ಹಳ್ಳಿಕಾರ್ ರಾಸುಗಳ ವಿಶಿಷ್ಟ ಸೌಂದರ್ಯ ಸ್ಪರ್ಧೆ

| Published : Mar 13 2024, 02:06 AM IST

ಸಾರಾಂಶ

ಹಳ್ಳಿಕಾರ್ ರಾಸುಗಳ ಸೌಂದರ್ಯ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ತೇರಿನ ಬೀದಿ ಬಾಬು ಮಾಲಿಕತ್ವದ ರಾಸುಗಳಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ರುಪಾಯಿ ನಗದು ಮತ್ತು ಫಲಕ, ಕುಂಟನಹಳ್ಳಿ ರುದ್ರೇಗೌಡರ ರಾಸುಗಳಿಗೆ ದ್ವಿತೀಯ ಬಹುಮಾನವಾಗಿ 10 ಸಾವಿರ ರುಪಾಯಿ ನಗದು ಮತ್ತು ಫಲಕ, ನಾಗೇನಹಳ್ಳಿ ಅಶ್ವತ್ ನಾರಾಯಣ ಮಾಲೀಕತ್ವದ ರಾಸುಗಳಿಗೆ ತೃತೀಯ ಬಹುಮಾನವಾಗಿ 5 ಸಾವಿರ ರುಪಾಯಿ ನಗದು ಮತ್ತು ಫಲಕ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ತಾಲೂಕಿನ ಹಾಡೋನಹಳ್ಳಿಯಲ್ಲಿ ನವ ಕರ್ನಾಟಕ ಯುವಶಕ್ತಿ ವೇದಿಕೆಯಿಂದ ಮಹಾಶಿವರಾತ್ರಿ ಪ್ರಯುಕ್ತ ಹಳ್ಳಿಕಾರ್ ಹಸುಗಳ ವಿಶಿಷ್ಟ ಸೌಂದರ್ಯ ಸ್ಪರ್ಧೆ ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜೆಡಿಎಸ್‌ ಮುಖಂಡ ಹರೀಶ್ ಗೌಡ, ಹಳ್ಳಿಕಾರ್ ತಳಿಯ ರಾಸುಗಳು ಇಡೀ ಕರ್ನಾಟಕದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿರುವ ದೇಶಿ ತಳಿಯ ಹಸುಗಳು. ಜಮೀನಿನ ಉಳುಮೆ, ಎತ್ತಿನ ಗಾಡಿ, ಗಾಣದ ಕೆಲಸ ಇತ್ಯಾದಿ ಕಠಿಣ ಕೆಲಸಗಳೊಂದಿಗೆ ಉತ್ತಮ ಗುಣಮಟ್ಟದ ಹಾಲು ಕೊಡುವುದು ಹಳ್ಳಿಕಾರ್‌ ತಳಿಯ ವಿಶೇಷ. ಅದರ ಜೊತೆಜೊತೆಗೆ ಈ ತಳಿಯ ಎತ್ತುಗಳನ್ನು ಎತ್ತಿನ ಗಾಡಿ ಸ್ಪರ್ಧೆ, ಜಾತ್ರೆಗಳಲ್ಲಿ ಜೋಡೆತ್ತುಗಳ ಪ್ರದರ್ಶನದಲ್ಲಿ ಪ್ರತಿಷ್ಠೆಯಾಗಿ ಪರಿಗಣಿಸಿ ಸಾಕುವುದಕ್ಕೂ ಬಳಸುತ್ತಾರೆ ಎಂದರು.

ನವ ಕರ್ನಾಟಕ ಯುವಶಕ್ತಿ ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್ ಮಾತನಾಡಿ, ಹಳ್ಳಿಕಾರ್ ತಳಿ ದನಗಳು ಈಗೀಗ ಕಣ್ಮರೆಯಾಗುತ್ತಿವೆ. ವ್ಯವಸಾಯದ ಕೆಲಸಗಳು ಯಾಂತ್ರಿಕವಾಗಿ ದನಗಳನ್ನು ವ್ಯವಸಾಯಕ್ಕಾಗಿ ಸಾಕುವ ಪ್ರವೃತ್ತಿ ಕಡಿಮೆಯಾಗುತ್ತಿದೆ. ಹಾಲಿನ ಉತ್ಪಾದನೆಗಾಗಿ ಮಿಶ್ರತಳಿ ಹಸುಗಳನ್ನು ಸಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದ್ದರಿಂದ ಭಾರತದ ಪರಂಪರೆಯ ಸಂಪತ್ತಾಗಿರುವ ಹಳ್ಳಿಕಾರ್ ತಳಿಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

100ಕ್ಕೂ ಹೆಚ್ಚು ಹಳ್ಳಿಕಾರ್‌ ರಾಸುಗಳು ಭಾಗಿ:

ಸ್ಪರ್ಧೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಭಾಗವಹಿಸಿ ತಮ್ಮ ಸೌಂದರ್ಯ ಪ್ರದರ್ಶಿಸಿದವು. ಬಿಗ್ ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್, ಸೈಕ್ ನವಾಜ್ ಸೇರಿ ವಿವಿಧ ಚಲನಚಿತ್ರ ಕಲಾವಿದರು ಪಾಲ್ಗೊಂಡು ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿದರು. ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು. ಪುಟಾಣಿ ಮಕ್ಕಳ ಯೋಗ ಪ್ರದರ್ಶನ ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ಬಾಲ ಕಲಾವಿದ ಸಂತೋಷ್ ರೆಡ್ಡಿ ನಾಯಕತ್ವದ ನೂತನ ಕನ್ನಡ ಚಲನಚಿತ್ರ ಮಾನ್ಸ್ಟರ್ ಪೋಸ್ಟರನ್ನು ನಿರ್ಮಾಪಕ ಪುಟ್ಟರಾಜು ರೆಡ್ಡಿ ಬಿಡುಗಡೆಗೊಳಿಸಿದರು.

ವಿಜೇತರ ರಾಸುಗಳಿಗೆ ನಗದು ಬಹುಮಾನ:

ಹಳ್ಳಿಕಾರ್ ರಾಸುಗಳ ಸೌಂದರ್ಯ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ತೇರಿನ ಬೀದಿ ಬಾಬು ಮಾಲಿಕತ್ವದ ರಾಸುಗಳಿಗೆ ಪ್ರಥಮ ಬಹುಮಾನವಾಗಿ 20 ಸಾವಿರ ರುಪಾಯಿ ನಗದು ಮತ್ತು ಫಲಕ, ಕುಂಟನಹಳ್ಳಿ ರುದ್ರೇಗೌಡರ ರಾಸುಗಳಿಗೆ ದ್ವಿತೀಯ ಬಹುಮಾನವಾಗಿ 10 ಸಾವಿರ ರುಪಾಯಿ ನಗದು ಮತ್ತು ಫಲಕ, ನಾಗೇನಹಳ್ಳಿ ಅಶ್ವತ್ ನಾರಾಯಣ ಮಾಲೀಕತ್ವದ ರಾಸುಗಳಿಗೆ ತೃತೀಯ ಬಹುಮಾನವಾಗಿ 5 ಸಾವಿರ ರುಪಾಯಿ ನಗದು ಮತ್ತು ಫಲಕ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ರಾಸುಗಳ ಮಾಲೀಕರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು.

ಗ್ರಾಪಂ ಅಧ್ಯಕ್ಷ ನಾಗರಾಜು, ರಾಜ್ಯ ರೈತ ಸಂಘ ತಾಲೂಕು ಅಧ್ಯಕ್ಷ ಕಾಡನೂರು ಮೂರ್ತಿ, ಕನ್ನಡಪರ ಹೋರಾಟಗಾರ ಸಂಜೀವ್ ನಾಯಕ್, ರೈತ ತುರುವನಳ್ಳಿ ವಾಸು, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನೇಗೌಡ. ನಗರಸಭಾ ಸದಸ್ಯ ಮಲ್ಲೇಶ್, ಮುಖಂಡರಾದ ಪ್ರತಾಪ್, ಮುನಿಯಪ್ಪ, ಮಂಜುನಾಥ್, ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ಮತ್ತಿತರರು ಭಾಗವಹಿಸಿದ್ದರು.