ಸಾರಾಂಶ
ಪ್ರತ್ಯೇಕ ಪ್ರಕರಣಗಳಲ್ಲಿ ಸಾಲದ ಶೂಲಕ್ಕೆ ಹೆದರಿ ಓರ್ವ ರೈತ ಮಹಿಳೆ ಸೇರಿದಂತೆ ಇಬ್ಬರು ರೈತರು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ವರದಿಯಾಗಿದೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ ಪ್ರತ್ಯೇಕ ಪ್ರಕರಣಗಳಲ್ಲಿ ಸಾಲದ ಶೂಲಕ್ಕೆ ಹೆದರಿ ಓರ್ವ ರೈತ ಮಹಿಳೆ ಸೇರಿದಂತೆ ಇಬ್ಬರು ರೈತರು ಒಂದೇ ದಿನ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಹರಿಹರ ತಾಲೂಕು ಎಳೆಹೊಳೆ ಗ್ರಾಮದ ರೈತ ಅಶೋಕ ಹಾಗೂ ನ್ಯಾಮತಿ ತಾಲೂಕು ಕುರುವ ತಾಂಡಾದ ರೈತ ಮಹಿಳೆ ಕಮಲಾಬಾಯಿ (59) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.ಎಳೆಹೊಳೆ ರೈತ ಅಶೋಕ ಕೃಷಿ ಮತ್ತು ಟ್ರ್ಯಾಕ್ಟರ್ ಖರೀದಿಗೆ ₹4 ಲಕ್ಷ, ಖಾಸಗಿಯಾಗಿ ₹6 ಲಕ್ಷ ಸಾಲ ಮಾಡಿದ್ದರು. 3 ವರ್ಷದಿಂದ ಸಮರ್ಪಕ ಮಳೆಯಾಗದೇ, ಬೆಳೆ ಕೈಕೊಟ್ಟಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ಅಶೋಕ ಕ್ರಿಮಿನಾಶಕ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಕುಂಕುವ ತಾಂಡಾದ ಕಮಲಾಬಾಯಿ 2 ಎಕರೆ ಜಮೀನಿನಲ್ಲಿ 1 ವರ್ಷದ ಹಿಂದೆ ಅಡಕೆ ತೋಟ ಮಾಡಿದ್ದರು. ಮಗಳ ಮದುವೆಗೆ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ₹50 ಸಾವಿರ, ತೋಟಕ್ಕಾಗಿ ₹5.40 ಲಕ್ಷ ಸಾಲ ಮಾಡಿದ್ದರು. ಮಳೆ ಕೈ ಕೊಟ್ಟಿದ್ದರಿಂದ ನಿರೀಕ್ಷಿತ ಬೆಳೆ ಕೈ ಸೇರದೇ ತೀವ್ರವಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.- - -
(ಸಾಂದರ್ಭಿಕ ಚಿತ್ರ)