ಸಾರಾಂಶ
ಶಿರ್ವ ಎಂ.ಎಸ್.ಆರ್.ಎಸ್. ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿ ರಕ್ಷಿತ್ ಗುರುವಾರ ಸಂಜೆ 5.45ಕ್ಕೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಸಿಡಿಲು ಹೊಡೆದು ತೀವ್ರ ಗಾಯಗೊಂಡರು. ತಕ್ಷಣ ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 11.35 ಕ್ಕೆ ಮೃತಪಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ
ಮುಂಗಾರುಪೂರ್ವ ಮಳೆಯ ಸಿಡಿಲಿಗೆ ಕಾಪು ತಾಲೂಕಿನ ಶಿರ್ವ ಗ್ರಾಮದ ಮಾಣಿಬೆಟ್ಟು ಎಂಬಲ್ಲಿನ ನಿವಾಸಿ ರಕ್ಷಿತ್ ಪೂಜಾರಿ (19) ಗುರುವಾರ ರಾತ್ರಿ ಬಲಿಯಾಗಿದ್ದಾಗೆ. ಉಡುಪಿ ಜಿಲ್ಲೆಯಲ್ಲಿ ಮಳೆಗೆ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.ಶಿರ್ವ ಎಂ.ಎಸ್.ಆರ್.ಎಸ್. ಕಾಲೇಜಿನ ಎರಡನೇ ವರ್ಷದ ಬಿಸಿಎ ವಿದ್ಯಾರ್ಥಿ ರಕ್ಷಿತ್ ಗುರುವಾರ ಸಂಜೆ 5.45ಕ್ಕೆ ಸ್ನಾನ ಮಾಡಲು ಬಚ್ಚಲು ಮನೆಯ ಬಳಿ ನಿಂತಿದ್ದ ವೇಳೆ ಸಿಡಿಲು ಹೊಡೆದು ತೀವ್ರ ಗಾಯಗೊಂಡರು. ತಕ್ಷಣ ಮನೆಯವರು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 11.35 ಕ್ಕೆ ಮೃತಪಟ್ಟಿದ್ದಾರೆ.
ಗಾಳಿ ಮಳೆಗೆ ಕುಂದಾಪುರ ತಾಲೂಕಿನ ಹೊಸೂರು ಗ್ರಾಮದ ಸುಬ್ಬಿ ಅವರ ಮನೆಗೆ 50,000, ಉಪ್ಪಿನಕುದ್ರು ಗ್ರಾಮದ ನಾಗಪ್ಪಯ್ಯ ಅವರ ಕೊಟ್ಟಿಗೆಗೆ 5,000, ಕಾವ್ರಾಡಿ ಗ್ರಾಮದ ರಾಜೀವಿ ಅವರ ಮನೆಗೆ 25,000 ರು., ಶಂಕರನಾರಾಯಣ ಗ್ರಾಮದ ರತ್ನ ನಾಯ್ಕ ಅವರ ಮನೆಗೆ 10,000, ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಪಿಣಿಯ ಕುಲಾಲ ಅವರ ಮನೆ ಹಾಗೂ ಕೊಟ್ಟಿಗೆಗೆ 20,000, ಮೊಳಹಳ್ಳಿ ಗ್ರಾಮದ ಗಿರಿಜಾ ಪೂಜಾರಿ ಅವರ ಮನೆಗೆ 10,000, ಗಿರಿಜಾ ಪೂಜಾರ್ತಿ ಅವರ ಮನೆಗೆ 50,000, ಮುತ್ತು ಪೂಜಾರ್ತಿ ಅವರ ಮನೆಗೆ 15,000, ಕೆಂಚ ಮೊಗೇರ್ತಿ ಅವರ ಮನೆಗೆ 2,000, ಮೊಳಹಳ್ಳಿ ರತ್ನಾಕರ ಶೆಟ್ಟಿ ಅವರ ಮನೆಗೆ 10,000, ಅಂಪಾರು ಗ್ರಾಮದ ದಿವಾಕರ ಶೆಟ್ಟಿ ಅವರ ಮನೆಗೆ 1,50,000, ಚಿತ್ತೂರು ಗ್ರಾಮದ ಲಕ್ಷ್ಮೀ ಪೂಜಾರ್ತಿ ಅವರ ಮನೆಗೆ 50,000, ಶ್ಯಾಮಲಾ ಶೆಟ್ಟಿ ಅವರ ಮನೆಗೆ 2,00,000, ನಾವುಂದ ಗ್ರಾಮದ ಅನಿತಾ ಬಾಸ್ಕರ ಪೂಜಾರಿ ಅವರ ಮನೆಗೆ 5,000, ತಗ್ಗರ್ಸೆ ಗ್ರಾಮದ ನಾಗವೇಣಿ ರಾಮಕೃಷ್ಣ ಅವರ ಮನೆಗೆ 75,000 ರು. ನಷ್ಟ ಅಂದಾಜಿಸಲಾಗಿದೆ.ಬೈಂದೂರು ತಾಲೂಕಿನ ಬೈಂದೂರು ಗ್ರಾಮದ ವೆಂಕಟರಮಣ ಸೇರಿಗಾರ್ ಅವರ ಮನೆಗೆ 50,000, ಮಹಾಬಲ ಶೇರಿಗಾರ ಅವರ ಮನೆ 50,000, ಬಿ.ಕೆ. ನಾಗವೇಣಿ ಅವರ ಮನೆಗೆ 1,00,000 ರು. ಹಾನಿಯಾಗಿದೆ.
ಬ್ರಹ್ಮಾವರ ತಾಲೂಕಿನ ಶೀರೂರು ಗ್ರಾಮದ ಸೂರ್ಯ ಕುಲಾಲ ಅವರ ಮನೆಗೆ 15,000, ಕಾವಾಡಿ ಗ್ರಾಮದ ಪ್ರಸಾದ್ ಅವರ ಮನೆಗೆ 50,000 ರು. ನಷ್ಟವಾಗಿದೆ.