ರಾಣಿಬೆನ್ನೂರು: ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸೋಮವಾರ ಸಂಜೆ ಸುರಿದ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದೆ. ಮಳೆಯಿಂದಾಗಿ ತಾಲೂಕಿನ ಚಳಗೇರಿ ಗ್ರಾಮದಲ್ಲಿ ಶಿವಾಜಿ ಲೆಕ್ಕಿಕೋಣಿ ಎಂಬುವರ ಮನೆಯ (ತಗಡಿನ) ಚಾವಣಿ ಕುಸಿದು ಬಿದ್ದಿದೆ. ಗ್ರಾಮದ ಸಿಇಎಸ್ ಶಿಕ್ಷಣ ಸಂಸ್ಥೆಯ ಶಾಲಾ ಕೊಠಡಿಗಳ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಆಲದಕಟ್ಟಿ ಗ್ರಾಮದಲ್ಲಿ ಚಾವಣಿ ಕುಸಿದಿದೆ. ಕರೂರ ಗ್ರಾಮದಲ್ಲಿ ಶಿವರಾಜ ಬಣಕಾರ ಎಂಬುವರ ರೇಷ್ಮೆ ಮನೆಗೆ ಹಾನಿಯಾಗಿದೆ. ತಿರುಮಲದೇವರಕೊಪ್ಪ ಗ್ರಾಮ, ಉಕ್ಕುಂದ ಗ್ರಾಮಗಳಲ್ಲಿ ದನದ ಮನೆಯ ಚಾವಣಿಗೆ ಹಾನಿಯಾಗಿದೆ. ಎಣ್ಣಿಹೊಸಳ್ಳಿ ಗ್ರಾಮದಲ್ಲಿ ಮನೆಯ ಮೇಲೆ ಮರ ಬಿದ್ದು ಹಾಗೂ ಸಿಡಿಲಿನಿಂದ ಮನೆಯ ಕುಂಬಿ ಹಾನಿಯಾಗಿದೆ. ಪದ್ಮಾವತಿಪುರ ಗ್ರಾಮದಲ್ಲಿ ಮನೆಯ ಚಾವಣಿ ತಗಡುಗಳು ಹಾರಿ ಹೋಗಿವೆ. ರಾಣಿಬೆನ್ನೂರು ನಗರದಲ್ಲಿ ಕುಬೇರಪ್ಪ ಸರ್ವಂದ ಹಾಗೂ ನಂಜಪ್ಪ ಬಸನಗೌಡ್ರ ಎಂಬುವರಿಗೆ ಸೇರಿದ 5 ಮೇಕೆ, ಒಂದು ಕುರಿ ಸಿಡಿಲು ಬಡಿದು ಸಾವನ್ನಪ್ಪಿವೆ ಹಾಗೂ ಮಳೆ ನೀರಿನ ಸೆಳವಿಗೆ 15 ಕುರಿಮರಿಗಳು ತೇಲಿ ಹೋಗಿವೆ ಎಂದು ತಹಸೀಲ್ದಾರ್ ಆರ್.ಎಚ್.ಭಾಗವಾನ ತಿಳಿಸಿದ್ದಾರೆ. ಶಾಸಕ ಪ್ರಕಾಶ ಕೋಳಿವಾಡ ಭೇಟಿ: ಶಾಸಕ ಪ್ರಕಾಶ ಕೋಳಿವಾಡ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.