ಸಾರಾಂಶ
ಸಕಲೇಶಪುರ: ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಕಂಟೇನರ್ ವಾಹನವನ್ನು ಬಜರಂಗದಳದ ಕಾರ್ಯಕರ್ತರು ತಡೆದು ಪೊಲಿಸರಿಗೆ ಒಪ್ಪಿಸಿದ ಘಟನೆ ಭಾನುವಾರ ರಾತ್ರಿ ಸಕಲೇಶಪುರ ಬೈಪಾಸ್ ರಸ್ತೆಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕಾರ್ಯಾಚರಣೆಯಲ್ಲಿದ್ದ ಬಜರಂಗದಳ ಕಾರ್ಯಕರ್ತರು ಹಾಸನದಿಂದ ಬೈಪಾಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ವೇಗವಾಗಿ ಬಂದ ಕಂಟೇನರ್ ವಾಹನವನ್ನು ಬೆನ್ನಟ್ಟಿ ನಗರದ ಬೈಪಾಸ್ ರಸ್ತೆ ಟೊಲ್ ಗೇಟ್ ಬಳಿ ಪೋಲಿಸರ ಸಹಯೋಗದಲ್ಲಿ ತಡೆದಿದ್ದಾರೆ. ಕಂಟೇನರ್ ಪರಿಶೀಲಿಸಲಾಗಿ ವಾಹನದೊಳಗೆ ಮೇಲ್ನೋಟಕ್ಕೆ ಎಮ್ಮೆಗಳು ಇದ್ದಂತೆ ಕಂಡರು ಪೊಲೀಸರು ಪರಿಶೀಲನೆ ಮಾಡಿದಾಗ ಬರೋಬ್ಬರಿ 26 ಗೋವುಗಳನ್ನು ಅಮಾನುಷವಾಗಿ ತುಂಬಿರುವುದು ಕಂಡುಬಂದಿದೆ. ಹಿಂಸಾತ್ಮಕವಾಗಿದ್ದ ಗೋವುಗಳನ್ನು ರಾತ್ರೋರಾತ್ರಿ ಬಜರಂಗದಳ ಕಾರ್ಯಕರ್ತರ ನೆರವಿನೊಂದಿಗೆ ಕಂಟೇನರ್ ವಾಹನದೊಳಗಿನಿಂದ ಇಳಿಸಿ ಸೋಮವಾರ ಬೆಳಗ್ಗೆ ಇನ್ನೊಂದು ವಾಹನ ಮಾಡಿ ಅರಸೀಕೆರೆಯ ಗೋಶಾಲೆಗೆ ಕಳುಹಿಸಿಕೊಡಲಾಗಿದೆ. ಸಕಲೇಶಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
---