ವಿದ್ಯಾರ್ಥಿ ಜೀವನದಲ್ಲಿ ಪದವಿ ಶಿಕ್ಷಣ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಈ ಹಂತದಲ್ಲಿ ಜಾಗ್ರತರಾಗಿ ಶಿಕ್ಷಣ ಪಡೆದುಕೊಂಡು ಶಿಕ್ಷಣ ಜೀವನ ರೂಪಿಸಿಕೊಳ್ಳಬೇಕು.

ಬಿಎ, ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಉಪನ್ಯಾಸಕ

ಕನ್ನಡಪ್ರಭ ವಾರ್ತೆ ಗಜೇಂದ್ರಗಡ

ವಿದ್ಯಾರ್ಥಿ ಜೀವನದಲ್ಲಿ ಪದವಿ ಶಿಕ್ಷಣ ಅತ್ಯಂತ ಮಹತ್ವದ್ದಾಗಿದ್ದು, ವಿದ್ಯಾರ್ಥಿಗಳು ಈ ಹಂತದಲ್ಲಿ ಜಾಗ್ರತರಾಗಿ ಶಿಕ್ಷಣ ಪಡೆದುಕೊಂಡು ಶಿಕ್ಷಣ ಜೀವನ ರೂಪಿಸಿಕೊಳ್ಳಬೇಕು ಎಂದು ಉಪನ್ಯಾಸಕ ಶರಣಪ್ಪ ವಿ. ಉಮಚಗಿ ಹೇಳಿದರು.

ಸ್ಥಳೀಯ ಎಸ್.ಎಂ. ಭೂಮರಡ್ಡಿ ಕಲಾ ವಾಣಿಜ್ಯ ಪದವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿವಿಧ ಸಾಂಘಿಕ ಚಟುವಟಿಕೆ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಯಶಸ್ಸಿನ ಹಾದಿಗೆ ಮೆಟ್ಟಿಲಾಗಿರುವ ಪದವಿ ಶಿಕ್ಷಣದಲ್ಲಿ ಎಡವಿದರೆ ಬದುಕು ಕಷ್ಟದ ಸುಳಿಗೆ ಸಿಲುಕುತ್ತದೆ. ಪದವಿ ಶಿಕ್ಷಣವನ್ನು ಜೀವನದ ಅತ್ಯಂತ ಪ್ರಮುಖ ಹಂತವೆಂದು ಭಾವಿಸಿ, ಬದುಕು ರೂಪಿಸಿಕೊಳ್ಳುವುದರತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಎಸ್.ಎನ್. ಶಿವರಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ನಡೆಯುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಎನ್.ಎಸ್.ಎಸ್. ಹಾಗೂ ಯುವ ರೆಡ್ ಕ್ರಾಸ್, ಸಾಹಿತ್ಯಿಕ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದರು.

ಉಪನ್ಯಾಸಕ ಬಿ.ವಿ. ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ದೃಷ್ಟಿಯಿಂದ ಉತ್ತಮ ವಿದ್ಯೆಯನ್ನು ಪಡೆದುಕೊಳ್ಳಬೇಕು. ತಂದೆ-ತಾಯಿಗಳ ಹಾಗೂ ಕುಟುಂಬದ ಗೌರವ ಹಾಗೂ ವಿದ್ಯಾ ಸಂಸ್ಥೆಯ ಕೀರ್ತಿ ಬೆಳಗುವುದು ಸಾಧ್ಯ ಎಂದರು.

ಉಪನ್ಯಾಸಕ ಶರಣಪ್ಪ ರಾಜೂರ ಮಾತನಾಡಿದರು. ಎಸ್.ಕೆ. ಕಟ್ಟಿಮನಿ, ಎಂ.ಎ. ಮಳಗಾವಿ, ಕವಿತಾ ಬಂಡಿ, ಪ್ರೇಮಾ ಚುಂಚಾ, ಡಾ. ಎಸ್.ಎಚ್. ಪವಾರ, ಎಲ್.ಕೆ. ವದ್ನಾಳ, ಆರ್.ಎನ್. ಹದ್ಲಿ, ಎಲ್.ಕೆ. ಹಿರೇಮಠ, ಎಂ.ಎಲ್. ಕ್ವಾಟಿ, ಹರೀಶ ಪವಾರ, ಯು.ಎನ್. ತಿಮ್ಮನಗೌಡರ, ಎಸ್.ವಿ. ಪತ್ತಾರ ಇದ್ದರು.