ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬದುಕಿನಲ್ಲಿ ಅಂಗವಿಕಲತೆ, ದೈಹಿಕ ತೊಂದರೆಗಳಿಂದ ಕೊರತೆ ಎಂಬ ಭಾವನೆ ಉಂಟಾಗಿದ್ದರೂ ಮಾನಸಿಕವಾಗಿ ಬಹಳಷ್ಟು ಜ್ಞಾನ ಹೊಂದಿರುವ ಸಮಾಜ ಇದ್ದರೆ, ಅದು ದಿವ್ಯಾಂಗ ಸಮಾಜ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.ನವನಗರದ ಕಲಾಭವನದಲ್ಲಿ ಬುಧವಾರ ಸಾಮಾಜಿಕ ಅಧಿಕಾರಿತ ಶಿವಿರ್, ಭಾರತ ಸರಕಾರದ ಅಡಿಪ್ ಯೋಜನೆಯಡಿಯಲ್ಲಿ ದಿವ್ಯಾಂಗರಿಗೆ ಮತ್ತು ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರಿಗೆ ಉಚಿತವಾಗಿ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೀವನ ಸಾಗಿಸುವ ಪ್ರತಿಯೊಬ್ಬರಲ್ಲಿ ಒಂದೊಂದು ಜ್ಞಾನವಿರುತ್ತದೆ. ಒಂದನ್ನು ಕೊಟ್ಟು ಮತ್ತೊಂದನ್ನು ದೇವರು ನೀಡಿರುತ್ತಾರೆ ಎಂದು ಹೇಳಿದರು.
ಅಂಗವಿಕಲರು ಎಂದು ಕರೆದರೆ ನೋವಾಗುತ್ತದೆ ಎಂಬ ದೃಷ್ಟಿಯಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದಿವ್ಯಾಂಗರು ಎಂದು ನಾಮಕರಣ ಮಾಡಿದ್ದಾರೆ. ಇಲಾಖೆಯ ಅಧಿಕಾರಿಗಳು ಮೇಲಿಂದ ಮೇಲೆ ಜಿಲ್ಲೆಯಲ್ಲಿ ಸರ್ವೆ ಕಾರ್ಯ ಕೈಗೊಂಡು ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ವಿವಿಧ ಇಲಾಖೆಯಿಂದ ದೊರೆಯುವ ಸೌಲಭ್ಯ ಒದಗಿಸುವ ಕಾರ್ಯವಾಗಬೇಕು. ದಿವ್ಯಾಂಗರಿಗಾಗಿಯೇ ವಿಶೇಷವಾದ ಸೌಲಭ್ಯಗಳಿದ್ದು, ಅವುಗಳನ್ನು ದೊರೆಕಿಸುವಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳು ಸಿದ್ಧರಿದ್ದೇವೆ. ಇವುಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.ರಾಷ್ಟ್ರೀಯ ವಯೋಶ್ರೀ ಯೋಜನೆ ಅಡಿಯಲ್ಲಿ ಹಿರಿಯ ನಾಗರಿಕರಿಗೂ ಸಹ ಸಾಧನ ಸಲಕರಣೆ ನೀಡಲಾಗುತ್ತಿದೆ. ವೈಜ್ಞಾನಿಕವಾಗಿ ತಯಾರಿಸಲ್ಪಟ್ಟ ಸಾಧನ ಸಲಕರಣೆಗಳು ಉಪಯುಕ್ತವಾಗಲಿವೆ. ಇವುಗಳ ಬಳಕೆಯಿಂದ ಸಾಮಾನ್ಯ ಜನರ ಹಾಗೆಯೇ ತಾವು ಸಹ ಮುಖ್ಯವಾಹಿನಿಗೆ ಬರಬಹುದಾಗಿದೆ. ಅಲಿಂಕೋ ಸಂಸ್ಥೆಯಿಂದ ನೀಡಲಾಗಿರುವ ಸಲಕರಣೆಗಳನ್ನು ಒಳ್ಳೆಯ ರೀತಿಯಿಂದ ಇಟ್ಟುಕೊಳ್ಳಬೇಕು. ಇದರಿಂದ ಅವುಗಳ ಬಳಕೆ ಮೂಲಕ ಸಮಾಜದಲ್ಲಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾತನಾಡಿ, ವಿಕಲಚೇತನರಿಗೆ ಅಗತ್ಯಕ್ಕನುಗುಣವಾಗಿ ಕೇಂದ್ರ ಸರಕಾರ ಅಲಿಂಪೋ ಸಂಸ್ಥೆಯ ಮೂಲಕ 800ಕ್ಕೂ ಅಧಿಕ ಜನರಿಗೆ ವಿವಿಧ ಸಾಧನ ಸಲಕರಣೆ ವಿತರಣೆ ಮಾಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಜಿಲ್ಲಾ ವಿತಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಾಂಗರಿಗೆ ವಿವಿಧ ಸಾಧನ ಸಲಕರೆಗಳನ್ನು ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರಭಾಕರ ಕೆ, ಅಲಿಂಕೋ ಸಂಸ್ಥೆಯ ಮುಖ್ಯಸ್ಥ ಅಂಕಿತ ಸೇರಿದಂತೆ ಇತರರು ಉಪಸ್ಥಿತರಿದ್ದರು.ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ದಿವ್ಯಾಂಗರಿಗೆ ವಿವಿಧ ಸಾಧನೆ ಸಲಕರಣೆ ನೀಡಿದ್ದು, ಅವುಗಳ ಸದುಪಯೋಗ ಪಡೆದುಕೊಂಡು ಸಾಮಾನ್ಯ ಜನರಂತೆ ಸಮಾಜದಲ್ಲಿ ಮುಂದೆ ಬರಬೇಕು. ಅಂಗವಿಕಲರಿಗೆ ದೇವರು ಕೊರತೆಯ ಜೊತೆಗೆ ಅದ್ಬುತವಾದ ಶಕ್ತಿ ಕೊಟ್ಟಿರುತ್ತಾನೆ. ಅದನ್ನು ಗುರುತಿಸಿಕೊಂಡು ಮುಖ್ಯವಾಹಿನಿಗೆ ಬರಬೇಕು.
ಎಚ್.ವೈ. ಮೇಟಿ ಶಾಸಕರು, ಬಿಟಿಡಿಎ ಅಧ್ಯಕ್ಷ