ಮಕ್ಕಳು ತಮ್ಮ ಮುಂದಿನ ಜೀವನವನ್ನು ಹೇಗೆ ಸಾಗಿಸಬೇಕು ಎನ್ನುವುದರ ಸಂಸ್ಕಾರ ಕಲಿಸುವ ವಿಧಾನವೇ ಈ ಉಪನಯನ ವಿಧಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಮಕ್ಕಳು ತಮ್ಮ ಮುಂದಿನ ಜೀವನವನ್ನು ಹೇಗೆ ಸಾಗಿಸಬೇಕು ಎನ್ನುವುದರ ಸಂಸ್ಕಾರ ಕಲಿಸುವ ವಿಧಾನವೇ ಈ ಉಪನಯನ ವಿಧಿ. ಇದು ಮಕ್ಕಳಿಗೆ ಧಾರ್ಮಿಕ ಸಂಸ್ಕಾರಗಳನ್ನು ವಿಧಿವತ್ತಾಗಿ ಪಾಲಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಕುರಿತು ತಿಳಿವಳಿಕೆ ನೀಡುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ನಗರದ ತುಳಜಾ ಭವಾನಿ ದೇವಸ್ಥಾನದ ಬಳಿ ಕ್ಷತ್ರಿಯ ಮರಾಠಾ ಸಮಾಜ (96/ಶಾಂಣ್ಣವ ಕುಳಿ) ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಮರಾಠಾ ಸಮಾಜದವರ ಮಕ್ಕಳ ಉಚಿತ ಸಾಮೂಹಿಕ ಉಪನಯನ ಸಂಸ್ಕಾರ ಕಾರ್ಯಕ್ರಮ ಹಾಗೂ ಮರಾಠಾ ಮೆಟ್ರಿಮೋನಿ ವೆಬ್‌ಸೈಟ್‌ನಲ್ಲಿ ವಧು-ವರರ ನೋಂದಣಿ ಹಾಗೂ ಪಾಲಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಉಪನಯನ ಮಾಡಿಸಿಕೊಳ್ಳಲು ಮಕ್ಕಳು ಅನೇಕ ಕಾರಣಗಳಿಂದ ಹಿಂಜರಿಯುತ್ತಾರೆ. ಆದರೆ, ಅವರಿಗೆ ಈ ಉಪನಯನದ ಮಹತ್ವವನ್ನು ಮನಗಾಣಿಸಿ ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ್ದು ನಿಜಕ್ಕೂ ಶ್ಲಾಘನೀಯ. ಸಾಮೂಹಿಕವಾಗಿ ಉಪನಯನ ಅಥವಾ ವಿವಾಹಗಳನ್ನು ಆಯೋಜಿಸುವುದು ಸಮಾಜದಲ್ಲಿ ಒಗ್ಗಟ್ಟು ಮೂಡಿಸುತ್ತದೆ. ಮರಾಠಾ ಸಮಾಜಕ್ಕೆ ಮತ್ತು ಬಿಜೆಪಿಗೆ ಅವಿನಾಭಾವ ಸಂಬಂಧವಿದೆ. ಏಕೆಂದರೆ ಅಂದು ಛತ್ರಪತಿ ಶಿವಾಜಿ ಮಹಾರಾಜರು ಪಾಲಿಸಿದ ಆದರ್ಶಗಳಾದ ಯಾವುದೇ ಭೇದ-ಭಾವ ಅಥವಾ ಪಕ್ಷಪಾತವಿಲ್ಲದೆ ಎಲ್ಲರನ್ನೂ ಸಮಾನತೆಯಿಂದ ಕಾಣುವ ಹಿಂದುತ್ವದ ದೃಷ್ಟಿಕೋನವನ್ನು ಇಂದು ಬಿಜೆಪಿ ಪಾಲಿಸುತ್ತ ಬಂದಿದೆ. ಅಲ್ಲದೆ ಹಿಂದುತ್ವವನ್ನು ಪ್ರತಿಪಾಲಿಸುತ್ತ ಬಂದಿರುವ ಮರಾಠಾ ಸಮಾಜ ಎಂದಿಗೂ ನನ್ನ ಮತ್ತು ಬಿಜೆಪಿ ಬೆಂಬಲಕ್ಕೆ ನಿಂತಿದ್ದು, ಇದಕ್ಕೆ ನಾನು ಚಿರಋಣಿಯಾಗಿದ್ದೇನೆ ಎಂದರು.

ಸಾನ್ನಿಧ್ಯ ವಹಿಸಿದ್ದ ಬೆಂಗಳೂರು ಗವಿಪುರಂನ ಶ್ರೀ ಭವಾನಿ ದತ್ತಪೀಠದ ಗೋಸಾಯಿ ಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ಮರಾಠಾ ಸಮಾಜ ಹಿಂದುಳಿದಿದೆ.. ಇಂದು ಸಾಮೂಹಿಕವಾಗಿ ಉಪನಯನ ಕಾರ್ಯಕ್ರಮವನ್ನು ಮಾಡುವ ಮೂಲಕ ಸಮಾಜದ ಅಸ್ತಿತ್ವವನ್ನು ಉಳಿಸುವ ನಿಟ್ಟಿನಲ್ಲಿ ನಮ್ಮ ಸಂಪ್ರದಾಯ ಉಳಿಸುವ ಮತ್ತು ಅದನ್ನು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ಒಂದು ಉತ್ತಮ ಕಾರ್ಯವನ್ನು ಕ್ಷತ್ರಿಯ ಮರಾಠಾ ಸಮಾಜ (96/ಶಾಂಣ್ಣವ ಕುಳಿ) ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಆಗಿದೆ. ಈ ತರಹದ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಮತ್ತು ಸಮಾಜ ಬಾಂಧವರು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.

ಮರಾಠಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮರಿಯೋಜಿರಾವ್‌, ವ್ಯವಸ್ಥಾಪಕ ನಿರ್ದೇಶಕ ಶಂಕರ ಪಾಗೋಜಿ, ಕೇಶವ ಯಾದವ, ರಮೇಶ ಮಹದೇವಪ್ಪನವರ, ದಿನೇಶ ವಾಘಮೊರೆ, ಸುನೀಲ ದಳವಿ ಸೇರಿದಂತೆ ಹಲವರು ಮಾತನಾಡಿದರು.

ಭೀಮರಾವ್‌ ಪವಾರ ಅಧ್ಯಕ್ಷತೆ ವಹಿಸಿದ್ದರು. ಶೈಲೇಂದ್ರ ಹೊನ್ನಳ್ಳಿ, ಅಪ್ಪಾಸಾಹೇಬ ಚವ್ಹಾಣ, ಶಂಕರರಾವ್‌ ಮೋಹಿತೆ, ವಿನೋದ ಜಾಧವ, ಜ್ಯೋತಿಬಾ ಶಿಂಧೆ, ಅರುಣ ಶಿರ್ಕೆ, ನಾರಾಯಣ ಮೋಹಿತೆ, ಅರುಣ ಗೋಳೆ, ಶ್ಯಾಮರಾವ ಶಿಂಧೆ, ಲಕ್ಷ್ಮಣರಾವ ಶಿಂಧೆ, ರಮೇಶ ಸೂರ್ಯವಂಶಿ, ಸಂಜಯ ಸಾಠೇ, ಪ್ರಕಾಶ ಹರಚಿನ್ನವರ, ಮಾರುತಿ ಪರಬತ, ವಸಂತರಾವ್‌ ಕರಾಡೆ, ಸುರೇಶ ಚವ್ಹಾಣ ಸೇರಿದಂತೆ ಹಲವರಿದ್ದರು. ಮೀನಾಕ್ಷಿ ಶಿಂಧೆ ಸ್ವಾಗತಿಸಿದರು. ಮಹೇಂದ್ರ ಚವ್ಹಾಣ ನಿರೂಪಿಸಿದರು. ದಶರಥ ಕುರೋಡೆ ವಂದಿಸಿದರು.