ದಾಬಸ್‍ಪೇಟೆ: ಸೋಂಪುರ ಹೋಬಳಿಯ ಹಳೆನಿಜಗಲ್ ಗ್ರಾಮದ ಶ್ರೀ ಉದ್ಧಾನ ವೀರಭದ್ರ ದೇವಾಲಯಕ್ಕೆ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣನವರು ತಮ್ಮ ಧರ್ಮಪತ್ನಿ ಶೈಲಜಾರವರ ಜೊತೆ ಭೇಟಿ ನೀಡಿ ಉದ್ಧಾನ ವೀರಭದ್ರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.

ತಮ್ಮ ಪತ್ನಿಯ ಮನೆದೇವರು ಇದಾಗಿದ್ದು, ತುಮಕೂರಿನ ಲೋಕಸಭಾ ಸದಸ್ಯನಾದ ಮೇಲೆ ಹೆಚ್ಚು ಈ ರಸ್ತೆಯಲ್ಲೇ ಪ್ರಯಾಣ ಮಾಡುತ್ತಿದ್ದರೂ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆಯಲು ಸಾಧ್ಯವಾಗಿರಲಿಲ್ಲ. ಈಗ ಕಾಲ ಕೂಡಿ ಬಂದಿದ್ದು, ಈ ದೇವಾಲಯ ಪ್ರಕೃತಿಯ ಮಡಿಲಿನಲ್ಲಿರುವುದು ಮನಸ್ಸಿಗೆ ಹಿತವನ್ನುಂಟು ಮಾಡಿದೆ. ಪಕ್ಕದಲ್ಲೇ ಮಠವಿದ್ದು ಉತ್ತಮ ಸೌಂದರ್ಯ ಸವಿಯಬಹುದು. ದೇವಾಲಯದ ಇತಿಹಾಸ ಕೇಳಿ ಬಹಳ ಸಂತಸವಾಗಿದ್ದು, ಇದೊಂದು ಪ್ರಾಚೀನ ದೇವಾಲಯವಾಗಿದೆ. ಈ ದೇವಾಲಯಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮವಹಿಸುತ್ತೇನೆ ಎಂದರು.

ಧಾರ್ಮಿಕ ಧತ್ತಿ ಇಲಾಖೆಯ ಇಒ ಬೃಂದಾ, ಪಾರುಪತ್ತೇದಾರ್ ಗಳಾದ ಪ್ರಭುದೇವ್, ಸುರೇಶ್, ಕೊರಟಗೆರೆ ತಾಲೂಕು ಬಿಜೆಪಿ ಅಧ್ಯಕ್ಷ ರುದ್ರೇಶ್ ಸೇರಿದಂತೆ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.