ತುಮಕೂರು: ಅಲೆಮಾರಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಗೆ ಪ್ರತಿಭಟನೆ

| Published : Feb 02 2024, 01:01 AM IST

ತುಮಕೂರು: ಅಲೆಮಾರಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಗೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ದಲಿತ ಹಾಗೂ ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕೆಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಗೇಟ್ ಬಳಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ತುಮಕೂರು

ಸುಮಾರು ವರ್ಷಗಳಿಂದ ಗುಡಿಸಲಿನಲ್ಲಿ ವಾಸ ಮಾಡುವ ದಲಿತ ಹಾಗೂ ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕೆಂದು ನಗರದ ಜಿಲ್ಲಾಧಿಕಾರಿಗಳ ಕಚೇರಿ ಗೇಟ್ ಬಳಿ ಪ್ರತಿಭಟನೆ ನಡೆಸಿ ಕೂಡಲೇ ಹಕ್ಕು ಪತ್ರ ವಿತರಣೆ ಮಾಡುವಂತೆ ಜಿಲ್ಲಾಧಿಕಾರಿಗಳು ಸಂಬಂಧಪಟ್ಟವರಿಗೆ ಸೂಚನೆ ನೀಡಬೇಕು ಎಂದು ರಸ್ತೆಗೆ ಅಡ್ಡಲಾಗಿ ನಿಂತು ಪ್ರತಿಭಟನೆ ನಡೆಸಿ ಒತ್ತಾಯಿಸಲಾಯಿತು.

ಪ್ರತಿಭಟನೆ ವೇಳೆ ಕರ್ನಾಟಕ ಮಹಾಜನ ಪರಿವಾರ ಸಮಿತಿಯ ರಾಜ್ಯಾಧ್ಯಕ್ಷ ಅಂಚಿಹಳ್ಳಿ ರಾಮಸ್ವಾಮಿ ಮಾತನಾಡಿ ಸುಮಾರು ವರ್ಷಗಳಿಂದ ಸಣ್ಣಪುಟ್ಟ ಗುಡಿಸಲುಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ದಲಿತ ಹಾಗೂ ಅಲೆಮಾರಿ ಸಮುದಾಯದ ಕುಟುಂಬಸ್ಥರು ಕೂಲಿ ಮಾಡಿ ಜೀವನ ಸಾಗಿಸುತ್ತಾ ಗುಡಿಸಿಲಿನಲ್ಲಿ ಜೀವನ ಸಾಗಿಸುತ್ತಿದ್ದು, ಮಳೆ ಬಂದರೆ ಸೋರುವುದು, ಮನೆಗಳಿಗೆ ನೀರು ನುಗ್ಗುವುದು ಸೇರಿದಂತೆ ಇತರೆ ಸಮಸ್ಯೆಗಳನ್ನ ಹೆದರಿಸುತ್ತಿದ್ದಾರೆ. ಸುಮಾರು 30- 40 ವರ್ಷಗಳಿಂದ ಇದೇ ರೀತಿಯ ಘಟನೆ ಜರುಗುತ್ತಿದ್ದರು ಜಿಲ್ಲಾಡಳಿತ ಅಥವಾ ಸ್ಥಳೀಯ ಆಡಳಿತಗಳು ಯಾವುದೇ ಪರಿಹಾರ ಕಲ್ಪಿಸಿಲ್ಲ ಬದಲಾಗಿ ವಾಸಿಸುವ ನಮ್ಮ ಸ್ಥಳಗಳಿಗೆ ಹಕ್ಕುಪತ್ರಗಳನ್ನು ವಿತರಿಸಿಲ್ಲ. ಹೀಗಾಗಿ ಕೂಡಲೇ ದಲಿತ ಹಾಗೂ ಅಲೆಮಾರಿ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡುವಂತೆ ಒತ್ತಾಯಿಸಿದರು.

ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ಸೀನಪ್ಪನಹಳ್ಳಿಯಲ್ಲಿ ಅಲೆಮಾರಿ ಜನಾಂಗದ ಪರಿಶಿಷ್ಟ ಜಾತಿಗೆ ಸೇರಿದ ಸಿಳ್ಳೆಕ್ಯಾತ ಜನಾಂಗಕ್ಕೆ ಸೇರಿದ ಸುಮಾರು 25 ರಿಂದ 30 ಕುಟುಂಬಗಳು ಗುಡಿಸಲು ಕಟ್ಟಿಕೊಂಡು ವಾಸಮಾಡುತ್ತಿದ್ದಾರೆ. ಅಲೆಮಾರಿ ಜನಾಂಗದವರು ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ಸುಮಾರು ಬಾರಿ ಹೋರಾಟ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಹಕ್ಕುಪತ್ರ ನೀಡಿರುವುದಿಲ್ಲ ಎಂದರು.

ತುಮಕೂರು ತಾಲೂಕು, ಕೋರಾ ಹೋಬಳಿ, ಎಂ. ಗೊಲ್ಲಹಳ್ಳಿಯಲ್ಲಿ 15-20 ದಲಿತ ಕುಟುಂಬದವರು ಗುಡಿಸಲು ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಇವರು ಕಡುಬಡವರಾಗಿದ್ದು, ಮಳೆ ಬಂದರೆ ಗುಡಿಸಲುಗಳಲ್ಲಿ ನೀರು ತುಂಬಿಕೊಳ್ಳುತ್ತದೆ. ಕೆಲವು ಬಾರಿ ಗುಡಿಸಲಿಗೆ ಬೆಂಕಿ ಬಿದ್ದು, ಗುಡಿಸಲುಗಳು ಸುಟ್ಟುಹೋಗಿವೆ. ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಾ ಜೀವನ ಮಾಡುತ್ತಿದ್ದಾರೆ. ಆದರೆ ಯಾವುದೇ ಅಧಿಕಾರಿಗಳು ಇತ್ತಕಡೆ ತಿರುಗಿ ನೋಡುತ್ತಿಲ್ಲ ಎಂದಿದ್ದಾರೆ.

ಪ್ರತಿಭಟನಾಕಾರರ ಮನವಿಯನ್ನು ಅಪರ ಜಿಲ್ಲಾಧಿಕಾರಿ ಶಿವಾನಂದ್ ಬಿ ಕರಾಳೆ ಅವರು ಸ್ವೀಕರಿಸಿ ಸೂಕ್ತ ಕ್ರಮದ ಭರವಸೆ ನೀಡಿದರು. ಸಂದರ್ಭದಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷ ರಾಜಶೇಖರ್‌, ಜಿಲ್ಲಾಧ್ಯಕ್ಷ ಲವ, ಡಿಎಸ್ಎಸ್ ರಾಜ್ಯ ಮುಖಂಡರಾದ ಗೋಪಾಲ್, ಹನುಮಂತರಾಯಪ್ಪ, ಡಿಎಸ್ಎಸ್ ಜಿಲ್ಲಾಧ್ಯಕ್ಷ ಲಕ್ಷ್ಮಮ್ಮ , ಕುಮಾರ್‌, ಜಿಲ್ಲಾ ಕಲಾತಂಡದ ಲಕ್ಷ್ಮಣ್, ಕಮಲಮ್ಮ ಸೇರಿದಂತೆ ಗೊಲ್ಲಹಳ್ಳಿ ಸೀನಪ್ಪನಹಳ್ಳಿ ಭಾರತಿ ನಗರದ 22ನೇ ವಾರ್ಡಿನ ಹಕ್ಕು ಪತ್ರ ವಂಚಿತರು ಉಪಸ್ಥಿತರಿದ್ದರು.