ದಾಬಸ್‍ಪೇಟೆ: ರೈತರು ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲು ನೀಡಿದರೆ ನಂದಿನಿ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಿ, ಲಾಭ ಗಳಿಸಲು ಸಾಧ್ಯ ಎಂದು ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ತಿಳಿಸಿದರು

ದಾಬಸ್‍ಪೇಟೆ: ರೈತರು ಸಹಕಾರ ಸಂಘಗಳಿಗೆ ಗುಣಮಟ್ಟದ ಹಾಲು ನೀಡಿದರೆ ನಂದಿನಿ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಿ, ಲಾಭ ಗಳಿಸಲು ಸಾಧ್ಯ ಎಂದು ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ತಿಳಿಸಿದರು.

ನೆಲಮಂಗಲದ ಬಮೂಲ್ ಕಚೇರಿಯಲ್ಲಿ ರೈತರಿಗೆ ಹಾಲು ಕರೆಯುವ ಯಂತ್ರ ಹಾಗೂ ಹಸುವಿನ ಮ್ಯಾಟ್ ಗಳನ್ನು ವಿತರಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಬೆಲೆಯೂ ಸಿಗದೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇದರಿಂದ ಅನೇಕ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ, ಆದರೆ ಹಾಲಿನ ಬೆಲೆ ಏರಿಕೆಯಾಗಿಲ್ಲ. ಕೂಡಲೇ ಹಾಲಿನ ದರ ಏರಿಸಬೇಕೆಂದು ಮನವಿ ಮಾಡಿದರು.

ರೈತರ ಹಿತರಕ್ಷಣೆಗಾಗಿ ನಮ್ಮ ಶಿಬಿರದ ವತಿಯಿಂದ 67 ಹಾಲು ಕರೆಯುವ ಯಂತ್ರ, 4918 ಮ್ಯಾಟ್ ಗಳಿಗೆ ರೈತರು ನೋಂದಾಯಿಸಿದ್ದು, ಇದೀಗ 1402 ಮ್ಯಾಟ್ ಗಳನ್ನು ವಿತರಿಸಿದ್ದೇವೆ ಎಂದರು.

ಬಮೂಲ್ ಶಿಬಿರದ ಮುಖ್ಯಸ್ಥ ಆದರ್ಶ್ ಮಾತನಾಡಿ, ಗುಣಮಟ್ಟದ ಹಾಲು ಉತ್ಪಾದನೆಗೆ ರೈತರು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು. ರಾಸುಗಳಿಗೆ ಪೌಷ್ಟಿಕ ಆಹಾರ ನೀಡಬೇಕು. ಪ್ರತಿದಿನ 100 ಗ್ರಾಂ ಖನಿಜ ಮಿಶ್ರಣ ರಾಸುಗಳಿಗೆ ನೀಡಿದರೆ ಗುಣಮಟ್ಟದ ಹಾಲು ದೊರೆಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ವೈದ್ಯ ಸಾಗರಗೌಡ, ಬಮೂಲ್ ಟ್ರಸ್ಟ್ ಮೇಲ್ವಿಚಾರಕ ರಮೇಶ್, ವಿಸ್ತರಣಾಧಿಕಾರಿಗಳು, ಡೇರಿ ಅಧ್ಯಕ್ಷರು, ಕಾರ್ಯದರ್ಶಿಗಳು, ರೈತರು, ಬಮೂಲ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

]-ಪೋಟೋ 2 : ನೆಲಮಂಗಲದ ಬಮೂಲ್ ಕಚೇರಿಯಲ್ಲಿ ರೈತರಿಗೆ ಹಾಲು ಕರೆಯುವ ಯಂತ್ರ ಹಾಗೂ ಹಸುವಿನ ಮ್ಯಾಟ್ ಗಳನ್ನು ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ವಿತರಿಸಿದರು.