ಸಾರಾಂಶ
ವಿದ್ಯಾರ್ಥಿಗಳಿಂದ ಶಿಸ್ತುಬದ್ಧವಾಗಿ ‘ಮಾರ್ಚ್ಫಾಸ್ಟ್’ ನಡೆಯಿತು. ಕ್ರೀಡಾಳು ಅಭಯ್ ಹಾಗೂ ತಂಡದವರು ಕ್ರೀಡಾಜ್ಯೋತಿ ಹೊತ್ತು ತಂದರು.
ಕನ್ನಡಪ್ರಭ ವಾರ್ತೆ ಉಡುಪಿ
ಕ್ರೀಡೆಯಿಂದ ದೈಹಿಕ ಆರೋಗ್ಯ, ಮಾನಸಿಕ ದೃಢತೆ ಮತ್ತು ದೈನಂದಿನ ಕೆಲಸಗಳಲ್ಲಿ ಲವಲವಿಕೆ ಹಾಗೂ ಉತ್ಸಾಹ ಹೆಚ್ಚುತ್ತದೆ. ಸ್ವಸ್ಥ ಸಮಾಜ ನಿರ್ಮಾಣದಿಂದ ದೇಶದ ಪ್ರಗತಿ ಸಾಧ್ಯ ಎಂದು ರಾಷ್ಟ್ರಮಟ್ಟದ ಗುಂಡು ಎಸೆತ ಪದಕ ವಿಜೇತ ಸ್ಯಾಂಡ್ರಾ ಅನ್ಸಿಲ್ಲಾ ಡಿಸೋಜ ಮಥಾಯಸ್ ಹೇಳಿದರು.ಅವರು ಇಲ್ಲಿನ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಕ್ರೀಡಾಕೂಟದಲ್ಲಿ ಭಾಗವಹಿಸಿ, ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯು ಗುಣಮಟ್ಟದ ಶಿಕ್ಷಣದೊಂದಿಗೆ ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿ ಕ್ರೀಡೆಯನ್ನು ಉತ್ತೇಜಿಸುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ.ಶ್ರೀರಮಣ ಐತಾಳ್, ಕ್ರೀಡಾ ಧ್ವಜಾರೋಹಣ ಮಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವುದು ಗೆಲ್ಲುವುದಕ್ಕೆ ಮಾತ್ರವಾಗಿರದೆ, ಗೆಲ್ಲುವಾತ ಗೆಲುವಿನ ಅಂತರ ಹೆಚ್ಚಿಸುವ ಪ್ರಯತ್ನ ಮತ್ತು ಸೋಲುವಾತ ಸೋಲಿನ ಅಂತರ ಕಡಿಮೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಲೆಕ್ಕಪರಿಶೋಧಕ ಟಿ. ಪ್ರಶಾಂತ ಹೊಳ್ಳ, ಕ್ರೀಡಾಕೂಟವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲೆ ಪ್ರತಿಮಾ ಬಾಳಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಉಪನ್ಯಾಸಕಿ ಪದ್ಮ ಕ್ರೀಡಾ ನಿರ್ಣಾಯಕರಿಗೆ ಹಾಗೂ ಕ್ರೀಡಾಪಟು ವಿದ್ಯಾರ್ಥಿನಿ ತ್ರಿಶಾ ಕ್ರೀಡಾಳುಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳಿಂದ ಶಿಸ್ತುಬದ್ಧವಾಗಿ ‘ಮಾರ್ಚ್ಫಾಸ್ಟ್’ ನಡೆಯಿತು. ಕ್ರೀಡಾಳು ಅಭಯ್ ಹಾಗೂ ತಂಡದವರು ಕ್ರೀಡಾಜ್ಯೋತಿ ಹೊತ್ತು ತಂದರು.ಕ್ರೀಡಾಪಟು ಮನೋಜ್ ಸ್ವಾಗತಿಸಿದರು. ಉಪನ್ಯಾಸಕಿ ಶ್ರೀದೇವಿ ಬಾಳಿಗ ನಿರೂಪಿಸಿದ ಕಾರ್ಯಕ್ರಮದಲ್ಲಿ ಕ್ರೀಡಾಳು ಆನ್ಯ ವಂದಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಮಂಜುನಾಥ ಜೋಗಿ ಕ್ರೀಡಾಕೂಟವನ್ನು ಸಂಯೋಜಿಸಿದ್ದರು.