ಉಡುಪಿ: ಅಂತಾರಾಷ್ಟ್ರೀಯ ಲಯನ್ಸ್ ಜಿಲ್ಲೆ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ಆಶ್ರಯದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಉಡುಪಿ -ಕರಾವಳಿ ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಭಾನುವಾರ ‘ಸೈಕ್ಲೋಥಾನ್ ’ ಕಾರ್ಯಕ್ರಮ ಉಡುಪಿ ನಗರದಲ್ಲಿ ನಡೆಯಿತು.ಉಡುಪಿಯ ಐಎಂಎ ಭವನದ ಮುಂದೆ ಲಯನ್ಸ್ ಜಿಲ್ಲೆ 317ಸಿ ಗವರ್ನರ್ ಸಪ್ನಾ ಸುರೇಶ್ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಧ್ಯೇಯವಾಗಲಿ ಎಂದು ಹಾರೈಸಿದರು.ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಮಣಿಪಾಲದ ಡಾ.ಗಣೇಶ್ ಪೈ, ಜಿಲ್ಲಾ ನಾಯಕತ್ವ ಸಂಯೋಜಕ ರವಿರಾಜ್ ನಾಯಕ್, ಐಎಂಎ ಉಡುಪಿ -ಕರಾವಳಿ ಅಧ್ಯಕ್ಷ ಡಾ. ಅಶೋಕ್ ಕುಮಾರ್, ಕಾರ್ಯದರ್ಶಿ ಡಾ. ಮಾನಸ್, ಉಡುಪಿ ದಂತ ವೈದ್ಯರ ಸಂಘಟನೆ (ಐಡಿಎ)ಯ ಡಾ. ಸಯ್ಯದ್ ಪಯಾಸ್, ಡಾ.ತೇಜ್‌ಕಿರಣ್ ಶೆಟ್ಟಿ ಹಾಗೂ ಜಿಲ್ಲಾ ಅಮೆಚೂರು ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಡಾ. ಗುರುರಾಜ್ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ನಗರ ವ್ಯಾಪ್ತಿಯಲ್ಲಿ ಸುಮಾರು 10 ಕಿ.ಮೀ. ದೂರ ಸಂಚರಿಸಿದ ಈ ಸೈಕ್ಲೋಥಾನ್‌ನಲ್ಲಿ ಸುಮಾರು 100ಕ್ಕೂ ಅಧಿಕ ಸೈಕ್ಲಿಸ್ಟ್ ಗಳು ಪಾಲ್ಗೊಂಡರು. ಪ್ರಸ್ತುತ ಲಯನ್ಸ್ ಜಿಲ್ಲೆ ವ್ಯಾಪ್ತಿಯಲ್ಲಿ ಪರಿಸರ ಜಾಗೃತಿ ಸಪ್ತಾಹ ಆಚರಣೆ ಏ.18ರಿಂದ 26 ರವರೆಗೆ ನಡೆಯಲಿದ್ದು, ಅಭಿಯಾನದ ಅಂಗವಾಗಿ ಪರಿಸರ ಪ್ರತಿಜ್ಞೆ, ಕಸ ವಿಂಗಡನೆ ಮತ್ತು ಮರುಬಳಕೆ ಅಭಿಯಾನ, ಶಾಲಾ ಪರಿಸರ ಶಿಕ್ಷಣ ಕಾರ್ಯಕ್ರಮ, ಗಿಡ ನೆಡುವುದು, ನದಿ ಕೆರೆಗಳ ಸ್ವಚ್ಛತೆ, ನೀರು ಸಂರಕ್ಷಣೆ ಅಭಿಯಾನ, ಪ್ಲಾಸ್ಟಿಕ್ ಬಳಕೆ ಜಾಗೃತಿ, ಸೌರಶಕ್ತಿ ಜಾಗೃತಿ ಮೊದಲಾದ ಕಾರ್ಯಕ್ರಮಗಳನ್ನು ಈ ಸಪ್ತಾಹದಲ್ಲಿ ಆಚರಿಸಲಾಗುವುದು.