‘ಪ್ರಸಾದ್’ ಯೋಜನೆಯಡಿ ದ.ಕ. ದೇವಳ ಅಭಿವೃದ್ಧಿಗೆ ಸಂಸದ ಮನವಿ

| Published : Mar 28 2025, 12:34 AM IST

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ, ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ದೇವಾಲಯಗಳನ್ನು ಕೇಂದ್ರ ಸರ್ಕಾರ ‘ಪ್ರಸಾದ್’ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ, ಶಿಶಿಲದ ಶ್ರೀ ಶಿಶಿಲೇಶ್ವರ ದೇವಸ್ಥಾನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರಮುಖ ದೇವಾಲಯಗಳನ್ನು ಕೇಂದ್ರ ಸರ್ಕಾರ ‘ಪ್ರಸಾದ್’ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಜೊತೆ ದೆಹಲಿಯಲ್ಲಿ ಗುರುವಾರ ಸಚಿವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ ಸಂಸದರು, ಬೆಳ್ತಂಗಡಿ ತಾಲೂಕಿನ ಶ್ರೀ ನಂದಿಕೇಶ್ವರ ದೇವಸ್ಥಾನ (ನಂದಿಬೆಟ್ಟ ಗರ್ಡಾಡಿ), ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ಕೊಲ್ಲಿ), ಶ್ರೀ ಶಿಶಿಲೇಶ್ವರ ದೇವಸ್ಥಾನ(ಶಿಶಿಲ), ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನ (ಉಪ್ಪಿನಂಗಡಿ) ಮತ್ತು ಸುಳ್ಯ ತಾಲೂಕಿನ ಶ್ರೀ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನಗಳನ್ನು ‘ಪ್ರಸಾದ್’ ಯೋಜನೆಯಡಿ ಅಭಿವೃದ್ಧಿಪಡಿಸಬೇಕು. ಆ ಮೂಲಕ ಈ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು-ಪ್ರವಾಸಿಗರನ್ನು ಆಕರ್ಷಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆಯು ಧಾರ್ಮಿಕ ಕ್ಷೇತ್ರಗಳ ನೆಲೆಬೀಡಾಗಿದ್ದು, ಇಲ್ಲಿನ ಹಲವಾರು ದೇವಸ್ಥಾನಗಳಿಗೆ ಕರ್ನಾಟಕ ಮಾತ್ರವಲ್ಲ ದೇಶ-ವಿದೇಶಗಳಿಂದಲೂ ಯಾತ್ರಾರ್ಥಿಗಳು ದರ್ಶನಕ್ಕೆಂದು ಬಂದು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪ್ರಸಾದಂ ಯೋಜನೆ ಪಟ್ಟಿಯಲ್ಲಿ ಅಭಿವೃದ್ಧಿಪಡಿಸುವುದಕ್ಕೆ ಜಿಲ್ಲೆಯ ಅನೇಕ ದೇವಸ್ಥಾನಗಳು ಅರ್ಹತೆ ಹಾಗೂ ವಿಪುಲ ಅವಕಾಶಗಳನ್ನು ಪಡೆದುಕೊಂಡಿವೆ. ಹೀಗಿರುವಾಗ ಆದ್ಯತೆ ಮೇರೆಗೆ, ಶ್ರೀ ಸಹಸ್ರಲಿಂಗೇಶ್ವರ ಸೇರಿದಂತೆ ಈ ದೇವಸ್ಥಾನಗಳನ್ನು ಮತ್ತಷ್ಟು ಜನಾಕರ್ಷಣೆ ಮಾಡುವುದಕ್ಕೆ ಪ್ರವಾಸೋದ್ಯಮ ಸಚಿವಾಲಯದಿಂದ ಅಗತ್ಯ ಅನುದಾನವನ್ನು ನೀಡಬೇಕೆಂದು ಕ್ಯಾ. ಚೌಟ ಸಚಿವ ಶೆಖಾವತ್‌ ಅವರಲ್ಲಿ ವಿನಂತಿಸಿದ್ದಾರೆ.