ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವೈಶಿಷ್ಟ್ಯಪೂರ್ಣ ಯೋಗ ದಿನಾಚರಣೆ

| Published : Jun 22 2025, 01:18 AM IST

ಸಾರಾಂಶ

ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ, ಸ್ವತಃ ವೈವಿಧ್ಯಮಯ ಯೋಗಾಸನಗಳನ್ನು ಮಾಡುವ ಮೂಲಕ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟದ್ದು ವೈಶಿಷ್ಟ್ಯವಾಗಿತ್ತು. ನೂರಾರು ಮಂದಿ ಯೋಗಾಸಕ್ತರು ಶ್ರೀಗಳ ಮಾರ್ಗದರ್ಶನದಲ್ಲಿ ಯೋಗಾಸನಗಳನ್ನು ಮಾಡಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠ ಹಾಗೂ ಪತಂಜಲಿ ಯೋಗ ಸಮಿತಿ ಉಡುಪಿ ಆಶ್ರಯದಲ್ಲಿ ಶ್ರೀ ಕೃಷ್ಣ ಯೋಗ ಕೇಂದ್ರ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಉಡುಪಿ ಮತ್ತು ಬನ್ನಂಜೆ, ನಿರಂತರ ಯೋಗ ಕೇಂದ್ರ, ಕ್ರೀಡಾ ಭಾರತಿ, ಎಲ್‌ಐಸಿ ಆಫ್‌ ಇಂಡಿಯಾ ಸಹಯೋಗದೊಂದಿಗೆ ಶನಿವಾರ ಬೆಳಗ್ಗೆ ೫.೩೦ರಿಂದ ೭ ಗಂಟೆ ವರೆಗೆ ರಾಜಾಂಗಣದಲ್ಲಿ ೧೧ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿತ್ತು.ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ, ಸ್ವತಃ ವೈವಿಧ್ಯಮಯ ಯೋಗಾಸನಗಳನ್ನು ಮಾಡುವ ಮೂಲಕ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟದ್ದು ವೈಶಿಷ್ಟ್ಯವಾಗಿತ್ತು. ನೂರಾರು ಮಂದಿ ಯೋಗಾಸಕ್ತರು ಶ್ರೀಗಳ ಮಾರ್ಗದರ್ಶನದಲ್ಲಿ ಯೋಗಾಸನಗಳನ್ನು ಮಾಡಿದರು.

ನಂತರ ಪುತ್ತಿಗೆ ಮಠದ ಕಿರಿಯ ಪಟ್ಟದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಪುತ್ತಿಗೆ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯರು ಮತ್ತು ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಭಾಗವಹಿಸಿದ್ದರು.