ಜೂನ್‌ 23ರಂದು ರಾಜ್ಯ ಸರ್ಕಾರದ ವಿರುದ್ಧ ಅವಿಭಜಿತ ದ.ಕ. ಬಿಜೆಪಿ ಪ್ರತಿಭಟನೆ

| Published : Jun 18 2025, 11:48 PM IST

ಜೂನ್‌ 23ರಂದು ರಾಜ್ಯ ಸರ್ಕಾರದ ವಿರುದ್ಧ ಅವಿಭಜಿತ ದ.ಕ. ಬಿಜೆಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರದ ವಿರುದ್ಧ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಪಂಚಾಯತ್‌ಗಳಲ್ಲಿ ಜೂ.೨೩ ರಂದು ಬೆಳಗ್ಗೆ ೧೦ ಗಂಟೆಗೆ ಸಾಮೂಹಿಕ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯ ಸರ್ಕಾರದ ವಿರುದ್ಧ ಅವಿಭಜಿತ ದ.ಕ. ಜಿಲ್ಲೆಯ ಎಲ್ಲ ಪಂಚಾಯತ್‌ಗಳಲ್ಲಿ ಜೂ.೨೩ ರಂದು ಬೆಳಗ್ಗೆ ೧೦ ಗಂಟೆಗೆ ಸಾಮೂಹಿಕ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದರು.ಅವರು ಮಂಗಳವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಸಾಮಾನ್ಯ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಿದರೂ, ಅನೇಕ ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸಲಿದ್ದೇವೆ ಎಂದರು.ಜೂ.೨೩ ರಂದು ೨೨೦ ಗ್ರಾಮ ಪಂಚಾಯತ್‌ಗಳಲ್ಲಿ, ೩ ಪುರಸಭೆಗಳಲ್ಲಿ, ೧ ಪಟ್ಟಣ ಪಂಚಾಯತ್‌, ೨ ನಗರ ಸಭೆ, ೮ ವಿಧಾನಸಭಾ ಕ್ಷೇತ್ರಗಳಲ್ಲಿ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಒಟ್ಟು ೩೯೯ ಕಡೆಗಳಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಏಕ ನಿವೇಶನಕ್ಕೆ ೯/೧೧ ನಮೂನೆ ಅಗತ್ಯವಾಗಿದ್ದು, ಅದರ ಸಮಸ್ಯೆ ತಲೆ ಎತ್ತಿದ್ದು, ಮನೆ ನಿರ್ಮಾಣದ ನಕ್ಷೆಯನ್ನು ಪಡೆಯಲು ಗೃಹ ಮಂಡಳಿಗೆ ಹೋಗಬೇಕಾದ ಸನ್ನಿವೇಶ ಎದುರಾಗಿದೆ. ಜನರು ನಕ್ಷೆಗಾಗಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಭ್ರಷ್ಟಚಾರವೇ ಮೂಲ ಕಾರಣವಾಗಿದ್ದು, ಜನರಿಂದ ಹಣ ದೋಚಲು ಈ ರೀತಿಯ ಯೋಜನೆಗಳನ್ನು ರೂಪಿಸಿದ್ದಾರೆ ಎಂದು ಅವರು ದೂರಿದರು.

ಎಲ್ಲ ಕಡೆಗಳಲ್ಲಿ ಅಕ್ರಮ-ಸಕ್ರಮ ಸಮಿತಿಯು ಆಯಾ ಕ್ಷೇತ್ರದ ಶಾಸಕರುಗಳ ಅಧ್ಯಕ್ಷೆಯಲ್ಲಿ ರಚನೆಯಾಗಿದ್ದು, ಸಹಾಯಕ ಆಯುಕ್ತರಿಗೆ ಇದರ ಜವಾಬ್ದಾರಿಯನ್ನು ವಹಿಸಲಾಗಿದೆ. ರೈತರು ಅಕ್ರಮ-ಸಕ್ರಮ ಜಾಗಕ್ಕೆ ಅರ್ಜಿ ಸಲ್ಲಿಸಿದರೆ ಅರ್ಜಿ ಸಮಿತಿಯ ಮುಂದೆ ಬಂದು ಚರ್ಚೆಯಾಗಬೇಕು. ಆದರೆ ಇಲ್ಲಿ ಯಾವುದೇ ರೀತಿಯಲ್ಲಿಯೂ ಸಮಿತಿಯ ಎದುರಲ್ಲಿ ಬಾರದೆ ನೇರವಾಗಿ ಸಹಾಯಕ ಆಯುಕ್ತರು ಅರ್ಜಿಗಳನ್ನು ತಿರಸ್ಕಾರ ಮಾಡುತ್ತಿದ್ದಾರೆ. ಇದು ನೇರವಾಗಿ ರೈತ ವಿರೋಧಿ ಕ್ರಮವಾಗಿದ್ದು, ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ರೈತರಿಂದಾಗಿ ಅಕ್ರಮ-ಸಕ್ರಮ ಜಾಗಗಳು ಇನ್ನೂ ಉಳಿದಿವೆ. ರೈತರುಗಳು ಈ ಭೂಮಿಯಲ್ಲಿ ಇಂದಿಗೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರೈತರು ಈ ಭೂಮಿಯನ್ನು ಕೈ ಬಿಟ್ಟಿದ್ದರೆ ಇಷ್ಟರಲ್ಲಿ ಭೂ ಮಾಫಿಯಾಗಳ ಕೈ ಸೇರುತ್ತಿತ್ತು ಎಂದು ಅವರು ತಿಳಿಸಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ೨ ವರ್ಷ ಪೂರೈಸಿದರೂ ಇಲ್ಲಿಯ ತನಕ ಒಂದೇ ಒಂದು ಆಶ್ರಯ ಮನೆಗಳು ಮಂಜೂರಾಗಿಲ್ಲ. ಸೂರು ಇಲ್ಲದವರಿಗೆ ಸೂರನ್ನು ಕಲ್ಪಿಸುವ ಕೆಲಸ ಆಗಬೇಕು. ರಾಜ್ಯ ಸರ್ಕಾರ ಈ ಕೂಡಲೇ ಪ್ರತಿ ಗ್ರಾಮ ಪಂಚಾಯತ್‌ಗೆ ೧೦೦ ಮನೆಗಳನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಲಾಗುವುದು ಎಂದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಾಂತಿ ಪ್ರಸಾದ್ ಹೆಗ್ಡೆ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಜಿಲ್ಲಾ ಬಿಜೆಪಿ ಖಜಾಂಚಿ ಸಂಜಯ್ ಪ್ರಭು, ಬಿಜೆಪಿ ಮುಖಂಡರಾದ ಪ್ರಭಾಕರ್ ಪ್ರಭು, ದ.ಕ. ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ, ಜಿಲ್ಲಾ ಬಿಜೆಪಿ ವಕ್ತಾರ ರಾಜಗೋಪಾಲ್ ರೈ ಇದ್ದರು.