ಕನ್ನಡಪ್ರಭ ವಾರ್ತೆ ಶಿರಾ
ಜನರೊಂದಿಗೆ ಬೆರೆತು ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡುವುದೇ ನಿಜವಾದ ಜನನಾಯಕರ, ಜನಪ್ರತಿನಿಧಿಗಳ ಕರ್ತವ್ಯ ಎಂದು ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸಿ, ಬಿ, ಸುರೇಶ್ ಬಾಬು ಹೇಳಿದರು.ಮಂಗಳವಾರ ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾರಗೊಂಡನಹಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುಕ್ಕಾಪಟ್ಟಣ ಹೋಬಳಿ ಹಲವು ರಸ್ತೆಗಳು ತೀರ ಹದಗೆಟ್ಟು ಹೋಗಿವೆ. ಪ್ರತಿ ಬಾರಿ ಜನ ಸಂಪರ್ಕ ಸಭೆ ಕೈಗೊಂಡಾಗ ರೈತರು ಪದೇಪದೆ ಇದೇ ವಿಚಾರವಾಗಿ ಮನವಿ ಮಾಡಿಕೊಳ್ಳುತ್ತಿದ್ದರು. ಈ ನಿಟ್ಟಿನಲ್ಲಿ ಸುಮಾರು ೩೨ ಕೋಟಿ ವೆಚ್ಚದಲ್ಲಿ ಹಾಗೂ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಇನ್ನುಳಿದ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು. ಹೂಯಿಲ್ ದೊರೆ ಮಣ್ಣಮ್ಮ ದೇವಸ್ಥಾನದ ರಸ್ತೆ ಕಾಮಗಾರಿ ವಿಳಂಬ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಾಸಕರು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.೩೨ಕೋಟಿ ರು. ಕಾಮಗಾರಿ: ಬುಕ್ಕಾಪಟ್ಟಣ ಹೋಬಳಿ ತಾವರೆಕೆರೆ ರಸ್ತೆಯಿಂದ ನೇರಳಗುಡ್ಡ ಗ್ರಾಮದವರೆಗೆ ೨೫ ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಗಾಣದ ಹುಣಸೆ ರಸ್ತೆಯಿಂದ ಕುರುಬರಹಳ್ಳಿಯ ವರೆಗೆ ೨೫ ಲಕ್ಷ ರು. ವೆಚ್ಚದಲ್ಲಿ ರಸ್ತೆ ನಿರ್ಮಾಣ, ಹೊಸಕೆರೆ - ಹೂಯಿಲ್ ದೊರೆ ಮಾರ್ಗದ ಮಾರಗೊಂಡನಹಳ್ಳಿ ತುಪ್ಪದ ಕೋಣ ಮಣ್ಣಮ್ಮನ ದೇವಸ್ಥಾನದವರೆಗೆ ೫೦ ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಹೊನ್ನೇನಹಳ್ಳಿ- ಕುಣಗಾಟನಹಳ್ಳಿ -ನಿಂಬೆ ಮರದ ಹಳ್ಳಿ ಮಾರ್ಗದ ರಸ್ತೆ ೭೦ ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ, ಕಂಚಿಗಾನಹಳ್ಳಿ ಕೆ ವಡ್ಡರಹಟ್ಟಿ ಜಂಕ್ಷನ್ ರಸ್ತೆ ೫೫ ಲಕ್ಷ ರು. ವೆಚ್ಚದಲ್ಲಿ ಅಭಿವೃದ್ಧಿ, ಬೆಂಚೆಯಿಂದ ತಾಲೂಕು ಗಡಿವರೆಗೆ ೧೨.೫ ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ, ಗೋಪಾಲದೇವರಹಳ್ಳಿ ಗ್ರಾಮದಿಂದ ರಾಜ್ಯ ಹೆದ್ದಾರಿವರೆಗೆ ೧೨.೫ ಲಕ್ಷ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಮಾಜಿ ಸದಸ್ಯರಾದ ಹೋನ್ನೇಶಪ್ಪ, ರಂಗನಾಥಪ್ಪ, ಮುಖಂಡರಾದ ಚಂದ್ರಾನಾಯ್ಕ, ರಾಮಲಿಂಗಾಪುರ ಸತ್ಯನಾರಾಯಣ, ಹೊಸ ಪಾಳ್ಯ ಸತ್ಯನಾರಾಯಣ, ಶಾಂತಕುಮಾರ್, ಲೋಕೇಶ್, ಮುದ್ದು ಗಣೇಶ್ , ಜಾನಕಲ್ ಗೋವಿಂದರಾಜು, ಪಿಡಿಒಗಳಾದ ಕನಕಪ್ಪ ಹನುಮಪ್ಪ ಮೇಲಸಕ್ರಿ, ಮೊಹಮ್ಮದ್ ಕೌಸರ್, ಮಾರಣ್ಣ, ಸತೀಶ್ , ಪ್ರಬಣ್ಣ, ಕಂಟ್ರಾಕ್ಟರ್ ನಾರಾಯಣಪ್ಪ, ಲಕ್ಷ್ಮಿರಂಗನಾಥ್, ಪುಟ್ಟರಾಜು, ಹೋಬಳಿ ಮುಖಂಡರು ಅಭಿಮಾನಿಗಳು ಕಾರ್ಯಕರ್ತರು ಸಾರ್ವಜನಿಕರು ಹಾಜರಿದ್ದರು.