ಕೊಲ್ಲೂರು ಸಮೀಪದ ಆನೆಜರಿ ಎದುರು ಕಾಂತಾರ ಚಿತ್ರದ ಡ್ಯಾನ್ಸರ್‌ಗಳಿದ್ದ ವಾಹನ ಪಲ್ಟಿ, 6 ಮಂದಿಗೆ ಗಾಯ

| Published : Nov 25 2024, 01:20 PM IST

ROAD ACCIDENT UP

ಸಾರಾಂಶ

‘ಕಾಂತಾರ ’ ಸಿನಿಮಾ ಚಿತ್ರೀಕರಣ ಮುಗಿಸಿ ಕೊಲ್ಲೂರು ವಸತಿಗೃಹಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಬಸ್ ಪಲ್ಟಿಯಾಗಿ ಆರು ಕಲಾವಿದರು ಗಾಯಗೊಂಡಿರುವ ಘಟನೆ ಕೊಲ್ಲೂರು ಸಮೀಪದ ಆನೆಜರಿ ಎದುರು ಭಾನುವಾರ ರಾತ್ರಿ ಸಂಭವಿಸಿದೆ.

ಕುಂದಾಪುರ: ‘ಕಾಂತಾರ  ’  ಸಿನಿಮಾ ಚಿತ್ರೀಕರಣ ಮುಗಿಸಿ ಕೊಲ್ಲೂರು ವಸತಿಗೃಹಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಬಸ್ ಪಲ್ಟಿಯಾಗಿ ಆರು ಕಲಾವಿದರು ಗಾಯಗೊಂಡಿರುವ ಘಟನೆ ಕೊಲ್ಲೂರು ಸಮೀಪದ ಆನೆಜರಿ ಎದುರು ಭಾನುವಾರ ರಾತ್ರಿ ಸಂಭವಿಸಿದೆ. 

ಮುದೂರಿನಲ್ಲಿ ಕಾಂತಾರಾ ಸಿನೆಮಾ ನೃತ್ಯ ಚಿತ್ರೀಕರಣ ಮುಗಿಸಿ ಸುಮಾರು 20ಕ್ಕೂ ಮಿಕ್ಕಿ ನೃತ್ಯ ಕಲಾವಿದರು ವಸತಿಗೃಹಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಅಪಘಾತ ನಡೆದಿದೆ. ಎದುರಿನಿಂದ ಬಂದ ಬೈಕ್‌ ನ್ನು ತಪ್ಪಿಸುವ ಬರದಲ್ಲಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

 ಗಾಯಗೊಂಡ ಕಲಾವಿದರಿಗೆ ಜಡ್ಕಲ್ ಮಹಾಲಕ್ಷ್ಮೀ ಕ್ಲಿನಿಕ್ ನಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಮೊಬೈಲ್ ಬಳಕೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಬಸ್ ಪಲ್ಟಿಯಾದ ಬಳಿಕ ಉಪ್ಪುಂದ ಮೂಲದ ಟೂರಿಸ್ಟ್ ಬಸ್ ಚಾಲಕನಿಗೆ ಕಲಾವಿದರು ಥಳಿಸಿದ್ದರು. ಸುದ್ದಿ ತಿಳಿದು ಟೂರಿಸ್ಟ್ ಚಾಲಕ ಸಂಘದ ಸದಸ್ಯರು ಸ್ಥಳಕ್ಕೆ ಆಗಮಿಸಿ ಕಲಾವಿದರ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಕೆಲಹೊತ್ತು ಸ್ಥಳದಲ್ಲಿ ಬಿಗುವಿನ ವಾತಾವರಣ ಏರ್ಪಟ್ಟಿತ್ತು.