ಶೈಕ್ಷಣಿಕ ಜಾಗೃತಿಯಿಂದ ನಿರುದ್ಯೋಗ ಮಾಯ

| Published : May 11 2025, 01:30 AM IST

ಸಾರಾಂಶ

ರಾಷ್ಟ್ರೀಯ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು, ಶಿಕ್ಷಣದ ಅವಶ್ಯಕತೆ ಬಹಳಷ್ಟಿದ್ದು ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ಅವರ ಭವಿಷ್ಯ ಸುಂದರಗೊಳಿಸಬೇಕು.

ಕೊಪ್ಪಳ:

ಶೈಕ್ಷಣಿಕ ಜಾಗೃತಿಯಿಂದ ಶಿಕ್ಷಣ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ನಿರುದ್ಯೋಗ ಮಾಯವಾಗುತ್ತದೆ ಎಂದು ಕಲಾವಿದ ಬಸವರಾಜ ಉಪಲದಿನ್ನಿ ಎಂದು ಹೇಳಿದರು.

ಕುಷ್ಟಗಿ ತಾಲೂಕಿನ ಕಂದಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನೆರೆಬೆಂಚಿ ಗ್ರಾಮದಲ್ಲಿನ ನರೇಗಾ ಕಾಯಕ ಸ್ಥಳದಲ್ಲಿ ಜನಜಾಗೃತಿ ಕಲಾರಂಗ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ 2023-24ನೇ ಸಾಲಿನ ಸಂಘ-ಸಂಸ್ಥೆಗಳ ಧನಸಹಾಯ ಯೋಜನೆಯಡಿಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು, ಶಿಕ್ಷಣದ ಅವಶ್ಯಕತೆ ಬಹಳಷ್ಟಿದ್ದು ಎಲ್ಲ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವ ಮೂಲಕ ಅವರ ಭವಿಷ್ಯ ಸುಂದರಗೊಳಿಸಬೇಕು. ಕಲ್ಯಾಣ ಕರ್ನಾಟಕ ಭಾಗದ ನಿರುದ್ಯೋಗಿ ಯುವಕ, ಯುವತಿಯರಿಗೆ ವರದಾನವಾಗಿರುವ 371ಜೆ ಕಲಂನ ಅಂಶ ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಉನ್ನತ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಸಾಧ್ಯ, ಪರಿಸರದ ಸ್ವಚ್ಛತೆ ಬಹಳ ಮುಖ್ಯವಾಗಿದ್ದು. ಮಾಲಿನ್ಯ ತೊಡೆದುಹಾಕಬೇಕಿದೆ ಎಂದು ಸ್ವಚ್ಛತೆಯ ಕುರಿತು ಜಾಗೃತಿ ಗೀತೆ ಹಾಡಿ ಗಮನ ಸೆಳೆದರು.

ನೆರೆಬೆಂಚಿ ಗ್ರಾಪಂ ಉಪಾಧ್ಯಕ್ಷೆ ಜಯಮ್ಮ ಬಸವರಾಜ ಉಪ್ಪಲದಿನ್ನಿ ಕಾರ್ಯಕ್ರಮ ಉದ್ಘಾಟಿಸಿದರು. ಜನಜಾಗೃತಿ ಕಲಾರಂಗ ಸಂಸ್ಥೆಯ ಅಧ್ಯಕ್ಷರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶರಣಪ್ಪ ವಡಿಗೇರಿ ಅಧ್ಯಕ್ಷತೆ ವಹಿಸಿದ್ದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶರಣಪ್ಪ ಬನ್ನಿಗೋಳ ಅವರಿಂದ ಸುಗ್ಗಿಯ ಹಾಡು ಹಾಗೂ ದೇವೇಂದ್ರಪ್ಪ ಕಮ್ಮಾರ ಅವರಿಂದ ವಚನ ಗಾಯನ, ವೀರಯ್ಯ ಹಿರೇಮಠ ಮತ್ತು ಬಸವರಾಜ ಉಪ್ಪಲದಿನ್ನಿ ಅವರಿಂದ ಜಾಗೃತಿ ಗೀತೆಗಳ ಮೂಲಕ ಜನಮನ ರಂಜಿಸಿದರು. ಶಿವಲಿಂಗಪ್ಪ ಪೂಜಾರ ಅವರ ಕಲಾ ತಂಡದವದಿಂದ ಸ್ವಚ್ಛ ಭಾರತ ಮತ್ತು ಶೈಕ್ಷಣಿಕ ಜಾಗೃತಿ ವಿಷಯದ ಕುರಿತು ಅರಿವು ಮೂಡಿಸುವ ಬೀದಿನಾಟಕ ಕಾರ್ಯಕ್ರಮ ಪ್ರದರ್ಶಿಸಿದರು.ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯರಾದ ಶೇಖಪ್ಪ ಮ್ಯಾಗಳಮನಿ, ಹನಮಗೌಡ ಪಾಟೀಲ, ಶರಣಪ್ಪ ಮೇಟಿ, ಚಂದ್ರಶೇಖರ ಗದ್ದಿ, ಭರಮಣ್ಣ ಕಲಗೋಡಿ, ದುರುಗವ್ವ, ಲೋಕೇಶ ಪಾಟೀಲ, ಬಾನುಬೇಗಂ, ಮಂಜುನಾಥ, ಶರಣಗೌಡ ಮತ್ತು ನಾಗರಾಜ ಉಪಸ್ಥಿತರಿದ್ದರು.