ಸಾರಾಂಶ
ಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 1.27 ಲಕ್ಷದಷ್ಟು ವೈವಿಧ್ಯಮಯ ಹೂವಿನ ಗಿಡಗಳು ಮಾರಾಟಕ್ಕಿವೆ. ಇಲ್ಲಿರುವ ಸೆಲ್ಫಿ ಆಕರ್ಷಣೆ ಕೇಂದ್ರ ಬಿಂದುವಾಗಿದೆ. ಹಳದಿ, ಕೆಂಪು ಗುಲಾಬಿಯಲ್ಲಿ ಮೂಡಿದ ಕರ್ನಾಟಕ ನಕಾಶೆ, ಹೂವಿನಿಂದ ಮಾಡಿದ ಮಾವಿನ ಹಣ್ಣಿನ ಕಲಾಕೃತಿ, ಸ್ಥಳೀಯವಾಗಿ ಬೆಳೆದ ತರಕಾರಿ, ಹಣ್ಣುಹಂಪಲುಗಳು ಜನರನ್ನು ಕೈಬೀಸಿ ಕರೆಯುತ್ತಿವೆ.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾಡಳಿತ, ಜಿ.ಪಂ. ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಇಲ್ಲಿನ ದೊಡ್ಡನಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿರುವ ಫಲ - ಪುಷ್ಪ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ. ಶನಿವಾರ ಉದ್ಘಾಟಿಸಿದರು.ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಕೆ., ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಪರಿಕಲ್ಪನೆಯ ಕಲಾಕೃತಿಗಳನ್ನು ಈ ಫಲ - ಪುಷ್ಪ ಪ್ರದರ್ಶನದಲ್ಲಿ ಹೂವುಗಳಿಂದ ಕಲಾವಿದರು ಸಾಕಾರಗೊಳಿಸಿದ್ದು, ಆಕರ್ಷಣೆ ಕೇಂದ್ರ ಬಿಂದುವಾಗಿದೆ. ಸಾರ್ವಜನಿಕರಿಗೆ ಮುಕ್ತ ವೀಕ್ಷಣೆಗೆ ಅವಕಾಶ ಇದೆ, ಆದ್ದರಿಂದ ಮೂರು ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದು ವೀಕ್ಷಿಸಬೇಕು ಎಂದರು.ಎಸ್ಪಿ ಡಾ. ಅರುಣ್ ಕೆ., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರತೀಕ್ ಬಾಯಲ್, ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಸಹಾಯಕ ತೋಟಗಾರಿಕಾ ನಿರ್ದೇಶಕ ಗುರುಪ್ರಸಾದ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಉಪಸ್ಥಿತರಿದ್ದರು.ಗುಲಾಬಿಯಲ್ಲಿ ಕರ್ನಾಟಕಫಲಪುಷ್ಪ ಪ್ರದರ್ಶನದಲ್ಲಿ ಸುಮಾರು 1.27 ಲಕ್ಷದಷ್ಟು ವೈವಿಧ್ಯಮಯ ಹೂವಿನ ಗಿಡಗಳು ಮಾರಾಟಕ್ಕಿವೆ. ಇಲ್ಲಿರುವ ಸೆಲ್ಫಿ ಆಕರ್ಷಣೆ ಕೇಂದ್ರ ಬಿಂದುವಾಗಿದೆ. ಹಳದಿ, ಕೆಂಪು ಗುಲಾಬಿಯಲ್ಲಿ ಮೂಡಿದ ಕರ್ನಾಟಕ ನಕಾಶೆ, ಹೂವಿನಿಂದ ಮಾಡಿದ ಮಾವಿನ ಹಣ್ಣಿನ ಕಲಾಕೃತಿ, ಸ್ಥಳೀಯವಾಗಿ ಬೆಳೆದ ತರಕಾರಿ, ಹಣ್ಣುಹಂಪಲುಗಳು ಜನರನ್ನು ಕೈಬೀಸಿ ಕರೆಯುತ್ತಿವೆ.
ಜೊತೆಗೆ ಸರ್ಕಾರದ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯದ ಅಕ್ಷಯ ಪಾತ್ರೆಗೆ ಹೂವಿನ ಅಲಂಕಾರ, ಯುವ ನಿಧಿ, ಗೃಹಜ್ಯೋತಿ, ಶಕ್ತಿ, ಗೃಹಲಕ್ಷ್ಮೀ ಯೋಜನೆಗಳನ್ನೂ ಇಲ್ಲಿ ಹೂವಿನಿಂದಲೇ ಪಡಿಮೂಡಿಸಲಾಗಿದೆ.