, ಬಸವರಾಜ ಕುಂಬಾರ ನಿರೂಪಿಸಿ, ವಂದಿಸಿದರು.