ತುಳು ಚಳುವಳಿ ಕನ್ನಡದ ವಿರುದ್ಧ ಚಳುವಳಿ ಅಲ್ಲ: ಮುರಳೀಧರ ಉಪಾಧ್ಯ

| Published : Sep 25 2024, 12:59 AM IST

ತುಳು ಚಳುವಳಿ ಕನ್ನಡದ ವಿರುದ್ಧ ಚಳುವಳಿ ಅಲ್ಲ: ಮುರಳೀಧರ ಉಪಾಧ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ತುಳುವ ಚಳುವಳಿಯ ಹರಿಕಾರರಾದ ಎಸ್. ಯು. ಪಣಿಯಾಡಿ, ಪೊಳಲಿ ಸೀನಪ್ಪ ಹೆಗ್ಡೆ, ನಾರಾಯಣ ಕಿಲ್ಲೆ ಮೊದಲಾದವರು ಪ್ರಾರಂಭಿಸಿದ ತುಳುವ ಮಹಾಸಭೆಯ 96ನೇ ವರ್ಷದ ನೆನಪು ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ತುಳು ಚಳುವಳಿಯು ಕನ್ನಡದ ವಿರುದ್ಧ ಅಲ್ಲ, ಅದು ತುಳುನಾಡ ಜನರ ಆತ್ಮನಿರ್ಭರ ಚಳುವಳಿ ಎಂದು ಎಸ್.ಯು. ಪಣಿಯಾಡಿ ಅವರು 1928 ಸೆಪ್ಟೆಂಬರ್ 23ರಂದು ತುಳುವ ಮಹಾಸಭೆ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಹೇಳಿದ್ದರು. ನಾವು ಕೂಡ ಇದೇ ಉದ್ದೇಶದಿಂದ ಕಾರ್ಯಪ್ರವೃತ್ತರಾದರೆ ತುಳುವರ ಸ್ವಾಭಿಮಾನವನ್ನು ಉಳಿಸಿ ಬೆಳೆಸಬಹುದು ಎಂದು ಮುರಳೀಧರ ಉಪಾಧ್ಯ ಹಿರಿಯಡ್ಕ ಅಭಿಪ್ರಾಯಪಟ್ಟರು.ಅವರು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ನಡೆದ ತುಳುವ ಚಳುವಳಿಯ ಹರಿಕಾರರಾದ ಎಸ್. ಯು. ಪಣಿಯಾಡಿ, ಪೊಳಲಿ ಸೀನಪ್ಪ ಹೆಗ್ಡೆ, ನಾರಾಯಣ ಕಿಲ್ಲೆ ಮೊದಲಾದವರು ಪ್ರಾರಂಭಿಸಿದ ತುಳುವ ಮಹಾಸಭೆಯ 96ನೇ ವರ್ಷದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು.ಈ ಕಾರ್ಯಕ್ರಮವನ್ನು ಆಯೋಜಿಸಿದ್ದ ಮಂಗಳೂರಿನ ತುಳುವರ್ಲ್ಡ್ ಫೌಂಡೇಶನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬಲ್ಯಾಯ, ತುಳುವ ಮಹಾಸಭೆಯ ಧ್ಯೇಯೋದ್ದೇಶಗಳನ್ನು ಈಡೇರಿಸುವ ಸಲುವಾಗಿ ಪ್ರಾದೇಶಿಕವಾಗಿ ಅಲ್ಲಲ್ಲಿ ತುಳುವ ಮಹಾಸಭೆ ಪರಸ್ಪರ ಸಹಾಯ ಗುಂಪುಗಳನ್ನು ಮಾಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.ತುಳುವ ಮಹಾಸಭೆಯ ಪ್ರಥಮ ಸದಸ್ಯತ್ವವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯರಾದ ಉದ್ಯಾವರ ನಾಗೇಶ್ ಕುಮಾರ್ ಅವರು ಹಿರಿಯ ತುಳು ಹೋರಾಟಗಾರ ಸಾಂಗ್ಲಿ ದಿವಾಕರ್ ಶೆಟ್ಟಿ ಅವರಿಗೆ ನೀಡಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದರು. ಹಾಗೆಯೇ ಚಂದ್ರಹಾಸ ದೇವಾಡಿಗ ಮೂಡುಬಿದಿರೆ, ಈಶ್ವರ್ ಚಿತ್ಪಾಡಿ, ಗಂಗಾಧರ್ ಕಿದಿಯೂರು, ಎಸ್.ಎ. ಕೃಷ್ಣಯ್ಯ ಮೊದಲಾದವರು ಸದಸ್ಯತನ ಸ್ವೀಕರಿಸಿ ಸಲಹೆ ಮಾರ್ಗದರ್ಶನಗಳನ್ನು ನೀಡಿದರು.ತುಳು ವರ್ಲ್ಡ್ ಫೌಂಡೇಶನ್ ನಿರ್ದೇಶಕ ಡಾ. ರಾಜೇಶ್ ಆಳ್ವ ಮಾತನಾಡಿ, ತುಳುವ ಮಹಾಸಭೆಯ ಶತಮಾನೋತ್ಸವ ವೇಳೆ 2028ರ ಸಂದರ್ಭದಲ್ಲಿ ಉಡುಪಿಯಲ್ಲಿ ವಿಶ್ವಮಟ್ಟದಲ್ಲಿ ತುಳುವ ಮಹಾಸಭೆಯನ್ನು ಮಾಡುವುದಾಗಿ ಈ ನಿಟ್ಟಿನಲ್ಲಿ ಈಗಲೇ ಕಾರ್ಯ ಪ್ರವೃತ್ತರಾಗಬೇಕೆಂದು ಹೇಳಿದರು.ಕಾರ್ಯಕ್ರಮದಲ್ಲಿ ತುಳುವರ್ಲ್ಡ್ ಫೌಂಡೇಶನ್ ಉಪಾಧ್ಯಕ್ಷೆ ತಾರಾ ಆಚಾರ್ಯ ಮತ್ತು ಸದಸ್ಯೆ ಯಶೋದಾ ಕೇಶವ್ ಉಪಸ್ಥಿತರಿದ್ದರು.