ಕರ್ನಾಟಕದ ತುಮಕೂರು ಮೂಲದ 22 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾಗಿದ್ದಾರೆ.

ನ್ಯೂಯಾರ್ಕ್‌: ಕರ್ನಾಟಕದ ತುಮಕೂರು ಮೂಲದ 22 ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಯೊಬ್ಬರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾಗಿದ್ದಾರೆ. ಯುಸಿ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಕೇತ್‌ ಶ್ರೀನಿವಾಸಯ್ಯ ನಾಪತ್ತೆಯಾದವರು.

ಪಾಸ್‌ಪೋರ್ಟ್‌, ಲ್ಯಾಪ್‌ಟಾಪ್‌ ಇತ್ಯಾದಿಗಳಿದ್ದ ಅವರ ಬ್ಯಾಗ್‌ ಪಾರ್ಕ್‌ ಹಿಲ್ಸ್‌ ಎಂಬಲ್ಲಿರುವ ಲೇಕ್‌ ಅಂಝಾ ಕೆರೆಯ ಬಳಿ ಪತ್ತೆಯಾಗಿದೆ. ಅವರು ಅಪಾಯದಲ್ಲಿರಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಅಧಿಕಾರಿಗಳು, ಹುಡುಕಾಟ ಆರಂಭಿಸಿದ್ದಾರೆ.

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಕೇತ್‌ ಕಾಣೆಯಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ‘ವಿದ್ಯಾರ್ಥಿಯ ಪತ್ತೆಗಾಗಿ ನಾವು ಅವರ ಕುಟುಂಬದೊಂದಿಗೆ ಸಂಪರ್ಕದಲ್ಲಿದೆ. ಅಂತೆಯೇ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಹುಡುಕಾಟ ನಡೆಸುತ್ತಿದ್ದೇವೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಸಾಕೇತ್‌ ಕೊನೆಯ ಬಾರಿ ಡ್ವೈಟ್ ವೇನ 1700 ಬ್ಲಾಕ್‌ನಲ್ಲಿ ಫೆ.9ರಂದು ಕಂಡುಬಂದಿದ್ದರು. ಭಾನುವಾರದ ವರೆಗೆ ಪರಿವಾರದವರೊಂದಿಗೆ ಸಂಪರ್ಕದಲ್ಲಿದ್ದ ಅವರು, ಸೋಮವಾರ ರಾತ್ರಿ ತಮ್ಮ ತಾಯಿಗೆ ಕರೆ ಮಾಡಿದ್ದರು. ಅವರು ಮರಳಿ ಕರೆ ಮಾಡಿದಾಗ ಸಾಕೇತ್‌ ಅದನ್ನು ಸ್ವೀಕರಿಸಲಿಲ್ಲ. ಇದರಿಂದ ಅವರ ಮನೆಯವರಲ್ಲಿ ಆತಂಕ ಶುರುವಾಗಿದೆ. ಅತ್ತ ಸಾಕೇತ್‌ರೊಂದಿಗೆ ವಾಸವಿದ್ದ ಬನೀತ್‌ ಸಿಂಗ್‌ ಕೂಡ ಅವರ ನಾಪತ್ತೆ ಬಗ್ಗೆ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್‌ ಮಾಡಿ ನೆರವು ಯಾಚಿಸಿದ್ದಾರೆ. ಅನಿವಾಸಿ ಭಾರತೀಯರು ಕೂಡ ಸಾಕೇತ್‌ ಪತ್ತೆಗಾಗಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

ಮೂಲತಃ ತುಮಕೂರಿನವರು:

ಸಾಕೇತ್‌ ಮೂಲತಃ ತುಮಕೂರಿನವರು. ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರೈಸಿ, ನಂತರ ಪ್ರತಿಷ್ಠಿತ ಬೇಸ್ ಪಿಯು ಕಾಲೇಜಿನಲ್ಲಿ ಪಿಯು ಪದವಿ ಪಡೆದರು. ನಂತರ ಚೆನ್ನೈಗೆ ತೆರಳಿದ ಅವರು, ಕಳೆದ ವರ್ಷವಷ್ಟೇ ಮದ್ರಾಸ್‌ ಐಐಟಿಯಿಂದ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿಟೆಕ್‌ ಪದವಿ ಪಡೆದು ಅಮೆರಿಕಕ್ಕೆ ತೆರಳಿದ್ದರು. ಪ್ರಸ್ತುತ ಪ್ರಾಡಕ್ಟ್ ಡೆವಲಪ್‌ಮೆಂಟ್ ಪ್ರೋಗ್ರಾಮ್ ವಿಷಯದಲ್ಲಿ ಸ್ನಾತಕೋತ್ತರ ಪದವಿಗಾಗಿ ಅಧ್ಯಯನ ಮಾಡುತ್ತಿದ್ದರು.