ಈ ಪ್ರಾಚ್ಯಾವಶೇಷಗಳು ಒಂದು ಸುಂದರವಾದ ಕಲಾತ್ಮಕತೆಯಿಂದ ಕೂಡಿದ ದೇವಾಲಯದ ಬಿಡಿ ಭಾಗಗಳಾಗಿವೆ.
ಗದಗ: ತಾಲೂಕಿನ ಐತಿಹಾನಿಕ ಸ್ಮಾರಕಗಳ ಬೀಡು ಲಕ್ಕುಂಡಿ ಗ್ರಾಮದ ದುರ್ಗಾದೇವಿ ಕೆರೆಯಲ್ಲಿ ಎರಡು ಹೊಯ್ಸಳ ಕಾಲದ ಪ್ರಾಚ್ಯಾವಶೇಷಗಳು ದೊರೆತಿವೆ.
ಈ ಪ್ರಾಚ್ಯಾವಶೇಷಗಳು ಒಂದು ಸುಂದರವಾದ ಕಲಾತ್ಮಕತೆಯಿಂದ ಕೂಡಿದ ದೇವಾಲಯದ ಬಿಡಿ ಭಾಗಗಳಾಗಿವೆ. ಎರಡು ಭಾಗಗಳಲ್ಲೂ ವಾದ್ಯ ನುಡಿಸುತ್ತಿರುವ ಪುರುಷ ಮತ್ತು ನೃತ್ಯನಿರತ ತ್ರಿಭಂಗಿಯಲ್ಲಿರುವ ಸ್ತ್ರೀಯ ಶಿಲ್ಪಗಳಾಗಿವೆ. ಒಂದು ಶಿಲ್ಪದಲ್ಲಿ ಪುರುಷನು ಮದ್ದಳೆಯನ್ನು ಬಾರಿಸುತ್ತಿದ್ದು, ಅಲಂಕೃತಳಾದ ಸ್ತ್ರೀಯು ನೃತ್ಯ ಮಾಡುತ್ತಿದ್ದರೆ, ಎರಡನೆಯ ಭಾಗದಲ್ಲಿ ಪುರುಷ ವೇಣುವಾದನದಲ್ಲಿ ತಲ್ಲೀನನಾಗಿದ್ದಾನೆ.ಮಹಿಳೆಯು ನೃತ್ಯ ನಿರತಳಾಗಿ ನೃತ್ಯ ಸಂಗೀತ ಎರಡರಲ್ಲೂ ಪರಿಣತಳು ಎಂಬುದನ್ನು ತಿಳಿಸುತ್ತದೆ. ಈ ಎರಡು ಪ್ರಾಚ್ಯಾವಶೇಷಗಳ ಭಾಗಗಳನ್ನು ಗಮನಿಸಿದಾಗ ಈ ಶಿಲ್ಪಗಳ ಮೇಲೆ ಹೊಯ್ಸಳರ ಶೈಲಿಯ ನಿಚ್ಚಳ ಪ್ರಭಾವವಿರುವುದನ್ನು ಕಾಣಬಹುದು. ಪುರುಷನ ಮೇಲ್ವಸ್ತ್ರ, ಸ್ತ್ರೀಯರ ಉಡುಪು, ಅಲಂಕೃತವಾದ ಕೆತ್ತನೆ ಹೊಂದಿರುವುದಲ್ಲದೆ ವಿಶಿಷ್ಟ ಕೇಶವಿನ್ಯಾಸವನ್ನು ಶಿಲ್ಪಿ ಮೂಡಿಸಿದ್ದಾನೆ. ಇದು ಯಾವುದೋ ಅತ್ಯುತ್ಕೃಷ್ಟ ದೇವಾಲಯದ ಬಿಡಿ ಭಾಗವಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಲಕ್ಕುಂಡಿ ಇತಿಹಾಸ ಬಿಂಬಿಸುವ ಲೋಗೋ ಆಹ್ವಾನ
ಗದಗ: ಲಕ್ಕುಂಡಿ ಗ್ರಾಮವು ತನ್ನ ಶ್ರೀಮಂತ ಇತಿಹಾಸ, ವೈಭವಮಯ ಸಂಸ್ಕೃತಿ ಮತ್ತು ಅನನ್ಯ ಪರಂಪರೆಯ ಮೂಲಕ ರಾಜ್ಯದ ಪ್ರಮುಖ ಪಾರಂಪರಿಕ ಕೇಂದ್ರವಾಗಿದ್ದು, ನವಶಿಲಾಯುಗದಿಂದ ಇತ್ತೀಚಿನ ವರಗಿನ ಪರಂಪರೆಯನ್ನು ಪ್ರತಿಬಿಂಬಿಸುವ ವಿಶೇಷ ಲೋಗೋವನ್ನು ವಿನ್ಯಾಸಗೊಳಿಸಲು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ರಾಜ್ಯ ಮಟ್ಟದಲ್ಲಿ ಕಲಾವಿದರಿಂದ ಲೋಗೋವನ್ನು ವಿನ್ಯಾಸಗೊಳಿಸಲು ಆಹ್ವಾನಿಸಲಾಗಿದೆ.ಆಸಕ್ತ ಕಲಾವಿದರು ಲಕ್ಕುಂಡಿಯ ಐತಿಹಾಸಿಕ ಮಹತ್ವ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಪರಂಪರೆಯ ವೈಶಿಷ್ಟ್ಯಗಳನ್ನು ಒಳಗೊಂಡಂತೆ ಸೃಜನಾತ್ಮಕ ಹಾಗೂ ಅರ್ಥಪೂರ್ಣ ಲೋಗೋ ವಿನ್ಯಾಸಗಳನ್ನು ಸಲ್ಲಿಸಬಹುದು.ಲೋಗೋ ವಿನ್ಯಾಸಗಳನ್ನು JPEG ಹಾಗೂ PDF ಮಾದರಿಯಲ್ಲಿ ತಯಾರಿಸಿ lakkundipradhikara@gmail.com ಇಮೇಲ್ ವಿಳಾಸಕ್ಕೆ ಕಳುಹಿಸಬೇಕು. ಒಬ್ಬ ಕಲಾವಿದ ಗರಿಷ್ಠ 3 ಲೋಗೋಗಳನ್ನು ಮಾತ್ರ ಸಲ್ಲಿಸಬಹುದು. ವಿನ್ಯಾಸಗಳನ್ನು ಮೇ 30ರೊಳಗಾಗಿ ಕಳುಹಿಸಬೇಕು.ಸ್ವೀಕರಿಸಲಾದ ಲೋಗೋ ವಿನ್ಯಾಸಗಳನ್ನು ಜಿಲ್ಲಾಧಿಕಾರಿಗಳು ಗದಗ ಹಾಗೂ ಅಧ್ಯಕ್ಷರು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅವರ ಅಧ್ಯಕ್ಷತೆಯಲ್ಲಿನ ಸಮಿತಿಯಲ್ಲಿ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಲೋಗೋ ವಿನ್ಯಾಸಗೊಳಿಸಿದ ಕಲಾವಿದರಿಗೆ ಪ್ರೋತ್ಸಾಹಕವಾಗಿ ₹25,000 ನಗದು ಬಹುಮಾನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಆಯುಕ್ತರು, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ. ಕೊಠಡಿ ಸಂಖ್ಯೆ: 04 ನೆಲಮಹಡಿ ಜಿಲ್ಲಾಡಳಿತ ಭವನ ಹುಬ್ಬಳ್ಳಿ ರಸ್ತೆ, ಗದಗ (ಮೊ. 9620988939 ಲ.ಪಾ.ಪ.ಅ.ಪ್ರಾ. ಆಯುಕ್ತರು ಶರಣು ಗೋಗೇರಿ, ಕಾರ್ಯಾಲಯವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.