ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಬ್ಯಾಂಕ್‌ಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗದಂತೆ ಬ್ಯಾಂಕ್‌ಗಳು ಎಚ್ಚರ ವಹಿಸಬೇಕು. ಮಹಿಳಾ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಕೋರಿ ಬ್ಯಾಂಕ್‌ಗಳಿಗೆ ಬಂದಾಗ ಅವುಗಳಿಗೆ ಅಗತ್ಯ ನೆರವುಗಳನ್ನು ಕಲ್ಪಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು

ಉಡುಪಿ: ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಬ್ಯಾಂಕ್‌ಗಳಿಂದ ಸರಿಯಾದ ಸಹಕಾರ ಸಿಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗದಂತೆ ಬ್ಯಾಂಕ್‌ಗಳು ಎಚ್ಚರ ವಹಿಸಬೇಕು. ಮಹಿಳಾ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಕೋರಿ ಬ್ಯಾಂಕ್‌ಗಳಿಗೆ ಬಂದಾಗ ಅವುಗಳಿಗೆ ಅಗತ್ಯ ನೆರವುಗಳನ್ನು ಕಲ್ಪಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು

.ಸೋಮವಾರ ರಜತಾದ್ರಿಯ ಜಿಪಂ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ 15,000ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ. ಇವುಗಳಲ್ಲಿ ಹೆಚ್ಚಿನದಾಗಿ ಗೋಡಂಬಿ ಸಂಸ್ಕರಣಾ ಘಟಕಗಳು, ಸಮುದ್ರ ಆಹಾರ, ಸಿದ್ಧ ಆಹಾರ ಘಟಕಗಳು ಮತ್ತಿತರ ಕೈಗಾರಿಕೆಗಳಾಗಿದ್ದು, ಅವುಗಳಿಗೆ ಮೂಲ ಸೌಲಭ್ಯಗಳಿಗೆ ಅವಶ್ಯಕತೆ ಇದ್ದರೆ ಬ್ಯಾಂಕ್‌ಗಳು ಆರ್ಥಿಕ ನೆರವು ನೀಡಬೇಕು ಮತ್ತು ಅವು ಅಭಿವೃದ್ಧಿಯಾಗಿ ಉದ್ಯೋಗಾವಕಾಶಗಳು ಹೆಚ್ಚುವಂತೆ ಮಾಡಬೇಕು ಎಂದರು.ಸಿಡಿ ಅನುಪಾತ ಹೆಚ್ಚಿಸಿ:

ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಬ್ಯಾಂಕ್‌ಗಳ ಸಾಲ ಮತ್ತು ಠೇವಣಿ ಅನುಪಾತ ಶೇ. 48.99 ಇದ್ದು, ಈ ಪ್ರಮಾಣವು ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕನಿಷ್ಠ ಶೇ. 60 ಇರಬೇಕಾಗಿದೆ. ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಸೌಲಭ್ಯಗಳನ್ನು ವಿತರಣೆ ಮಾಡಬೇಕು ಎಂದು ಅವರು ಸೂಚಿಸಿದರು.ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಪಿ.ಎಂ.ಎಫ್.ಎಂ.ಇ.ವೈ.ಯಡಿ 516 ಫಲಾನುಭವಿಗಳಿಗೆ 59.34 ಕೋಟಿ ರು. ಬಿಡುಗಡೆಯಾಗಿದೆ. ಪಿ.ಎಂ.ಎಸ್.ಜಿ.ಎಂ.ಬಿ.ವೈ. ಅಡಿಯಲ್ಲಿ ವಿವಿಧ ಬ್ಯಾಂಕುಗಳಿಗೆ 837 ಅರ್ಜಿಗಳು ಸಲ್ಲಿಕೆಯಾಗಿದ್ದು, 229 ಅರ್ಜಿಗಳು ತಿರಸ್ಕೃತಗೊಂಡು, 558 ಫಲಾನುಭವಿಗಳಿಗೆ 8.20 ಕೋಟಿ ರು. ಆರ್ಥಿಕ ನೆರವು ಮಂಜೂರು ಮಾಡಲಾಗಿದೆ. ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಏಪ್ರಿಲ್‌ವರೆಗೆ 5889 ಅರ್ಜಿಗಳು ಸ್ವೀಕೃತವಾಗಿದ್ದು, 4079 ಫಲಾನುಭವಿಗಳಿಗೆ 37.16 ಕೋಟಿ ರು. ಸಾಲ ವಿತರಿಸಲಾಗಿದೆ ಎಂದರು.

ಶೇ. 110.81 ಸಾಧನೆ:

ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಉಪ ಮಹಾ ಪ್ರಬಂಧಕ ಮಹಾಮಾಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.08 ಕೋಟಿ ರು.ಗಳ ವಾರ್ಷಿಕ ಕ್ರೆಡಿಟ್ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, 2026 ರ ಮಾರ್ಚ್ ಅಂತ್ಯದವರೆಗೆ 17,191.28 ಗುರಿ ಸಾಧಿಸಿ, ಶೇ. 110.81 ಸಾಧನೆ ಮಾಡಲಾಗಿದೆ ಎಂದ ಅವರು, ಕೃಷಿ ವಲಯದಲ್ಲಿ ಶೇ.112.01, ಎಂ.ಎಸ್.ಎಂ.ಇ ವಲಯದಲ್ಲಿ ಶೇ. 99.93 ರಷ್ಟು, ಶಿಕ್ಷಣ ವಲಯದಲ್ಲಿ ಶೇ. 90.21ರಷ್ಟು, ವಸತಿ ಕ್ಷೇತ್ರದಲ್ಲಿ ಶೇ. 53.12ರಷ್ಟು, ಇತರೆ ಕ್ಷೇತ್ರಗಳಲ್ಲಿ ಶೇ. 103.15 ಹಾಗೂ ಆದ್ಯತೇತರ ವಲಯಗಳಲ್ಲಿ ಶೇ. 121.87ರಷ್ಟು ಸಾಧನೆ ಮಾಡಲಾಗಿದೆ ಎಂದರು.ಆರ್.ಬಿ.ಐ.ನ ಉಪ ಮಹಾಪ್ರಬಂಧಕಿ ನಿಶಾ ಠಾಕೂರ್, ನಬಾರ್ಡ್ ಡಿಡಿಎಂ ಸಂಗೀತಾ ಕಾರ್ಥಾ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ., ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರು ಇದ್ದರು.