ಉಡುಪಿ: ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಪ್ರಯುಕ್ತ ಶುಕ್ರವಾರ ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಮೇ ದಿನ ಆಚರಿಸಲಾಯಿತು. ಬೆಳಗ್ಗೆ ಉಡುಪಿ ಬಸ್ ನಿಲ್ದಾಣ ಬಳಿ ಸಿಐಟಿಯು ಕಛೇರಿಯಿಂದ ಸಾವಿರಾರು ಕಾರ್ಮಿಕರು ಕವಿ ಮುದ್ದಣ ಮಾರ್ಗದ ಮೂಲಕ ಮೆರವಣಿಗೆ ನಡೆಸಿ ವಿಮಾ ನೌಕರರ ಲಿಕೋ ಬ್ಯಾಂಕ್‌ನ ವಜ್ರ ಮಹೋತ್ಸವ ಸಭಾಂಗಣದಲ್ಲಿ ವಿಚಾರಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ವಿಚಾರಸಂಕಿರಣ ಉದ್ಘಾಟಿಸಿದ ಚಿಂತಕ, ಪ್ರಾಧ್ಯಾಪಕ ಪ್ರೊ. ಕೆ. ಪಣಿರಾಜ್, 1942ರಲ್ಲಿ ಬ್ರಿಟಿಷರ ಆಡಳಿತ ಮಂಡಳಿಯಲ್ಲಿ ಕಾರ್ಮಿಕ ಸಚಿವರಾಗಿದ್ದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸತತ 3 ವರ್ಷಗಳ ಕಾಲ ಅಧಿಕಾರಿಗಳೊಂದಿಗೆ ವಾದ ಮಾಡಿ 8 ವೈಜ್ಞಾನಿಕ ಕಾರ್ಮಿಕ ಮಸೂದೆಗಳನ್ನು ಜಾರಿಗೆ ತಂದರು. ಅದರಿಂದಾಗಿಯೇ ಕಾರ್ಮಿಕರಿಗೆ ಗರಿಷ್ಠ 8 ಗಂಟೆ ದುಡಿಮೆ, ಕನಿಷ್ಟ ವೇತನ, ಹಣದುಬ್ಬರಕ್ಕನುಗುಣವಾಗಿ ವೇತನ ಪರಿಷ್ಕರಣೆ, ಕಾರ್ಮಿಕರಿಗೆ ಆಹಾರ, ನೀರು, ಮನೆ, ಶಿಕ್ಷಣದ ಹಕ್ಕುಗಳು ದೊರೆತವು. ಆದ್ದರಿಂದ ಕಾರ್ಮಿಕರು ಸದಾ ಅಂಬೇಡ್ಕರ್ ಅವರನ್ನು ನೆನಪಿಟ್ಟುಕೊಳ್ಳಬೇಕು ಎಂದರು.

ಸಿಐಟಿಯು ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ವಿಚಾರ ಮಂಡನೆ ಮಾಡಿದರು. ಸಭೆಯ ಅಧ್ಯಕ್ಷತೆಯನ್ನು ವಿಮಾ ನೌಕರರ ಸಂಘ ದ ಪ್ರಧಾನ ಕೆ.ವಿಶ್ವನಾಥ ವಹಿಸಿದ್ದರು.ಎಐಟಿಯುಸಿನ ಶಿವಾನಂದ, ಇಂಟಕ್ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷ ರು ಕಿರಣ್ ಹೆಗ್ಡೆ, ಬ್ಯಾಂಕ್ ಯೂನಿಯನ್ ನ ಜಿಲ್ಲಾ ಕಾರ್ಯದರ್ಶಿ ನಾಗೇಶ್ ಕಾಮತ್ ಇದ್ದರು.ಜೆಸಿಟಿಯು ಉಡುಪಿ ಜಿಲ್ಲಾ ಸಂಚಾಲಕ ಕವಿರಾಜ್ ಎಸ್.ಕಾಂಚನ್ ನಿರೂಪಿಸಿದರು, ಉಡುಪಿ ಜಿಲ್ಲಾ ಕಟ್ಟಡ ಸಂಘದ ಮುಖಂಡ ಸೈಯಾದ್ ಅಲಿ ವಂದಿಸಿದರು.