ಸಾರಾಂಶ
ಅಟ್ಟುಪ್ಪೆ ಗ್ರಾಮದಲ್ಲಿ ಅಶುಚಿತ್ವ ಉಂಟಾಗಿದ್ದು, ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಿರುವ ಶುದ್ಧ ಕುಡಯುವ ನೀರಿನ ಘಟಕ ಕೆಟ್ಟುನಿಂತು 2 ವರ್ಷಗಳು ಕಳೆದಿದೆ. ಇದುವರೆವಿಗೂ ರಿಪೇರಿ ಮಾಡಿಲ್ಲ. ಎಲ್ಲಾ ಚರಂಡಿಗಳು ಕೊಳಚೆ ನೀರು ಮತ್ತು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಅಟ್ಟುಪ್ಪೆ ಗ್ರಾಮದಲ್ಲಿ ಅಶುಚಿತ್ವ ಉಂಟಾಗಿದ್ದು, ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಜನರ ಆರೋಗ್ಯ ಕಾಪಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಮೂಲ ಸೌಲಭ್ಯಗಳ ಕೊರತೆಯಿಂದ ಎಲ್ಲಾ ಚರಂಡಿಗಳು ಸ್ವಚ್ಛತೆ ಕಾಣದೇ ಗಬ್ಬೆದ್ದು ನಾರುತ್ತಿವೆ. ಸೊಳ್ಳೆಗಳ ಹಾವಳಿ ಜಾಸ್ತಿಯಾಗಿದೆ. ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಿರುವ ಶುದ್ಧ ಕುಡಯುವ ನೀರಿನ ಘಟಕ ಕೆಟ್ಟುನಿಂತು 2 ವರ್ಷಗಳು ಕಳೆದಿದೆ. ಇದುವರೆವಿಗೂ ರಿಪೇರಿ ಮಾಡಿಲ್ಲ. ಎಲ್ಲಾ ಚರಂಡಿಗಳು ಕೊಳಚೆ ನೀರು ಮತ್ತು ಹೂಳು ತುಂಬಿಕೊಂಡು ಗಬ್ಬೆದ್ದು ನಾರುತ್ತಿವೆ ಎಂದು ದೂರಿದರು.ಚರಂಡಿಗಳಲ್ಲಿ ಅನುಪಯುಕ್ತ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದೆ. ಹೂಳು ತುಂಬಿರುವ ಕಾರಣ ನೀರು ಮುಂದೆ ಹೋಗದೇ ನಿಂತಲ್ಲೇ ನಿಂತು ದುರ್ನಾತ ಬೀರುತ್ತಿದೆ. ಕೆಲವು ಕಡೆ ಚರಂಡಿಯೇ ಇಲ್ಲದೇ ಕೊಳಚೆ ನೀರು ರಸ್ತೆ ಹಾಗೂ ಮನೆಗಳ ಮುಂದೆ ಹರಿಯುತ್ತಿದೆ. ಗ್ರಾಪಂ ಪಿಡಿಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.
ಮಳೆ ಬಿದ್ದಾಗ ಚರಂಡಿಗಳು ತುಂಬಿ ನೀರು ಅಕ್ಕ-ಪಕ್ಕದ ಮನೆಗೆ ನೀರು ನುಗ್ಗಿ ಸಮಸ್ಯೆ ಉಂಟು ಮಾಡುತ್ತದೆ. ಕೆಟ್ಟ ವಾಸನೆ, ಜೊತೆಗೆ ಸೊಳ್ಳೆಗಳು ಹೆಚ್ಚಾಗಿ ಮಲೇರಿಯಾ, ಡೆಂಘೀನಂತಹ ಮಾರಕ ಕಾಯಿಲೆಗಳು ಹರಡಲು ಕಾರಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮವನ್ನು ಸ್ವಚ್ಛಗೊಳಿಸಿ ಸುಸಜ್ಜಿತ ಚರಂಟಿ ನಿರ್ಮಿಸಿಕೊಡಬೇಕು. ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸಿಕೊಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಕುಮಾರ್, ರಂಗಬೋಳೆಗೌಡ, ಜಯಲಕ್ಷ್ಮಿ ಕೃಷ್ಣೇಗೌಡ, ಶಿವೇಗೌಡ, ರೇವನಾಯಕ್, ಕೃಷ್ಣೇಗೌಡ, ನಾಗೇಶ್, ಗೋವಿಂದೇಗೌಡ, ಸುಂದರಮ್ಮ, ಪುಟ್ಟೇಗೌಡ, ಅನು ನಾಗೇಶ್, ಸೇರಿದಂತೆ ಹಲವು ಗ್ರಾಮಸ್ಥರು ಭಾಗವಹಿಸಿದ್ದರು.