ಸಾರಾಂಶ
ಶಿರಳಗಿಯ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತೀ ದೀಪ ಬೆಳಗಿಸುವ ಮೂಲಕ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಸಿದ್ದಾಪುರ: ಪಟ್ಟಣದ ಹೊಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಓಂ ಶಾಂತಿ ಭವನದಲ್ಲಿ ಸೋಮವಾರದಿಂದ ಮೂರು ದಿನಗಳ ಶಿವ ದರ್ಶನ ಪ್ರವಚನ ಮಾಲಿಕೆ ಹಾಗೂ ಶ್ರೀಮದ್ ಭಗವದ್ಗೀತೆಯ ಸಂದೇಶ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ದಿವ್ಯದರ್ಶನ ಕಾರ್ಯಕ್ರಮ ಆರಂಭವಾಗಿದೆ. ಶಿರಳಗಿಯ ಚೈತನ್ಯ ರಾಜಾರಾಮ ಆಶ್ರಮದ ಬ್ರಹ್ಮಾನಂದ ಭಾರತೀ ದೀಪ ಬೆಳಗಿಸುವ ಮೂಲಕ ದ್ವಾದಶ ಜ್ಯೋತಿರ್ಲಿಂಗಗಳ ಪ್ರದರ್ಶನಕ್ಕೆ ಚಾಲನೆ ನೀಡಿದರು. ಬಳಿಕ ಬ್ರಹ್ಮ, ವಿಷ್ಣು, ಮಹೇಶ್ವರ ಕುರಿತಾದ ಅರ್ಥಪೂರ್ಣ ದೃಷ್ಟಾಂತದೊಂದಿಗೆ, ಶಿವ ದರ್ಶನದ ಕುರಿತು ಪ್ರವಚನ ನೀಡಿದರು.
ಶ್ರೀ ಶೃಂಗೇರಿ ಶಂಕರಮಠದ ಧರ್ಮದರ್ಶಿ ವಿಜಯ ಹೆಗಡೆ ದೊಡ್ಡಮನೆ, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೆಸರ ಹಾಗೂ ರಾಜಯೋಗಿನಿ ಬಿ.ಕೆ. ವೀಣಾಜಿ ಮೂರು ದಿನಗಳ ಪ್ರವಚನ ಮಾಲೆ ಉದ್ಘಾಟಿಸಿದರು. ರಾಜಯೋಗಿನಿ ಬಿ.ಕೆ. ವೀಣಾಜಿ ಭಗವದ್ಗೀತೆ ಬದುಕುವ ಕಲೆಯನ್ನು ಕಲಿಸುತ್ತದೆ ಎಂದು ಭಗವದ್ಗೀತೆಯ ಮಹತ್ವ ವಿವರಿಸಿದರು. ವಿಜಯ ಹೆಗಡೆ ದೊಡ್ಮನೆ, ಆರ್.ಎಂ. ಹೆಗಡೆ ಬಾಳೇಸರ ಶುಭಾಶಯಗಳನ್ನು ತಿಳಿಸಿದರು.ಶ್ರೀಯಾ ಬೇಟಗೇರಿ ಪ್ರದರ್ಶನ ನೀಡಿದರು. ಸುವರ್ಣಾ ಹೆಗಡೆ ಸ್ವಾಗತಿಸಿದರು. ಬಿ.ಕೆ. ದೇವಕಿ ಕಾರ್ಯಕ್ರಮ ನಿರೂಪಿಸಿದರು.
ಆ ದಿನ ಬೆಳಗ್ಗೆ ಪಟ್ಟಣದ ರವೀಂದ್ರನಗರದ ಶ್ರೀ ಗಂಗಾಂಬಿಕಾ ದೇವಾಲಯದಿಂದ ಶಿವಲಿಂಗಗಳ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಹೊಸೂರಿನ ಓಂ ಶಾಂತಿ ಭವನದಲ್ಲಿ ಪೂರ್ಣಗೊಂಡಿತು.ಸಿದ್ದಾಪುರದ ಓಂ ಶಾಂತಿ ಭವನದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಹಾಗೂ ಪ್ರವಚನ ಕಾರ್ಯಕ್ರಮಕ್ಕೆ ಬ್ರಹ್ಮಾನಂದ ಭಾರತೀ ಶ್ರೀಗಳು ಹಾಗೂ ಇತರ ಗಣ್ಯರು ಚಾಲನೆ ನೀಡಿದರು.