ಸಾರಾಂಶ
15 ಮನೆ, 2 ಜಾನುವಾರು ಕೊಟ್ಟಿಗೆಗೆ ಸೇರಿ 1 ಕೋಟಿ ರು.ಗೂ ಅಧಿಕ ಹಾನಿಕನ್ನಡಪ್ರಭ ವಾರ್ತೆ ಉಡುಪಿಉಡುಪಿ ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಈ ಮುಂಗಾರು ಮಳೆಗಾಲದ ದಾಖಲೆ ಮಳೆ ಸುರಿದಿದೆ. ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 126 ಮಿ.ಮೀ. ಮಳೆಯಾಗಿದೆ. ಇಲ್ಲಿನ ಉದ್ಯಾವರ ಗ್ರಾಮದ ಕೇದಾರ ಎಂಬಲ್ಲಿ ವ್ಯಕ್ತಿಯೊಬ್ಬರು ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಕಳೆದರೆಡು ದಿನಗಳಲ್ಲಿ ಭಾರೀ ಮಳೆಯಾಗುವ ಬಗ್ಗೆ ರೆಡ್ ಅಲರ್ಟ್ ಘೋಷಿಸಿತ್ತು, ಇಂದೂ ಕೂಡ ರೆಡ್ ಅಲರ್ಟ್ ಘೋಷಿಸಿದ್ದು, ಅದರಂತೆ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.ಭಾನುವಾರದ ಗಾಳಿ-ಮಳೆಗೆ ಜಿಲ್ಲೆಯಲ್ಲಿ 15 ಮನೆಗಳಿಗೆ ಮತ್ತು 2 ಜಾನುವಾರು ಕೊಟ್ಟಿಗೆಗೆ ಹಾನಿಯಾಗಿದೆ. ಬೈಂದೂರು ತಾಲೂಕಿನಲ್ಲಿ ನೆರೆ ಆವೃತ ಮನೆಗಳಿಂದ ಸುಮಾರು 35 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳಿಸಲಾಗಿತ್ತು, ಅವರು ತಂತಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.
ಸೋಮವಾರವೂ ಬಿಡುವಿಲ್ಲದೇ ದಿನವಿಡೀ ಮಳೆ ಸುರಿದಿದ್ದು, ಜಿಲ್ಲೆಯ ಎಲ್ಲಾ ನದಿಗಳೂ ತುಂಬಿ ಹರಿಯುತ್ತಿವೆ, ನದಿ ತೀರದ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಉಂಟಾಗಿದೆ. ಮುಖ್ಯವಾಗಿ ಬೈಂದೂರು ಕುಂದಾಪುರ ತಾಲೂಕಿನ ಸೌಪರ್ಣಿಕಾ, ಸೀತಾನದಿ, ಕುಬ್ಜಾ, ಚಕ್ರ ಇತ್ಯಾದಿ ನದಿಗಳಲ್ಲಿ ನೀರು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.10 ಲಕ್ಷ ರು.ಗೂ ಅಧಿಕ ಹಾನಿ:
ಜಿಲ್ಲೆಯಲ್ಲಿ 15 ಮನೆ ಮತ್ತು 2 ಜಾನುವಾರು ಕೊಟ್ಟಿಗೆಗೆ ಸೇರಿ 1 ಕೋಟಿ ರು.ಗೂ ಅಧಿಕ ಹಾನಿ ಸಂಭವಿಸಿದೆ. ಕುಂದಾಪುರ ತಾಲೂಕಿನಲ್ಲಿ ಅತಿ ಹೆಚ್ಚಿನ ಮಳೆಯಾಗಿದ್ದು, ಇಲ್ಲಿ 13 ಮನೆಗಳಿಗೆ ಮತ್ತು 2 ಜಾನುವಾರು ಕೊಟ್ಟಿಗೆಗೆ ಹಾನಿಯಾಗಿ, ಸುಮಾರು 3.15 ಲಕ್ಷ ರು.ಗಳಷ್ಟು ನಷ್ಟ ಸಂಭವಿಸಿದೆ.
ಬೈಂದೂರು ತಾಲೂಕಿನಲ್ಲಿ 2 ಮನೆಗಳು ಸಂಪೂರ್ಣ ಹಾನಿಗೊಂಡಿದ್ದು, 3 ಲಕ್ಷ ರು.ಗೂ ಅಧಿಕ ನಷ್ಟ ಉಂಟಾಗಿದೆ. ಕಾಪು ತಾಲೂಕಿನಲ್ಲಿ 5 ಮನೆಗಳಿಗೆ 1.90 ಲಕ್ಷ ರು., ಕಾರ್ಕಳ ತಾಲೂಕಿನಲ್ಲಿ 1.20 ಲಕ್ಷ ರು. ಮತ್ತು ಬ್ರಹ್ಮಾವರ ತಾಲೂಕಿನಲ್ಲಿ 3 ಮನೆಗಳಿಗೆ 50 ರು.ನಷ್ಟು ನಷ್ಟ ಉಂಟಾಗಿದೆ.ಕಾರ್ಮಿಕ ಬಲಿ:ಉಡುಪಿ ತಾಲೂಕಿನ ಉದ್ಯಾವರ ಗ್ರಾಮದ ಕೇದಾರ ಎಂಬಲ್ಲಿ ರೆನಾಲ್ಡ್ ಫೆರ್ನಾಂಡಿಸ್ (52) ಅವರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುತ್ತಾರೆ. ಅವರು ಅವಿವಾಹಿತರಾಗಿದ್ದು, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ. ಅವರು ಬಾನುವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದಾಗ, ಆಕಸ್ಮಿಕವಾಗಿ ಕಾಲು ಜಾರಿ, ಮಳೆ ನೀರು ತುಂಬಿ ಹರಿಯುತ್ತಿದ್ದ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ.