ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಧಾರ್ಮಿಕ ಹಾಗೂ ನೈತಿಕ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಸಾರಲು ಎಸ್‌ಐಒ ಹೂಡೆ ಘಟಕದ ವತಿಯಿಂದ ಇತ್ತೀಚೆಗೆ ಯಶಸ್ವಿ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಗೃತಿ ಅಭಿಯಾನದಲ್ಲಿ 80ಕ್ಕೂ ಹೆಚ್ಚು ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.

ಉಡುಪಿ: ಪರಿಸರ ಸಂರಕ್ಷಣೆಯು ನಮ್ಮೆಲ್ಲರ ಧಾರ್ಮಿಕ ಹಾಗೂ ನೈತಿಕ ಜವಾಬ್ದಾರಿಯಾಗಿದೆ ಎಂಬ ಸಂದೇಶವನ್ನು ಸಾರಲು ಎಸ್‌ಐಒ ಹೂಡೆ ಘಟಕದ ವತಿಯಿಂದ ಇತ್ತೀಚೆಗೆ ಯಶಸ್ವಿ ಸೈಕಲ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಜಾಗೃತಿ ಅಭಿಯಾನದಲ್ಲಿ 80ಕ್ಕೂ ಹೆಚ್ಚು ಮಕ್ಕಳು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.​ಸ್ಥಳೀಯ ಸಾಲಿಹಾತ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಐಸಿಸಿ ಅಧ್ಯಕ್ಷರಾದ ಸದೀಮ್ ಅವರು ರ‍್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಸಾಲಿಹಾತ್ ಮೈದಾನದಿಂದ ಹೊರಟ ಸೈಕಲ್ ರ‍್ಯಾಲಿಯು ಕೆನರಾ ಬ್ಯಾಂಕ್ ರಸ್ತೆ, ಬಂಗ್ರೆ ರಸ್ತೆ, ತೌಹೀದ್ ಮೊಹಲ್ಲಾ ಮಾರ್ಗವಾಗಿ ಸಾಗಿ, ಬಳಿಕ ಪುನಃ ಸಾಲಿಹಾತ್ ಮೈದಾನಕ್ಕೆ ಬಂದು ಮುಕ್ತಾಯಗೊಂಡಿತು.

ಸೈಕಲ್ ಜಾಥದ ನಂತರ ‘ಪರಿಸರ ಸಂರಕ್ಷಣೆ: ಒಂದು ಧಾರ್ಮಿಕ ಮತ್ತು ನೈತಿಕ ಜವಾಬ್ದಾರಿ’ ಎಂಬ ವಿಷಯದ ಕುರಿತು ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ್ದ ನಿಹಾಲ್ ಕಿಡಿಯೂರು ಅವರು ಮಾತನಾಡಿದರು. ‘ಪರಿಸರವನ್ನು ಕಾಪಾಡುವುದು ಕೇವಲ ಸಾಮಾಜಿಕ ಕರ್ತವ್ಯವಲ್ಲ, ಅದು ನಮ್ಮ ಧಾರ್ಮಿಕ ನಂಬಿಕೆ ಮತ್ತು ನೈತಿಕತೆಯ ಭಾಗವಾಗಿದೆ. ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಪರಿಸರಸ್ನೇಹಿ ಹವ್ಯಾಸಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.​ಮುಂದಿನ ಪೀಳಿಗೆಗಾಗಿ ಪರಿಸರವನ್ನು ರಕ್ಷಿಸುವ ಮತ್ತು ಅದನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.