ಸಾರಾಂಶ
ಯೋಗ ಮತ್ತು ಆಧ್ಯಾತ್ಮಿಕ ಆಶ್ರಮ ಕೇಂದ್ರದಲ್ಲಿ ವಿಶ್ವ ಪುಸ್ತಕ ದಿನಾಚರಣೆ
ಕನ್ನಡಪ್ರಭ ವಾರ್ತೆ, ಕಡೂರುಪುಸ್ತಕ ಸಂಸ್ಕೃತಿಗೆ ಸಿಗಬೇಕಾದ ಮನ್ನಣೆ ಮತ್ತು ಪ್ರೋತ್ಸಾಹ ಸಿಗದಿರುವುದು ವಿಪರ್ಯಾಸದ ಸಂಗತಿ ಎಂದು ಜಿಲ್ಲಾ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಪ್ರಧಾನ ಸಂಚಾಲಕ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ತಾಲೂಕಿನ ಚೌಳಹಿರಿಯೂರು ಹೋಬಳಿ ಕುರುಬರಹಳ್ಳಿ ಗ್ರಾಮದಲ್ಲಿರುವ ಯೋಗ ಮತ್ತು ಆಧ್ಯಾತ್ಮಿಕ ಆಶ್ರಮ ಕೇಂದ್ರದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಕುರಿತು ಮಾತನಾಡಿದರು. ಪುಸ್ತಕ ಓದುವ ಅಭ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಪಠ್ಯೇತರ ಪುಸ್ತಕಗಳು ಮನುಷ್ಯನ ವ್ಯಕ್ತಿತ್ವವನ್ನು ಉತ್ತಮವಾಗಿ ರೂಪಿಸುವ ಶಕ್ತಿ ಪುಸ್ತಕಗಳಿಗೆ ಇದ್ದು ಅವು ಮನುಷ್ಯನ ಉತ್ತಮ ಭವಿಷ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ತಿಳಿಸಿದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕಲ್ಕಟ್ಟೆ ಪುಸ್ತಕ ಮನೆ ಸಂಚಾಲಕ ಎಚ್ ಎಂ ನಾಗರಾಜ ರಾವ್ ಮಾತನಾಡಿ, ಮಕ್ಕಳು ಪುಸ್ತಕಗಳನ್ನು ಓದಬೇಕು ಟಿವಿ ಮತ್ತು ಮೊಬೈಲ್ ಸಂಸ್ಕೃತಿಯಿಂದ ಹೊರಬಂದು ಪುಸ್ತಕ ಪ್ರೀತಿ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.
ಪುಸ್ತಕ ಉದ್ಯಮವನ್ನು ಉಳಿಸಿ ಬೆಳೆಸಬೇಕು. ಜ್ಞಾನ ದಾಸೋಹವನ್ನು ಹೆಚ್ಚಿಸುವ ಕೆಲಸವನ್ನು ನಾವೆಲ್ಲರೂ ಪ್ರೋತ್ಸಾಹಿಸ ಬೇಕು ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುರುಬರಹಳ್ಳಿ ಯೋಗ ಮತ್ತು ಅಧ್ಯಾತ್ಮದ ಕೇಂದ್ರದ ಆಶ್ರಮದ ರಾಮ ಗುರೂಜಿ ಮಾತನಾಡಿ, ಪುಸ್ತಕಗಳು ಮನಸ್ಸನ್ನು ಅರಳಿಸುವ ಕೆಲಸ ಮಾಡುತ್ತವೆ ಆದರೆ ಟಿವಿ ಮತ್ತು ಮೊಬೈಲ್ ನಲ್ಲಿ ಬರುವ ಕೆಲವು ಸಂಗತಿಗಳು ನಮ್ಮ ಮನಸ್ಸನ್ನು ಕೆರಳಿಸುತ್ತವೆ. ಅವುಗಳಿಂದ ನಾವೆಲ್ಲರೂ ದೂರ ಇರಬೇಕಾಗುತ್ತದೆ ಎಂದರು. ಕಲೆ ಸಾಹಿತ್ಯ ಸಂಗೀತ ಈ ಎಲ್ಲ ಪ್ರಾಕಾರಗಳು ಸಹ ಪುಸ್ತಕ ಉದ್ಯಮದಲ್ಲಿ ಕಾಣಬಹುದಾಗಿದೆ. ಸರ್ಕಾರಗಳು ಪುಸ್ತಕ ಗಳನ್ನು ಕೊಳ್ಳಬೇಕು ಆಗ ಲೇಖಕರಿಗೆ ಹಾಗೂ ಪ್ರಕಾಶಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಹೇಳಿದರು. ಜಿಲ್ಲಾ ಮಹಿಳಾ ಘಟಕದ ಪ್ರಧಾನ ಸಂಚಾಲಕರಾದ ಪದ್ಮಾ ಶ್ರೀನಿವಾಸ್ ಮಾತನಾಡಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಪುಸ್ತಕ ಸಂಸ್ಕೃತಿ ನಮಗೆ ಪೂರಕವಾಗಿದೆ. ಆದುದರಿಂದ ಎಲ್ಲರೂ ಕೂಡ ಪುಸ್ತಕ ಸಂಸ್ಕೃತಿಯನ್ನು ಪ್ರಸಾರ ಮಾಡಬೇಕು ಮತ್ತು ಅದನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಜ್ಜಂಪುರ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಎಸ್ ಗಾಯತ್ರಮ್ಮ, ಕಾರ್ಯದರ್ಶಿ ಶಾರದಾ ಮತ್ತು ಎಚ್. ಡಿ. ಮಾಲತಿ ಆಧ್ಯಾತ್ಮಿಕ ಯೋಗಕೇಂದ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು.
29ಕೆಕೆಡಿಯು1.ಕಡೂರು ತಾಲೂಕಿನ ಕುರುಬರಹಳ್ಳಿ ಗ್ರಾಮದ ಯೋಗ ಮತ್ತು ಆಧ್ಯಾತ್ಮಿಕ ಆಶ್ರಮ ಯೋಗ ಕೇಂದ್ರದಲ್ಲಿ ವಿಶ್ವ ಪುಸ್ತಕ ದಿನಾಚರಣೆ ಆಚರಿಸಲಾಯಿತು.