ಸಾರಾಂಶ
ಗದಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೆದ್ದಾರಿ ಪಕ್ಕದಲ್ಲಿನ ಶೌಚಾಲಯಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದು, ಇನ್ನೊಬ್ಬರು ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ಕಳಸಾಪುರ ಬಳಿ ಶುಕ್ರವಾರ ನಡೆದಿದೆ.
ಮೃತರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಿದ್ಧಯ್ಯ, ಬಾಬು ಎಂದು ಗುರುತಿಸಲಾಗಿದೆ. ಶಶಿ ಎನ್ನುವವರು ತೀವ್ರ ಗಾಯಗೊಂಡಿದ್ದಾರೆ. ಮೃತರು ಕೊಪ್ಪಳ ಕಡೆಯಿಂದ ಬೆಳಗಾವಿಯತ್ತ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ.ಮೃತರ ಕಾರಿನಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಬ್ಬರು ಡಿಎಸ್ಪಿಗಳ ಐಡಿ ಕಾರ್ಡ್ಗಳು ಸಿಕ್ಕಿದ್ದು ಮೊದ ಮೊದಲು ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಘಟನಾ ಸ್ಥಳಕ್ಕೆ ಗದಗ ಎಸ್ಪಿ ಕೂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಅಧಿಕಾರಿಗಳ ಐಡಿ ಕಾರ್ಡ್ಗಳು ಸಾವನ್ನಪ್ಪಿದವರ ಕಾರಿನಲ್ಲಿ ಹೇಗೆ? ಬಂದವು ಎನ್ನುವ ಕುರಿತು ಕೂಲಂಕುಷವಾಗಿ ತನಿಖೆ ನಡೆಯಬೇಕಿದೆ. ಪ್ರಾಥಮಿಕ ತನಿಖೆಯಲ್ಲಿ ಆ ಇಬ್ಬರೂ ಡಿಎಸ್ಪಿಗಳಿಗೆ ತಮ್ಮ ಐಡಿ ಕಾರ್ಡ್ಗಳು ಹೇಗೆ ಕಾರಿನಲ್ಲಿ ಇದ್ದವು ಎನ್ನುವುದೇ ಗೊತ್ತಿಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಸಾವನ್ನಪ್ಪಿದವರು ಅಧಿಕಾರಿಗಳ ಸಂಬಂಧಿಕರಾ ಅಥವಾ ಗೆಳೆಯರಾ ಇನ್ನೇನು ಹಿರಿಯ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಐಡಿ ಕಾರ್ಡ್ಗಳು ಬಳಕೆಯಾಗುತ್ತಿವೆಯಾ ಎನ್ನುವ ಬಗ್ಗೆ ಇಲಾಖೆ ತನಿಖೆ ನಡೆಸಬೇಕಿದೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.