- ದುರ್ಯೋಧನ, ದುಶ್ಯಾಸನನಂತೆ ಇಬ್ಬರು ತಾಯಿ ಭಾರತಿಯನ್ನು ತುಂಡರಿಸಿದ್ದಾರೆ: ಶ್ರೀಗಳ ಬೇಸರ - ಕೆ.ಬಿ. ಬಡಾವಣೆ ರಾಘವೇಂದ್ರ ಸ್ವಾಮಿ ಮಠ ಸುವರ್ಣ ಮಹೋತ್ಸವ 4ನೇ ದಿನದ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಾರತವನ್ನು ಪ್ರಸ್ತುತ ಇಬ್ಬರು ಹೊರಗಿನ ಪಾಪಿಗಳು ಕಾಡುತ್ತಿದ್ದಾರೆ. ಒಬ್ಬ ಜಗತ್ತಿನ ದೊಡ್ಡಣ್ಣ ತಾನೆಂಬ ಭ್ರಮೆಯಲ್ಲಿರುವ ಟ್ರಂಪ್, ಮತ್ತೊಂದು ನೇರವಾಗಿ ನಮ್ಮನ್ನು ಎದುರಿಸಲಾಗದೇ ಬೆನ್ನಿಗೆ ಚೂರಿ ಹಾಕುವ ಪಾಕಿಸ್ತಾನ ಎಂದು ಉಡುಪಿ ಅದಮಾರು ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ನುಡಿದರು.

ನಗರದ ಕೆ.ಬಿ. ಬಡಾವಣೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವದಲ್ಲಿ ಶನಿವಾರ ಸಂಸ್ಥಾನ ಪೂಜೆ ನೆರವೇರಿಸಿ, ಅವರು ಅನುಗ್ರಹ ಸಂದೇಶ ನೀಡಿದರು. ಟ್ರಂಪ್‌, ಪಾಕಿಸ್ತಾನದ ಜೊತೆಗೆ ನಮ್ಮ ದೇಶದೊಳಗೆ ಇದ್ದುಕೊಂಡೆ ಪ್ರಭು ಶ್ರೀರಾಮನಿಗೆ, ಭಾರತಕ್ಕೆ ಕಿರಿಕಿರಿ ಮಾಡುವವರೂ ಇದ್ದಾರೆ. ಅಂತಹವರನ್ನು ಓಡಿಸು ಅಥವಾ ಅಂತಹವರ ದುರ್ಬುದ್ಧಿಯನ್ನಾದರೂ ಓಡಿಸುವಂತೆ ರಾಯರಲ್ಲಿ ನಮ್ಮ ನಿತ್ಯದ ಪ್ರಾರ್ಥನೆಯಾಗಿರಬೇಕು ಎಂದರು.


ತಾಯಿ ಭಾರತಿಯನ್ನು ತುಂಡು:

ಇಬ್ಬರೂ ಸೇರಿ ದುರ್ಯೋಧನ, ದುಶ್ಯಾಸನರ ರೀತಿ ತಾಯಿ ಭಾರತಿಯನ್ನು ತುಂಡು ಮಾಡಿದ್ದಾರೆ. ಒಬ್ಬ ಟೋಪಿ ಹಾಕುತ್ತಿದ್ದ, ಮತ್ತೊಬ್ಬನ ತಲೆಯಲ್ಲಿ ಕೂದಲಿರಲಿಲ್ಲ. ಈ ಪೈಕಿ ಓರ್ವ ನೋಟುಗಳಲ್ಲಿ ಫೋಟೋ ಆಗಿ ಜನರ ಕಿಸೆ ಸೇರಿದ್ದಾನೆ. ಜನರ ಕೆಟ್ಟ ದೃಷ್ಟಿ ಬೀಳದಂತೆ ಹೊಸ ಮನೆಗಳಿಗೆ ಹಾಕುವ ಬೆದರು ಗೊಂಬೆಯಂತೆ ರುಪಾಯಿ ನೋಟು ಸೇರಿದ್ದಾನೆ. ಅಂತಹವರಿಂದಲೇ ದೇಶಕ್ಕೆ ಇಷ್ಟೆಲ್ಲಾ ಸಮಸ್ಯೆಯಾಗಿದೆ ಎಂದು ಶ್ರೀಗಳು ವಿಷಾದಿಸಿದರು.

ಆಭಾರಿ ಆಗಿರಬೇಕು, ಭಾರವಾಗಬಾರದು:

ದೇವರ ಚಿಂತನೆ ನಡೆಸಲು ದೇಶ ಗಟ್ಟಿಯಾಗಿರಬೇಕು. ಹಾಗಾಗಿ, ಪ್ರತಿಯೊಬ್ಬ ಭಗವದ್ಭಕ್ತರು ದೇಶದ ಬಾಹ್ಯ ಮತ್ತು ಆಂತರಿಕ ಪಾಪಿಗಳನ್ನು ನಿವಾರಿಸುವಂತೆ ನಿತ್ಯವೂ ಭಗವಂತನಲ್ಲಿ ಪ್ರಾರ್ಥಿಸಬೇಕು. ಧರ್ಮ ಉಳಿಯಬೇಕಾದರೆ ದೇಹದ ಜೊತೆಗೆ ದೇಶದ ಬಗ್ಗೆಯೂ ಚಿಂತನೆ ಮಾಡಬೇಕು. ದೇಶಕ್ಕೆ ನಮ್ಮ ಕೊಡುಗೆ ಏನೆಂಬ ಬಗ್ಗೆ ನಾವು ಆಲೋಚಿಸಬೇಕು. ನಮಗೆ ಅನ್ನ, ನೀರು, ಗಾಳಿ, ಬದುಕು ಕೊಟ್ಟು, ನೆಲೆ ನೀಡಿದ ದೇಶಕ್ಕೆ ನಾವು ಸದಾ ಆಭಾರಿ ಆಗಿರಬೇಕೆ ಹೊರತು, ಭಾರವಾಗಬಾರದು ಎಂದು ಆಶೀರ್ವಚನ ನೀಡಿದರು.

ರಾಯರಲ್ಲಿ ತಂದೆ-ತಾಯಿ:

ಮನೆ ಮತ್ತು ಮನದ ಕಿರಿಕಿರಿ ದೂರವಾಗಬೇಕು. ಅದಕ್ಕಾಗಿ ನಿತ್ಯವೂ ಶ್ರೀ ರಾಘವೇಂದ್ರ ಸ್ವಾಮಿಗಳ ವರ್ಧಂತಿ, ಪಟ್ಟಾಭಿಷೇಕ, ಗುರುವಾರವೆಂಬ ಭಾವನೆಯಿಂದ ರಾಯರ ಚಿಂತನೆಯನ್ನು ಮಾಡಬೇಕು. ಎರಡು ರೀತಿಯ ಪಾಪಗಳನ್ನು ಓಡಿಸಿ, ಮನಸ್ಸಿಗೆ ನೆಮ್ಮದಿ ಕೊಡುವವನು ಎಂಬುದೇ ರಾಘವೇಂದ್ರ ಶಬ್ದದ ಅರ್ಥ. ತಂದೆ-ತಾಯಿ ಸ್ಥಾನದಲ್ಲಿ ರಾಘವೇಂದ್ರರು ಇದ್ದಾರೆ. ಹಾಗಾಗಿಯೇ ರಾಯರನ್ನು ಗುರುಸಾರ್ವಭೌಮರು ಎನ್ನುತ್ತೇವೆ ಎಂದು ತಿಳಿಸಿದರು.

ಮನಸ್ಸಿಗೆ ನೆಮ್ಮದಿ ಇದ್ದರೆ ಮಾತ್ರ ಜ್ಞಾನ ಸಿಗುತ್ತದೆ. ದೇವರ ತಿಳಿವಳಿಕೆಗೆ ಜ್ಞಾನ ಸಹಕಾರಿ. ಸೃಷ್ಟಿ ಮಾಡಿದ ಭಗವಂತನಿಗೆ ಕೃತಜ್ಞರಾಗಿರಬೇಕು. ಎಟಿಎಂ ನೋಡುವಾಗ ಎನಿ ಟೈಮ್ ಮರಣ ಎಂಬುದನ್ನು ನೆನಪಿಸಿಕೊಂಡು, ಬದುಕಿದ್ದಾಗಲೇ ದಾನಧರ್ಮ ಮಾಡಬೇಕು. ಮಕ್ಕಳು ದೇವರ ಚಿಂತನೆಯಲ್ಲಿ ತೊಡಗುವಂತೆ ಮನೆಯಗಳಲ್ಲಿ ಪಾಲಕರು, ಹಿರಿಯರು ಪ್ರೋತ್ಸಾಹಿಸಬೇಕು. ಅಧ್ಯಾತ್ಮಿಕವಾಗಿಯೂ ಲೌಕಿಕವಾಗಿಯೂ ಉಪಕೃತರಾಗಿ ಇರುವವರು ಪ್ರತಿದಿನವೂ ರಾಘವೇಂದ್ರ ಎಂಬ ಪದದ ಅರ್ಥವನ್ನು ಮೆಲುಕು ಹಾಕುವುದೇ ನಾವು ರಾಯರಿಗೆ ಕೊಡಬಹುದಾದ ಕಾಣಿಕೆ ಎಂದು ಅದಮಾರು ಮಠದ ಶ್ರೀಗಳು ಹೇಳಿದರು.

ಇದಕ್ಕೂ ಮುನ್ನ ಬೆಳಗ್ಗೆ ಶ್ರೀ ರಾಘವೇಂದ್ರ ಗುರು ಸಾರ್ವಭೌಮರಿಗೆ ಪಂಚಾಮೃತ ಅಭಿಷೇಕ, ಶ್ರೀ ಹರಿವಾಯು ಸ್ತುತಿ ಪಾರಾಯಣ ಹಾಗೂ ಶ್ರೀ ರಾಘವೇಂದ್ರ ಅಷ್ಟೋತ್ತರ ಪಾರಾಯಣ ನಡೆಸಲಾಯಿತು. ರಾಯರ ಮಹಿಮೆ ಕುರಿತು ದಾವಣಗೆರೆ ಗೋಪಾಲಾಚಾರ್ಯ ಮಣ್ಣೂರು, ಉಪನಿಷತ್ ಖಂಡಾರ್ಥ ಚಿಂತನೆ ಬಗ್ಗೆ ಬೆಂಗಳೂರಿನ ಕೃಷ್ಣಾರಾಜ ಕುತ್ಪಾಡಿ ಉಪನ್ಯಾಸ ನೀಡಿದರು. ಶ್ರೀ ಗುರುರಾಜ ಸೇವಾ ಸಂಘದ ಅಧ್ಯಕ್ಷ ಕೊ.ಸ. ಪ್ರಸನ್ನಕುಮಾರ, ಕಡೂರು ಪ್ರಾಣೇಶಾಚಾರ್, ವಾಚಸ್ಪತಿ ಆಚಾರ್ಯ ಕಡೂರು, ಡಾ. ಸಿ.ಕೆ.ಆನಂದ ತೀರ್ಥಾಚಾರ್, ಕಂಪ್ಲಿ ಗುರುರಾಜಾಚಾರ್‌, ಸಿ.ಕೆ. ವೆಂಕಟೇಶ ನವರತ್ನ ಇತರರು ಇದ್ದರು.

- - -

-21ಕೆಡಿವಿಜಿ5.ಜೆಪಿಜಿ: ದಾವಣಗೆರೆ ಕೆ.ಬಿ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವದ 4ನೇ ದಿನದಂದು ಆಶೀರ್ವಚನ ನೀಡಿದ ಉಡುಪಿ ಅದಮಾರು ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಗೆ ಗೌರವ ಅರ್ಪಿಸಲಾಯಿತು. -21ಕೆಡಿವಿಜಿ6, 7: ದಾವಣಗೆರೆ ಕೆ.ಬಿ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವದ 4ನೇ ದಿನದಂದು ಉಡುಪಿ ಅದಮಾರು ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. -21ಕೆಡಿವಿಜಿ8: ರಾಘವೇಂದ್ರ ಸ್ವಾಮಿ ಮಠದ ಸುವರ್ಣ ಮಹೋತ್ಸವದ 4ನೇ ದಿನದಂದು ಉಡುಪಿ ಅದಮಾರು ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಂಸ್ಥಾನ ಪೂಜೆ ನೆರವೇರಿಸಿದರು.