ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ 6ನೇ ವರ್ಷದ ಆರಾಧನಾ ಮಹೋತ್ಸವವು ಉಡುಪಿ ಶ್ರೀ ರಾಘವೇಂದ್ರ ಮಠದ ಸನ್ನಿಧಾನದಲ್ಲಿ ಭಾನುವಾರ ಜರಗಿತು.ಶ್ರೀ ಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಕುಟುಂಬಿಕರಿಂದ ಈ ಸಮಾರಂಭವು ಶಾಸ್ತ್ರೋಕ್ತವಾಗಿ ಆಯೋಜನೆಗೊಂಡಿತ್ತು.ಪ್ರಾತಃಕಾಲದಲ್ಲಿ ಶ್ರೀರಾಘವೇಂದ್ರ ಗುರುಸಾರ್ವಭೌಮರ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಪವಮಾನ ಕಲಶಾಭಿಷೇಕ ಹೋಮ ಹಾಗೂ ವಿರಜಾ ಹೋಮವನ್ನು ವೇದಮೂರ್ತಿ ನಟರಾಜ ಉಪಾಧ್ಯಾಯ ಹಾಗೂ ವೇದಮೂರ್ತಿ ಗಣೇಶ ನಡೆಸಿಕೊಟ್ಟರು. ತದನಂತರ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಮೃತ್ತಿಕಾ ವೃಂದಾವನಕ್ಕೆ ಪಂಚಾಮೃತಾಭಿಷೇಕ ಹಾಗೂ ವಿಶೇಷ ಪೂಜೆಯನ್ನು ಶ್ರೀಪಾದರ ಪೂರ್ವಾಶ್ರಮದ ಸಹೋದರ ಪಿ. ಲಾತವ್ಯಆಚಾರ್ಯರು ನೆರವೇರಿಸಿದರು. ಅಪರಾಹ್ನ ಅನ್ನಸಂತರ್ಪಣೆ ಜರಗಿತು.ಈ ಶುಭ ಸಂದರ್ಭದಲ್ಲಿ ಶ್ರೀ ರಾಯರಮಠದ ಶ್ರೀ ಜಯತೀರ್ಥ ಆಚಾರ್ಯ, ಶ್ರೀಪಾದರ ಪೂರ್ವಾಶ್ರಮದ ಸಹೋದರರು ನಾಗೇಶ ವಿ.ಆಚಾರ್ಯ ಸುರತ್ಕಲ್ ಅಪ್ಪಣ್ಣ ಆಚಾರ್ಯ, ಸೊಂಡೂರು ಪ್ರಹ್ಲಾದ ಆಚಾರ್ಯ, ಪಿ. ವೃಜನಾಥ ಆಚಾರ್ಯ, ರಘು ರಾಮಕೃಷ್ಣ ಬಲ್ಲಾಳ್ ಚಿಟಪಾಡಿ, ಸಾಯಿರಾಧಾ ಸಂಸ್ಥೆಯ ಮನೋಹರ ಶೆಟ್ಟಿ, ವಿಕಾಸ ಶೆಟ್ಟಿ ವಳಕಾಡ್, ಚೆನ್ನೈನ ರಾಜಗೋಪಾಲ್, ಅಕ್ಷೋಭ್ಯ ಆಚಾರ್ಯ, ಅವನೀಶ ಬಲ್ಲಾಳ್ ಚಿಟಪಾಡಿ, ವಿಶಾಲ ಆಚಾರ್ಯ, ಶಂಕರನಾರಾಯಣ ಹೊಳ್ಳ ಕುಂದಾಪುರ ಹಾಗೂ ಇನ್ನೂ ಅನೇಕ ಮಹನೀಯರು ಶ್ರೀಪಾದರ ಆರಾಧನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೇಮಾರು ಶ್ರೀಸಾಂದೀಪನಿ ಮಠದ ಆಶ್ರಮದಲ್ಲಿ ಶ್ರೀ ಈಶವಿಠಲದಾಸ ಸ್ವಾಮೀಜಿ ಅವರು ಶಿರೂರು ಶ್ರೀಪಾದರ ಆರಾಧನಾ ನಿಮಿತ್ತ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆಯನ್ನು ಆಯೋಜಿಸಿದ್ದರು.