ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಯೋಜನೆಯ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸನಿವಾಸ ಶಿಬಿರದ ಕೊನೆಯ ದಿನ ಸೋಮವಾರ ಸ್ವಚ್ಛತಾ ಅಭಿಯಾನ ಆಯೋಜಿಸಲಾಗಿತ್ತು. ನಿಟ್ಟೂರಿನ ಆಭರಣ ಮೋಟಾರ್ಸ್ ಎದುರಿನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಈ ಮಹಾ ಅಭಿಯಾನಕ್ಕೆ ಉಡುಪಿಯ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಚಾಲನೆ ನೀಡಿ ಶುಭ ಹಾರೈಸಿದರು.ನಗರಸಭೆ ಪರಿಸರ ಎಂಜಿನಿಯರ್ ಸ್ನೇಹಾ, ಆರೋಗ್ಯ ನಿರೀಕ್ಷಕರಾದ ಹರೀಶ್ ಬಿಲ್ಲವ ಮತ್ತು ಪ್ರಕಾಶ್ ಪ್ರಭು, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಗಾಂಧಿ ಆಸ್ಪತ್ರೆಯ ವರಿಷ್ಠರಾದ ಡಾ. ಹರಿಶ್ಚಂದ್ರ, ಸಂಸ್ಥೆಯ ದಾನಿಗಳೂ ಮತ್ತು ಪರಿಸರ ಪ್ರೇಮಿಗಳೂ ಆದ ಬೆಂಗಳೂರಿನ ವೆಂಕಟೇಶ ದಂಪತಿ ಹಾಗೂ ಕಲಾರಂಗದ ಕಾರ್ಯಕರ್ತರು ಉಪಸ್ಥಿತರಿದ್ದರು.ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ನೇತೃತ್ವದಲ್ಲಿ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮವನ್ನು ಸಂಯೋಜಿಸಿದರು. ೨೩೦ ಶಿಬಿರಾರ್ಥಿಗಳು ಸೇರಿದಂತೆ ಸುಮಾರು ೨೫೦ ಜನರು ಭಾಗವಹಿಸಿದ್ದರು.ಈ ಸಂದರ್ಭ ನಿಟ್ಟೂರಿನಿಂದ 3 ಕಿಲೋ ಮೀಟರ್ ದೂರದ ಉದ್ಯಾವರದ ಬಲಾಯ್ಪಾದೆ ವರೆಗೆ ರಸ್ತೆಯ ಇಕ್ಕೆಲಗಳಲ್ಲಿರುವ ತ್ಯಾಜ್ಯ ವಸ್ತುವನ್ನು ವಿಲೇವಾರಿ ಮಾಡಲಾಯಿತು. ನಗರಸಭೆಯ ಸ್ವಚ್ಛತಾ ಕರ್ಮಚಾರಿಗಳು ಇದರಲ್ಲಿ ಸಹಕರಿಸಿದರು. ನಗರಸಭೆ ವತಿಯಿಂದ ಕೈ ಗವಸು ಮತ್ತು ಮಾಸ್ಕ್ಗಳನ್ನು ನೀಡಲಾಯಿತು. ಪಂಚಮಿ ಟ್ರಸ್ಟ್ ಭಾಗವಹಿಸಿದವರಿಗೆ ನೀಡಿದ ಸಮವಸ್ತ್ರದ ಪ್ರಾಯೋಜಕತ್ವ ವಹಿಸಿತ್ತು.ಸಮಾಜಕ್ಕೆ ಪರಿಸರ ಸ್ವಚ್ಛತೆಯ ಜಾಗೃತಿ ಮತ್ತು ವಿದ್ಯಾರ್ಥಿಗಳಿಗೆ ತ್ಯಾಜ್ಯ ವಿಲೇವಾರಿಯ ಕುರಿತ ಸ್ಪಷ್ಟ ತಿಳುವಳಿಕೆಯೊಂದಿಗೆ ಪ್ರತ್ಯಕ್ಷ ಪ್ರಾಯೋಗಿಕ ಅನುಭವ ಈ ಮಹಾಭಿಯಾನದ ಉದ್ದೇಶವಾಗಿತ್ತು. ೨೦೦ ಚೀಲಕ್ಕೂ ಹೆಚ್ಚು ತ್ಯಾಜ್ಯವನ್ನು ಸಂಗ್ರಹಿಸಿ, ವಿಲೇವಾರಿ ಮಾಡಲಾಯಿತು.