ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು ನೂರಾರು ಸುಪ್ತ ಪ್ರತಿಭೆಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಗಣನೀಯ ಪಾತ್ರ ವಹಿಸುತ್ತಿದೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲೂಕು ಘಟಕದ ಅಧ್ಯಕ್ಷೆ ಕೆ.ಸಿ.ಗೀತಾ ಅಭಿಪ್ರಾಯಪಟ್ಟರು.
ಶಾಂತಿನಗರದ ಕವಯಿತ್ರಿ ಎಚ್.ಬಿ.ಚೂಡಾಮಣಿರವರ ಅನ್ನಪೂರ್ಣೇಶ್ವರಿ ನಿಲಯದಲ್ಲಿ ಹಮ್ಮಿಕೊಂಡಿದ್ದ ೨೯ ನೇ ‘ಸಾಹಿತ್ಯ ಪಯಣ ಹೆಜ್ಜೆ’ ಹಾಗೂ ಮಾರುತಿ ಬೇಲೂರು ಅವರ ‘ಪ್ರೇಮ ವೀಣೆ’ ಕೃತಿ ವಿಮರ್ಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ತಾಲೂಕು ಘಟಕ ಮಕ್ಕಳ ಕಥಾ ಕಮ್ಮಟ, ಪುಸ್ತಕ ವಿಮರ್ಶೆ, ಕನ್ನಡ ರಸಪ್ರಶ್ನೆ ಕಾರ್ಯಕ್ರಮ, ದಸರಾ ಕವಿಗೋಷ್ಠಿ, ಉಪನ್ಯಾಸ ಕಾರ್ಯಕ್ರಮ ಹೀಗೆ ಹತ್ತು ಹಲವು ಮೌಲ್ಯಭರಿತ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.
ಮುಂದಿನ ದಿನಗಳಲ್ಲಿ ಕವಿಗಳ ಕ್ಷೇತ್ರ ಭೇಟಿ, ಕಾವ್ಯ ಕಮ್ಮಟ, ಸಾಹಿತ್ಯ ಶಿಬಿರ, ಸಾಹಿತ್ಯ ಸಮ್ಮೇಳನಗಳಂತಹ ಮಹತ್ತರ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಿದ್ದೇವೆ. ಸಾಹಿತ್ಯ ಎನ್ನುವುದು ಸರ್ವರ ಹಿತ ಬಯಸುವುದಾಗಿದೆ.
ಇಂತಹ ಸಾಹಿತ್ಯ ಗೋಷ್ಠಿಗಳು ನಮ್ಮಲ್ಲಿನ ಮಾನಸಿಕ ಒತ್ತಡವನ್ನು ದೂರಮಾಡಿ ಮನೋಲ್ಲಾಸ ನೀಡುತ್ತದೆ. ನಾವಿಲ್ಲಿ ಸೇರುವ ಎರಡ್ಮೂರು ಗಂಟೆಗಳಲ್ಲಿ ಎಲ್ಲಾ ಜಂಜಾಟಗಳನ್ನು ಮರೆತು ಮಕ್ಕಳಾಗಿಬಿಡುತ್ತೇವೆ ಎಂದರು.
ಯುವ ಕವಿ ನಿರಂಜನ್ ಎ.ಸಿಯವರು ಕವಿ ಮಾರುತಿ ಬೇಲೂರುರ ‘ಪ್ರೇಮವೀಣೆ’ ಕೃತಿ ಕುರಿತು ಮಾತನಾಡಿ, ‘ಪ್ರೇಮ ವೀಣೆ’ ಎಂಬ ಶೀರ್ಷಿಕೆ ನೋಡಿದ ತಕ್ಷಣ ಪ್ರೇಮ ಕವಿತೆಗಳ ಸಂಕಲನವೆಂದೆನ್ನಿಸುತ್ತದೆ.
ಆದರೆ, ಇವರ ಕೃತಿಯಲ್ಲಿ ಎಲ್ಲಾ ಕವಿತೆಗಳೂ ಕೂಡ ಸಮಾಜಿಕ ಕಳಕಳಿಯುಳ್ಳ ಕವಿತೆಗಳಿರುತ್ತವೆ, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಪ್ರಯತ್ನ ಮಾರುತಿಯವರು ಕೃತಿಯ ಮೂಲಕ ಮಾಡಿದ್ದಾರೆ. ಮಾರುತಿ ದೊಡ್ಡಕೋಡಿಹಳ್ಳಿಯವರ ‘ಪ್ರೇಮವೀಣೆ’ ಕವನ ಸಂಕಲನದ ಎಲ್ಲಾ ಕವಿತೆಗಳೂ ಓದುಗನ ಹೃದಯವನ್ನು ಕಂಪಿಸಿವೆ ಎಂದರು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಕೇಂದ್ರ ಸಮಿತಿಯ ಕೋಶಾಧ್ಯಕ್ಷ ಎಚ್.ಎಸ್. ಬಸವರಾಜ್, ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ಪ್ರಾಯೋಜಕಿ ಎಚ್.ಬಿ.ಚೂಡಾಮಣಿ ಹಾಗೂ ವೀರಶೆಟ್ಟಿ ದಂಪತಿ,
ಗೈಡ್ ಲೀಡರ್ ಎಚ್.ಜಿ. ಕಾಂಚನಮಾಲಾ, ಪ್ರೇಮವೀಣೆ ಕೃತಿಕತೃ ಮಾರುತಿ ದೊಡ್ಡ ಕೋಡಿಹಳ್ಳಿ, ವಿಜ್ಞಾನ ಬರಹಗಾರ ಅಹಮದ್ ಹಗರೆ, ಲೇಖಕಿ ಕೆ.ಟಿ.ಜಯಶ್ರೀ, ಪ್ರಕಾಶ್ ಸೇರಿ ಹಲವರಿದ್ದರು.
ಕವಿಗೋಷ್ಠಿ ಮತ್ತು ಸಂವಾದ: ನಂತರ ನಡೆದ ಕವಿಗೋಷ್ಠಿ ಮತ್ತು ಸಂವಾದದಲ್ಲಿ ಲಲಿತಾ ಎಸ್, ಎಂ.ಮಂಜುನಾಥ್, ಎಚ್.ಎನ್.ಭಾರತಿ, ಧರ್ಮರಾಜ್ ಶಾಂತಿನಗರ , ಪಲ್ಲವಿ ಬೇಲೂರು,
ಧರ್ಮ ಕೆರಲೂರು, ಗಿರಿಜಾ ನಿರ್ವಾಣಿ, ರೇಖಾ ಪ್ರಕಾಶ್, ಪದ್ಮಾವತಿ ವೆಂಕಟೇಶ್, ಅಶ್ವಿನಿ ಪಿ.ರಘು, ಎಚ್.ಬಿ.ಚೂಡಾಮಣಿ, ಮಾರುತಿ ಕೆ.ಬಿ.ದೊಡ್ಡಕೋಡಿಹಳ್ಳಿ ಸೇರಿ ಹಲವರು ಭಾಗವಹಿಸಿದ್ದರು.
ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕ ಮಾತನಾಡಿದರು, ಕೇಂದ್ರ ಸಮಿತಿಯ ನಾಗರಾಜ್ ದೊಡ್ಡಮನಿ ಸ್ವಾಗತಿಸಿದರು, ಎಚ್.ಎಸ್. ಬಸವರಾಜ್ ನಿರೂಪಿಸಿದರು, ಕವಯಿತ್ರಿ ಪಲ್ಲವಿ ಬೇಲೂರು ಪ್ರಾರ್ಥಿಸಿದರು, ಶಿಕ್ಷಕಿ ಕೆ.ವಿ.ಕವಿತ ವಂದಿಸಿದರು.