ಸಾರಾಂಶ
ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿನ ಕೆನರಾ ಬ್ಯಾಂಕ್ಗೆ ಹಣ ಕಟ್ಟಲು ₹3.50 ಲಕ್ಷದೊಂದಿಗೆ ಬಂದಿದ್ದ ತಣಿಗೆರೆ ಗ್ರಾಮದ ಲತಾ ರುದ್ರಯ್ಯ ಎಂಬವರ ಬ್ಯಾಗಿನಲ್ಲಿದ್ದ ಹಣ ಕದ್ದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳಾ ಕಳ್ಳಿಯರು ಸಿಕ್ಕಿಬಿದ್ದ ಘಟನೆ ಶುಕ್ರವಾರ ನಡೆದಿದೆ.
ಚನ್ನಗಿರಿ: ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿನ ಕೆನರಾ ಬ್ಯಾಂಕ್ಗೆ ಹಣ ಕಟ್ಟಲು ₹3.50 ಲಕ್ಷದೊಂದಿಗೆ ಬಂದಿದ್ದ ತಣಿಗೆರೆ ಗ್ರಾಮದ ಲತಾ ರುದ್ರಯ್ಯ ಎಂಬವರ ಬ್ಯಾಗಿನಲ್ಲಿದ್ದ ಹಣ ಕದ್ದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳಾ ಕಳ್ಳಿಯರು ಸಿಕ್ಕಿಬಿದ್ದ ಘಟನೆ ಶುಕ್ರವಾರ ನಡೆದಿದೆ.
ಬ್ಯಾಂಕಿನಲ್ಲಿ ಗಿರವಿ ಇಟ್ಟಿದ್ದ ಚಿನ್ನಾಭರಣಗಳ ಸಾಲ ಕಟ್ಟಲು ₹3.50 ಲಕ್ಷವನ್ನು ತಂದಿದ್ದರು. ಚಲನ್ ತುಂಬುವ ಸಮಯದಲ್ಲಿ ಪೆನ್ನು ನೀಡುವ ನೆಪದಲ್ಲಿ ಮೂವರು ಅಪರಿಚಿತ ಮಹಿಳೆಯರು ಜೊತೆಯಾಗಿದ್ದಾರೆ. ಇದೇ ವೇಳೆಗೆ ಬ್ಯಾಂಕಿಗೆ ವೃದ್ದರೊಬ್ಬರು ಸಹ ಚಲನ್ ತುಂಬಿಕೊಡುವಂತೆ ಲತಾ ಅವರನ್ನು ಕೇಳಿದ್ದಾರೆ. ವೃದ್ಧನ ಚಲನ್ ತುಂಬಿಕೊಡುವ ವೇಳೆಗೆ ಒಬ್ಬ ಮಹಿಳೆ ಲತಾ ರುದ್ರಯ್ಯ ಅವರು ತಂದಿದ್ದ ಹಣವಿದ್ದ ಬ್ಯಾಗ್ ಅನ್ನು ಕತ್ತರಿಸಿ ₹1 ಲಕ್ಷವನ್ನು ಕದ್ದು ಪರಾರಿಯಾಗಿದ್ದಾಳೆ. ಅನಂತರ ಇನ್ನಿಬ್ಬರು ಮಹಿಳೆಯರು ಮತ್ತೆ ಬ್ಯಾಗ್ ಕತ್ತರಿಸಿ ₹2.50 ಲಕ್ಷ ಹಣ ಕದ್ದು ಪರಾರಿಯಾಗುವ ಯತ್ನದಲ್ಲಿದ್ದರು. ಈ ವೇಳೆಗೆ ಬ್ಯಾಗ್ ಕತ್ತರಿಸಿರುವುದು ಗಮನಿಸಿದ ಲತಾ ಕಳ್ಳಿಯರನ್ನು ಹಿಡಿಯಿರಿ ಎಂದು ಕೂಗಿಕೊಂಡಿದ್ದಾರೆ. ಆಗ ಲತಾ ಪತಿ ರುದ್ರಯ್ಯ ಹಾಗೂ ಬ್ಯಾಂಕ್ನಲ್ಲಿದ್ದ ಜನರು ಇಬ್ಬರು ಮಹಿಳೆಯರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.₹1 ಲಕ್ಷದೊಂದಿಗೆ ಪರಾರಿಯಾದ ಮಹಿಳೆಯನ್ನು ಹಿಡಿಯಲು ಪೊಲೀಸರು ಜಾಲ ಬೀಸಿದ್ದಾರೆ. ಪ್ರಕರಣ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಈ ಮಹಿಳಾ ಕಳ್ಳಿಯರು ಮಧ್ಯಪ್ರದೇಶ ಮೂಲದ ಪ್ರಿಯಾಂಕ ಸಿಸೋಡಿಯಾ ಹಾಗೂ ಪ್ರಿಯಾಂಕ ಎಂದು ಗುರುತಿಸಲಾಗಿದೆ. ಪರಾರಿಯಾಗಿರುವ ಇನ್ನೊಬ್ಬ ಮಹಿಳೆಯ ಹೆಸರು ಗೊತ್ತಾಗಿಲ್ಲ.- - -
-11ಕೆಸಿಎನ್ಜಿ3, 4.ಜೆಪಿಜಿ: