33 ಕ್ರಸ್ಟ್‌ಗೇಟ್‌ ದುರಸ್ತಿ, ಗೇಟ್‌ಗಳಿಗೆ ಚೈನ್‌ ಅಳವಡಿಕೆ ಕಾರ್ಯ ಮುಗಿಯುವ ಹಂತ ತಲುಪಿದೆ.

ಸಿ.ಕೆ. ನಾಗರಾಜ

ಹೊಸಪೇಟೆ: ತುಂಗಭದ್ರಾ ಜಲಾಶಯದ ನೂತನ 33 ಕ್ರಸ್ಟ್‌ಗೇಟ್‌ ದುರಸ್ತಿ, ಗೇಟ್‌ಗಳಿಗೆ ಚೈನ್‌ ಅಳವಡಿಕೆ ಕಾರ್ಯ ಮುಗಿಯುವ ಹಂತ ತಲುಪಿದೆ. ಜೂ.25ರಂದು ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮುಖ್ಯಮಂತ್ರಿಗಳು, ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಜಲಾಶಯವು ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ.

ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬಹುದೊಡ್ಡ ಮಟ್ಟದ ಐತಿಹಾಸಿಕ ಕಾರ್ಯಕ್ರಮ ನಡೆಸಲಾಗುತ್ತಿದೆ. ಅದರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ, ಕೆಲ ಸಚಿವರು, ಹಿರಿಯ ಅಧಿಕಾರಿಗಳು, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್‌. ಪಟೇಲ್‌ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಈ ಐತಿಹಾಸಿಕ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಲು ಸಿಎಂ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಗಣ್ಯರು ಆಗಮಿಸುವುದರಿಂದ ಹೆಲಿಪ್ಯಾಡ್‌ಗಳ ಸಿದ್ಧತೆ ನಡೆದಿದೆ. ಸರ್ಕಾರದ ಹಿರಿಯ ಅಧಿಕಾರಿಗಳು, ವಿವಿಐಪಿಗಳು, ರಾಜ್ಯದ ವಿವಿಧ ಮಂತ್ರಿಗಳು, ಶಾಸಕರು ಸೇರಿದಂತೆ ಗಣ್ಯವ್ಯಕ್ತಿಗಳು ಏಕಕಾಲಕ್ಕೆ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಯಾವುದೇ ಸಮಸ್ಯೆಗಳು ಉಂಟಾಗದಂತೆ ಕ್ರಮ ವಹಿಸಲಾಗುತ್ತಿದೆ. ಬೃಹತ್‌ ವೇದಿಕೆ ನಿರ್ಮಾಣ ಸೇರಿದಂತೆ ಇತರೆ ಕಾರ್ಯಗಳಲ್ಲಿ ವಿಜಯನಗರ, ಕೊಪ್ಪಳ ಜಿಲ್ಲೆಯ ಅಧಿಕಾರಿಗಳು ನಿರತರಾಗಿದ್ದಾರೆ.

ರಸ್ತೆಗಳ ದುರಸ್ತಿ:

ಜಲಾಶಯದ ಕ್ರಸ್ಟ್‌ಗೇಟ್‌ಗಳಿಗೆ ಈಗಾಗಲೇ ಬಣ್ಣ ಹಚ್ಚಲಾಗಿದೆ. ಜಲಾಶಯದ ಗೋಡೆಗೆ ಸುಣ್ಣಬಣ್ಣ ಹಚ್ಚುವ ಕಾರ್ಯ ಮಂಗಳವಾರದಿಂದ ಆರಂಭವಾಗಲಿದೆ. ಹೊಸಪೇಟೆಯಿಂದ ಮತ್ತು ಕೊಪ್ಪಳದಿಂದ ತುಂಗಭದ್ರಾ ಜಲಾಶಯಕ್ಕೆ ಬರುವ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಲಾಗುತ್ತಿದೆ.

ಜಲಾಶಯದ 19ನೇ ಕ್ರಸ್ಟ್‌ ಗೇಟ್‌ನ ಚೈನ್‌ ತುಂಡಾಗಿ 2024ರ ಆಗಸ್ಟ್‌ 10ರಂದು ಕಿತ್ತುಹೋಗಿತ್ತು. ತಕ್ಷಣವೇ ಮೂರು ರಾಜ್ಯಗಳು ಎಚ್ಚೆತ್ತು ಕ್ರಸ್ಟ್‌ ಗೇಟ್‌ ಬದಲು ಸಾಫ್ಟ ಲಾಗ್‌ ಗೇಟ್‌ ಅಳವಡಿಸಿ ದುರಸ್ತಿಗೊಳಿಸಲಾಗಿತ್ತು. ಇದು ಉಳಿದ ಕ್ರಸ್ಟ್‌ಗಳಿಗೆ ಎಚ್ಚರಿಕೆ ಎಂದು ಭಾವಿಸಿ ತಜ್ಞರ ತಂಡದ ಸಲಹೆಯಂತೆ ಜಲಾಶಯದ 33 ಕ್ರಸ್ಟ್‌ ಗೇಟ್‌, ಅವುಗಳ ಚೈನ್‌ ಅಳವಡಿಸುವಿಕೆಗೆ ಸುಮಾರು ₹50.6 ಕೋಟಿ ವೆಚ್ಚ ಮಾಡಿ ಜಲಾಶಯವನ್ನು ಅಧುನಿಕರಣಗೊಳಿಸಲಾಗಿದೆ.

ಕರ್ನಾಟಕದ ವಿಜಯನಗರ, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳು, ಆಂಧ್ರಪ್ರದೇಶದ ಕರ್ನೂಲ್‌, ಅನಂತಪುರ, ಕಡಪ ಜಿಲ್ಲೆ, ತೆಲಂಗಾಣದ ಮೆಹಬೂಬ್‌ನಗರ ಜಿಲ್ಲೆ ಸೇರಿದಂತೆ ಮೂರು ರಾಜ್ಯದ 17.33 ಲಕ್ಷ ಹೆಕ್ಟೇರ್‌ ಪ್ರದೇಶದ ಭೂಮಿಗೆ ನೀರಾವರಿ ವ್ಯವಸ್ಥೆಯನ್ನು ಜಲಾಶಯದಿಂದ ರೈತರು ಪ್ರಯೋಜನ ಪಡೆಯುತ್ತಿದ್ದಾರೆ.

ತುಂಗಭದ್ರಾ ಜಲಾಶಯದ ನೂತನ 33 ಕ್ರಸ್ಟ್‌ಗೇಟ್‌ಗಳಿಗೆ ನೂತನ ಚೈನ್‌ ಅಳವಡಿಸುವ ಕಾರ್ಯ ಮುಕ್ತಾಯದ ಹಂತಕ್ಕೆಬಂದಿದೆ. ಜೂ.25ರಂದು ಜಲಾಶಯದ ನೂತನ ಕ್ರಸ್ಟ್‌ಗೇಟ್‌ಗಳನ್ನು ಮೂರು ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಲೋಕಾರ್ಪಣೆಗೊಳಿಸಲಿದ್ದಾರೆ. ಜಲಾಶಯದಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ತುಂಗಭದ್ರಾ ಮಂಡಳಿ ಕಾರ್ಯದರ್ಶಿ ಒಆರ್‌ಕೆ ರೆಡ್ಡಿ.