ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ, ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ನೆರವಾಗುವ ಉದ್ದೇಶದಿಂದ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಸೆ.10ರಂದು ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಉದ್ಯೋಗ ಪಥ ಶೀರ್ಷಿಕೆಯಡಿ ಎರಡು ತಿಂಗಳ ಉಚಿತ ಆಫ್‌ಲೈನ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ, ಯುವತಿಯರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ನೆರವಾಗುವ ಉದ್ದೇಶದಿಂದ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಸೆ.10ರಂದು ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ಉದ್ಯೋಗ ಪಥ ಶೀರ್ಷಿಕೆಯಡಿ ಎರಡು ತಿಂಗಳ ಉಚಿತ ಆಫ್‌ಲೈನ್ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಹೇಳಿದರು.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಮ್ಮ ಕನಸು, ನಮ್ಮ ಸಂಕಲ್ಪ ಘೋಷವಾಕ್ಯದೊಂದಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್, ಸ್ಪರ್ಧಾ ಅರಿವು ಅಕಾಡೆಮಿ, ಬೆಂಗಳೂರು ಹಾಗೂ ಸಾಧನಾ ಅಕಾಡೆಮಿ, ಶಿಕಾರಿಪುರ ಸಂಸ್ಥೆಗಳು ಸಹಕಾರ ನೀಡಿವೆ ಎಂದು ತಿಳಿಸಿದರು.

ಕೆಎಎಸ್, ಕೆಪಿಎಸ್‌ಸಿ, ಎಫ್‌ಡಿಎ, ಎಸ್‌ಡಿಎ, ಪಿಎಸ್‌ಐ, ಪಿಸಿ, ಕೆಇಎ ಗ್ರೂಪ್ಸ್, ಪಿಎಸ್‌ಟಿ ಸಹಿತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ವಿವಿಧ ಸರ್ಕಾರಿ ಇಲಾಖೆಗಳಲ್ಲಿನ 72 ಸಾವಿರಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ ಎಂದು ಮಾಹಿತಿ ನೀಡಿದರು.

ಶಿಕಾರಿಪುರದ ಸಾಧನಾ ಅಕಾಡೆಮಿಯ ಬಿ. ಮಂಜುನಾಥ್, ಬೆಂಗಳೂರಿನ ಸ್ಪರ್ಧಾ ಅರಿವು ಅಕಾಡೆಮಿಯ ಪಿ.ವಿ. ಬೈರಪ್ಪ (ಐಆರ್‌ಎಸ್) ಹಾಗೂ ವಿವಿಧ ಸರ್ಕಾರಿ ನೇಮಕಾತಿಯ 16 ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರುವ ಕಿಟ್ಟಿ ಸರ್ (ಪಿಎಸ್‌ಐ) ಉದ್ಘಾಟನಾ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವರು ಎಂದರು.

ಸರ್ಕಾರಿ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿರುವ ಹೆಚ್ಚಿನ ಸಂಖ್ಯೆಯ ಯುವಕ-ಯುವತಿಯರು ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು. ಯುವಜನರ ಉದ್ಯೋಗದ ಕನಸನ್ನು ನನಸಾಗಿಸುವ ಸಂಕಲ್ಪದೊಂದಿಗೆ ಈ ಪ್ರಯತ್ನ ಕೈಗೊಳ್ಳಲಾಗಿದೆ ಎಂದು ಅಚೀವರ್ಸ್ ಟ್ರಸ್ಟ್ ಮತ್ತು ಕೋಚಿಂಗ್ ಸೆಂಟರ್‌ನ ವರುಣ್ ತಿಪ್ಪೇಸ್ವಾಮಿ ನಾಯ್ಕ ಹೇಳಿದರು. ಪ್ರಮುಖರಾದ ವೆಂಕಟೇಶ್, ನಳಿನಾ ಜಾದವ್, ಮಂಜುನಾಥ್, ಅಭಿರಾಮ್, ಪೃಥ್ವಿಶ್ರೀ, ರವಿದರ್ಶನ್, ಧಾನಿಯಾ ಸಫಾ ಇದ್ದರು.