ನಾಗೇನಹಳ್ಳಿ ಮಾರ್ಗವಾಗಿ ಕಮಲಾಪುರಕ್ಕೆ ಹೋಗುವಾಗ ಈ ದುರ್ಘಟನೆ

ಹೊಸಪೇಟೆ: ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಹೈಟೆನ್ಷನ್‌ ವಿದ್ಯುತ್ ತಂತಿ ತಗುಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಅನಂತಶಯನ ಗುಡಿಯಿಂದ ನಾಗೇನಹಳ್ಳಿಗೆ ಹೋಗುವ ಮಾರ್ಗದಲ್ಲಿ ಸೋಮವಾರ ನಡೆದಿದೆ.

ತಾಲೂಕಿನ ಕಮಲಾಪುರ ಪಟ್ಟಣದ ನಿವಾಸಿಗಳಾದ ಹುಲುಗಪ್ಪ ಹಾಗೂ ದಿಲೀಪ್‌ ಎನ್ನುವ ಇಬ್ಬರು ವ್ಯಕ್ತಿಗಳಿಗೆ ಗಂಭೀರವಾದ ಸುಟ್ಟ ಗಾಯಗಳಾಗಿವೆ.

ಗಾಯಾಳುಗಳಿಗೆ ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ವಿಮ್ಸ್‌ ಆಸ್ಪತ್ರೆಗೆ ಸಾಗಿಸಲಾಗಿದೆ. ದಿಲೀಪ್‌ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದೊಯ್ಯಲಾಗಿದೆ.

ಹೊಸಪೇಟೆಯಿಂದ ಕಮಲಾಪುರಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಟ್ರ್ಯಾಕ್ಟರ್‌ನಲ್ಲಿ ತೆಗೆದುಕೊಂಡು ಹೋಗುತ್ತಿರುವಾಗ ಹೈಟೆನ್ಷನ್‌ ವಿದ್ಯುತ್‌ ತಂತಿಗೆ ಗಣೇಶ ಮೂರ್ತಿಯ ಬಿದುರು ತಾಗಿ ವಿದ್ಯುತ್‌ ಶಾರ್ಟ್‌ ಆಗಿ, ಟ್ರ್ಯಾಕ್ಟರ್‌ ಮತ್ತು ಗಣೇಶ ಮೂರ್ತಿ ಕಾಲುವೆಗೆ ಬಿದ್ದಿವೆ. ನಗರದ ಅನಂತಶಯನಗುಡಿ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ನಾಗೇನಹಳ್ಳಿ ಮಾರ್ಗವಾಗಿ ಕಮಲಾಪುರಕ್ಕೆ ಹೋಗುವಾಗ ಈ ದುರ್ಘಟನೆ ನಡೆದಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಭೇಟಿ:

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಹೊಸಪೇಟೆ ಡಿವೈಎಸ್ಪಿ ಪಿ. ಮುರಳೀಧರ್, ಗ್ರಾಮೀಣ ಪೊಲೀಸ್‌ ಠಾಣೆಯ ಸಿಪಿಐ ಗುರುರಾಜ ಕಟ್ಟಿಮನಿ, ಸಂಚಾರಿ ಠಾಣೆ ಸಿಪಿಐ ಡಿ. ಹುಲುಗಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.