ಕಲ್ಯಾಣ ಕರ್ನಾಟಕದ ತುರ್ತು ಚಿಕಿತ್ಸೆಯ ಕೊರತೆ ನೀಗಿಸಿರುವ ಯುನೈಟೆಡ್‌ ಆಸ್ಪತ್ರೆ 2012ರಲ್ಲಿ ಕಲಬುರಗಿಯಲ್ಲಿ ಪ್ರಾರಂಭವಾಗಿ ತನ್ನ ಒಂದೂವರೆ ದಶಕಗಳ ಪಯಣದಲ್ಲಿ ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿಗೂ ತನ್ನ ಜಾಲ ವಿಸ್ತರಿಸಿ ಸೈ ಎನ್ನಿಸಿಕೊಂಡಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ:

ಕಲ್ಯಾಣ ಕರ್ನಾಟಕದ ತುರ್ತು ಚಿಕಿತ್ಸೆಯ ಕೊರತೆ ನೀಗಿಸಿರುವ ಯುನೈಟೆಡ್‌ ಆಸ್ಪತ್ರೆ 2012ರಲ್ಲಿ ಕಲಬುರಗಿಯಲ್ಲಿ ಪ್ರಾರಂಭವಾಗಿ ತನ್ನ ಒಂದೂವರೆ ದಶಕಗಳ ಪಯಣದಲ್ಲಿ ಇದೀಗ ರಾಜ್ಯದ ರಾಜಧಾನಿ ಬೆಂಗಳೂರಿಗೂ ತನ್ನ ಜಾಲ ವಿಸ್ತರಿಸಿ ಸೈ ಎನ್ನಿಸಿಕೊಂಡಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಪಘಾತ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳ (ಟ್ರಾಮಾ- ಕೇರ್) ತೀವ್ರ ಕೊರತೆ ನಿವಾರಿಸಲು ಯುನೈಟೆಡ್‌ ಆಸ್ಪತ್ರೆ ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಇದೀಗ ಬೆಂಗಳೂರಿನ ರಾಜಾಜಿನಗರದಲ್ಲಿಯೂ ಕಲಬುರಗಿ ವೈದ್ಯ ಡಾ.ವಿಕ್ರಂ ಮುಂಚೂಣಿಯಲ್ಲಿದ್ದು ಕಟ್ಟಿರುವ ಯುನೈಟೆಡ್‌ ಆಸ್ಪತ್ರೆ ಜನಮನ ಸೆಳೆಯುತ್ತಿದೆ.

ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳು ಸುಧಾರಿತ ಚಿಕಿತ್ಸೆಗಾಗಿ ಮೈಲುಗಟ್ಟಲೆ ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಇತ್ತು. ಪ್ರತಿ ನಿಮಿಷವೂ ಜೀವನ್ಮರಣದ ಹೋರಾಟವಾಗಿರುವಾಗ, ಸಕಾಲದಲ್ಲಿ ಚಿಕಿತ್ಸೆ ಸಿಗುವುದೇ ದೊಡ್ಡ ಸವಾಲಾಗಿತ್ತು. ಇಂತಹ ವೇಳೆ ಯುನೈಟೆಡ್ ಆಸ್ಪತ್ರೆ ಮುಂಚೂಣಿಗೆ ಬಂದು ಸ್ಥಳೀಯವಾಗಿಯೇ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸಮುದಾಯಕ್ಕೆ ಅಗತ್ಯವಿದ್ದ ಸುಧಾರಿತ ಚಿಕಿತ್ಸೆಯನ್ನು ಅತ್ಯಂತ ಹತ್ತಿರವಾಗಿಸಿದೆ.

ಸುಧಾರಿತ ವೈದ್ಯಕೀಯ ಪರಿಣತಿ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಮುದಾಯದ ಅಗತ್ಯತೆಗಳೊಂದಿಗೆ ವಿಶಿಷ್ಟ ಆರೋಗ್ಯ ಮಾದರಿಯನ್ನು ಈ ಸಂಸ್ಥೆ ರೂಪಿಸಿದೆ. ‘ಕಾಯಿಲೆ ನಮ್ಮನ್ನು ಹುಡುಕಿಕೊಂಡು ಬರುವವರೆಗೆ ನಾವು ಕಾಯಬಾರದು’ ಎಂಬ ಸರಳ ಹಾಗೂ ದೃಢವಾದ ನಂಬಿಕೆಯೇ ಯುನೈಟೆಡ್‌ ಆಸ್ಪತ್ರೆ ಯಶಸ್ಸಿನ ಪಯಣದ ಹಿಂದಿನ ಪ್ರೇರಣಾ ಶಕ್ತಿ ಎನ್ನಬಹುದು.

ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಮೂಲಕ ವೈದ್ಯಕೀಯ ಸೇವೆಯನ್ನು ಹಳ್ಳಿಹಳ್ಳಿಗಳಿಗೂ ತಲುಪಿಸುವ ಕೆಲಸವನ್ನು ಆಸ್ಪತ್ರೆ ಮಾಡಿದ್ದರಿಂದ ಗ್ರಾಮೀಣ ಭಾಗದ 53,000ಕ್ಕೂ ಹೆಚ್ಚು ಜನರಿಗೆ ಉಚಿತ ಸಮಾಲೋಚನೆ ಮತ್ತು ಕಾಯಿಲೆಗಳ ಮುಂಚಿತ ಪತ್ತೆಗೆ ಇದು ಸಹಕಾರಿಯಾಗಿದೆ. ಕಲಬುರಗಿಯಲ್ಲಿ ಯುನೈಟೆಡ್‌ ಆಸ್ಪತ್ರೆ ಆಯೋಜಿಸುವ ಬೃಹತ್ ಆರೋಗ್ಯ ತಪಾಸಣಾ ಮತ್ತು ಉಚಿತ ಚಿಕಿತ್ಸಾ ಶಿಬಿರಗಳಿಂದ ಇದುವರೆಗೆ 30,000ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ.

18,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 3,000ಕ್ಕೂ ಹೆಚ್ಚು ಸಿಮೆಂಟ್ ಕಾರ್ಖಾನೆ ಕಾರ್ಮಿಕರು ಹಾಗೂ 2,000ಕ್ಕೂ ಹೆಚ್ಚು ಬ್ಯಾಂಕಿಂಗ್ ಕ್ಷೇತ್ರದ ವೃತ್ತಿಪರರಿಗಾಗಿ ವಾರ್ಷಿಕ ಆರೋಗ್ಯ ತಪಾಸಣಾ ಕಾರ್ಯಕ್ರಮಗಳನ್ನು ಯುನೈಟೆಡ್ ಆಸ್ಪತ್ರೆ ನಡೆಸಿಕೊಂಡು ಬರುತ್ತಿದೆ. ಇದು ಸಂಸ್ಥೆಗಳಲ್ಲಿ ಮುಂಜಾಗ್ರತಾ ಆರೋಗ್ಯ ಸಂಸ್ಕೃತಿಯನ್ನು ಬೆಳೆಸುತ್ತಿದೆ.

ಗಮನ ಸೆಳೆದ ಸಿಟಿ ಕ್ಯಾಲ್ಸಿಯಂ ಸ್ಕೋರ್‌ ಪರೀಕ್ಷೆ:

ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಹೃದ್ರೋಗ ಚಿಕಿತ್ಸೆಯಲ್ಲಿ ಯುನೈಟೆಡ್ ಹಾಸ್ಪಿಟಲ್ಸ್ ಮುಂಚೂಣಿಯಲ್ಲಿದೆ. ಕಳೆದ 2 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 25,000ಕ್ಕೂ ಹೆಚ್ಚು ‘ಸಿಟಿ ಕ್ಯಾಲ್ಸಿಯಂ ಸ್ಕೋರ್’ ಮತ್ತು ಕಾರ್ಡಿಯಾಕ್ ಮಾರ್ಕರ್ ಸ್ಕ್ಯಾನ್‌ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಅತ್ಯಾಧುನಿಕ ತಪಾಸಣೆಯು ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮುನ್ನವೇ ಹೃದಯದ ಅಪಾಯಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ. ಇಲ್ಲಿ ತಂತ್ರಜ್ಞಾನ ಎಂದರೆ ಕೇವಲ ದುಬಾರಿ ಉಪಕರಣಗಳನ್ನು ಹೊಂದುವುದಲ್ಲ, ಬದಲಿಗೆ ರೋಗಿಗಳಿಗೆ ನಿಖರ ಹಾಗೂ ವೇಗದ ಚಿಕಿತ್ಸೆ ನೀಡುವುದಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲೇ ಮೊದಲ ಬಾರಿಗೆ ಎನ್ನಬಹುದಾದ ಅತ್ಯಾಧುನಿಕ 384-ಸ್ಲೈಸ್ ಸಿಟಿ ಆಂಜಿಯೋಗ್ರಫಿ ವ್ಯವಸ್ಥೆಯನ್ನು ಯುನೈಟೆಡ್ ಆಸ್ಪತ್ರೆ ಅಳವಡಿಸಿಕೊಂಡಿದೆ.

ಹೃದಯ ರೋಗದ ಆರೈಕೆಯಲ್ಲಿ ಸ್ವಾವಲಂಬನೆ:

ಯುನೈಟೆಡ್ ಆಸ್ಪತ್ರೆಯು ಕೇವಲ ತುರ್ತು ಚಿಕಿತ್ಸೆಗೆ ಸೀಮಿತವಾಗದೆ, ಅತ್ಯಾಧುನಿಕ ರೋಗನಿರೋಧಕ ಮತ್ತು ಹೃದ್ರೋಗ ತಪಾಸಣಾ ಕೇಂದ್ರವಾಗಿದೆ. ಅತ್ಯಾಧುನಿಕ ‘ಕ್ಯಾಥ್-ಲ್ಯಾಬ್’ ಮತ್ತು ಪೂರ್ಣ ಪ್ರಮಾಣದ ಕಾರ್ಡಿಯಾಕ್ ಯುನಿಟ್ ಮೂಲಕ ತುರ್ತು ಹೃದಯಾಘಾತದ ನಿರ್ವಹಣೆಯಿಂದ ಹಿಡಿದು, ದೀರ್ಘಕಾಲೀನ ಮುನ್ನೆಚ್ಚರಿಕೆ ಕ್ರಮಗಳವರೆಗೆ ಸಮಗ್ರ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಒಂದೊಮ್ಮೆ ಇಂತಹ ಚಿಕಿತ್ಸೆಗಳಿಗಾಗಿ ಗಂಟೆಗಟ್ಟಲೆ ಪ್ರಯಾಣ ಮಾಡಬೇಕಾಗಿದ್ದ ಕಲ್ಯಾಣ ಕರ್ನಾಟಕದ ಜನರಿಗೆ ಇಂದು ಜಾಗತಿಕ ಗುಣಮಟ್ಟದ ಹೃದ್ರೋಗ ಚಿಕಿತ್ಸೆ ಒಂದೇ ಸೂರಿನಡಿ ಸ್ಥಳೀಯವಾಗಿ ಲಭ್ಯವಾಗುತ್ತಿದೆ.

ಯುನೈಟೆಡ್ ಹಾಸ್ಪಿಟಲ್ಸ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್ ಸಿದ್ದಾರೆಡ್ಡಿ ಅವರಿಗೆ ವೈದ್ಯಕೀಯ ಕ್ಷೇತ್ರವು ಕೇವಲ ಒಂದು ವೃತ್ತಿಯಲ್ಲ, ಅದೊಂದು ಜವಾಬ್ದಾರಿ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಆರೋಗ್ಯ ಸುಧಾರಣೆಗೆ ಶ್ರಮಿಸಿದ ಹಾಗೂ ಸಣ್ಣ ಕುಟುಂಬದ ಪರಿಕಲ್ಪನೆಯನ್ನು ಪ್ರಚಾರ ಮಾಡಿದ ಅವರ ತಂದೆ ಡಾ.ಎಸ್.ಎಸ್.ಸಿದ್ದಾರೆಡ್ಡಿ ಅವರ ಸೇವಾ ಮನೋಭಾವವೇ ಇವರಿಗೆ ಪ್ರೇರಣೆ. ಪಾರದರ್ಶಕತೆ, ಶ್ರೇಷ್ಠತೆ, ನಾವೀನ್ಯತೆ ಮತ್ತು ರೋಗಿಗಳಿಗೆ ಪ್ರಥಮ ಆದ್ಯತೆ ನೀಡುವುದು ಸಂಸ್ಥೆಯ ಮೂಲ ಮಂತ್ರಗಳಾಗಿವೆ.

-ಕೋಟ್‌-

ಕಾಯಿಲೆ ಬಂದ ನಂತರ ಚಿಕಿತ್ಸೆ ನೀಡುವುದಷ್ಟೇ ಆರೋಗ್ಯ ರಂಗದ ಕೆಲಸವಾಗಬಾರದು. ಭವಿಷ್ಯದ ದಿನಗಳಲ್ಲಿ ಜನರಿಗೆ ತಮ್ಮ ಆರೋಗ್ಯದ ಸ್ಥಿತಿಗತಿ ತಿಳಿಯುವ, ಅಪಾಯಗಳನ್ನು ಮೊದಲೇ ಅಂದಾಜಿಸುವ ಮತ್ತು ಮುನ್ನೆಚ್ಚರಿಕೆ ವಹಿಸುವ ಜ್ಞಾನ ಹಾಗೂ ಸೌಲಭ್ಯಗಳನ್ನು ನೀಡಬೇಕಿದೆ. ನಮ್ಮ ದೃಷ್ಟಿಕೋನವೂ ಅದೇ ಆಗಿದೆ. ಏಕೆಂದರೆ ತಡೆಗಟ್ಟುವಿಕೆ ಎಂಬುದು ಚಿಕಿತ್ಸೆಯ ಅತ್ಯಂತ ಶಕ್ತಿಶಾಲಿ ರೂಪ.

ಡಾ.ವಿಕ್ರಂ ಸಿದ್ದಾರೆಡ್ಡಿ ಅಧ್ಯಕ್ಷರು, ಎಂಡಿ ಯುನೈಟೆಡ್ ಹಾಸ್ಪಿಟಲ್ಸ್‌