ಗುಣಮಟ್ಟದ ಕಾರ್ಯಕ್ರಮಗಳ ಸರಣಿ, ನಿರಂತರ ಕ್ರಿಯಾಶೀಲತೆಯಿಂದಾಗಿ ಉಡುಪಿ ರಂಗಭೂಮಿ ಸಂಸ್ಥೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ಉಡುಪಿ: ಗುಣಮಟ್ಟದ ಕಾರ್ಯಕ್ರಮಗಳ ಸರಣಿ, ನಿರಂತರ ಕ್ರಿಯಾಶೀಲತೆಯಿಂದಾಗಿ ಉಡುಪಿ ರಂಗಭೂಮಿ ಸಂಸ್ಥೆಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.
ರಂಗಭೂಮಿ ಉಡುಪಿ ಸಂಸ್ಥೆಯ 61ನೇ ವಾರ್ಷಿಕ ಮಹಾ ಅಧಿವೇಶನದ ಮುಖ್ಯ ಅತಿಥಿಯಾಗಿ ಮಾತನಾಡಿದರು. ರಂಗಭೂಮಿ ಸಂಸ್ಥೆಯನ್ನು ಮಣಿಪಾಲದ ಬ್ರಹ್ಮ ಡಾ. ಟಿ.ಎಂ.ಎ. ಪೈ ಅವರು ವಿಶೇಷವಾದ ಅಭಿಮಾನ, ಕಾಳಜಿಯಿಂದ ಬೆಳೆಸಿದ್ದರು. ಇಂದಿಗೂ ಮಣಿಪಾಲದ ಸಂಸ್ಥೆಗಳು ಅದನ್ನು ಮುಂದುವರಿಸಿವೆ. ರಂಗಭೂಮಿಯ ಕನ್ನಡ ನಾಟಕ ಸ್ಪರ್ಧೆ, ರಂಗ ಶಿಕ್ಷಣದಂತಹ ಕಾರ್ಯಕ್ರಮಗಳು ರಾಜ್ಯಕ್ಕೇ ಮಾದರಿಯಾಗಿದೆ, ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರ ನೇತೃತ್ವ, ಸಂಸ್ಥೆಯನ್ನು ಇನ್ನಷ್ಟು ಸದೃಢವಾಗಿಸಿದೆ ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು, ರಂಗಭೂಮಿ ಸಂಸ್ಥೆಗೆ ಇದರ ಸದಸ್ಯರು, ಹಿತೈಷಿಗಳೇ ಆಧಾರವಾಗಿದ್ದಾರೆ. ಆರ್ಥಿಕ ನಷ್ಟದಲ್ಲಿರುವ ಈ ವರ್ಷ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೆಚ್ಚಿನ ಧನ ಸಹಾಯದ ನಿರೀಕ್ಷೆ ಹಾಗೂ ಭರವಸೆಯಲ್ಲಿ ನಾವಿದ್ದೇವೆ. ಇಲಾಖೆಯು ರಂಗಭೂಮಿಯನ್ನು ಇನ್ನಷ್ಟು ಪ್ರೋತ್ಸಾಹಿಸಬೇಕು ಎಂದು ವಿನಂತಿಸಿದರು.ರೋಟರಿ ಜಿಲ್ಲಾ ಗವರ್ನರ್ ಬಿ.ಎಂ. ಭಟ್, ಅಲಯನ್ಸ್ ಜಿಲ್ಲಾ ಗವರ್ನರ್ ಸುನಿಲ್ ಶೆಟ್ಟಿ, ರಾಜ್ಯ ಪಟ್ಟಣ ಸಹಕಾರಿ ಬ್ಯಾಂಕ್ಗಳ ಮಹಾ ಮಂಡಲದ ನಿರ್ದೇಶಕ ಎಚ್. ಜಯಪ್ರಕಾಶ್ ಕೆದ್ಲಾಯ, ಸಾಹಿತಿ ಡಾ. ಮಾಧವಿ ಎಸ್. ಭಂಡಾರಿ, ಡಾ. ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, ನಿವೃತ್ತ ಪ್ರಾಧ್ಯಾಪಕಿ ಪ್ರೊ. ಸುಕನ್ಯಾ ಮೇರಿ ಜೆ., ಡಾ. ಜಿ. ಶಂಕರ್ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲರಾದ ಡಾ. ನಿಕೇತನ, ಚೆಂಡೆ ವಾದಕ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯರನ್ನು ಗೌರವಿಸಲಾಯಿತು. ಪೂರ್ಣಿಮಾ ಸುರೇಶ್ ಪರಿಚಯಿಸಿದರು.
ಜೊತೆ ಕಾರ್ಯದರ್ಶಿ ಶ್ರೀಪಾದ ಹೆಗಡೆ ಮತ್ತು ಶಶಿಪ್ರಭಾ ಕಾರಂತ ಅತಿಥಿಗಳನ್ನು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ವರದಿ ಮಂಡಿಸಿದರು. ಗಿರೀಶ್ ತಂತ್ರಿ ವಂದಿಸಿದರು.