ಪ.ಜಾತಿ ಹಾಗೂ ಪ.ಪಂಗಡದವರಿಗಿಂತ ಉಪ್ಪಾರ ಸಮಾಜ ಹಿಂದುಳಿದಿದೆ.
ಹರಪನಹಳ್ಳಿ: ರಾಜಕೀಯ ಶಕ್ತಿ, ಎಸ್ಸಿ-ಎಸ್ಟಿ ಸ್ಥಾನಮಾನ ಸಿಗದಿರುವುದರಿಂದ ಉಪ್ಪಾರ ಸಮಾಜಕ್ಕೆ ಅಭಿವೃದ್ಧಿ ಮರೀಚಿಕೆಯಾಗಿದೆ ಎಂದು ಹೊಸದುರ್ಗದ ಚಿನ್ಮೂಲಾದ್ರಿ ಶಿಲಾಪುರಿ ಸೂರ್ಯಸಿಂಹಾಸನ ಭಗೀರಥ ಪೀಠದ ಪೀಠಾಧ್ಯಕ್ಷ ಡಾ.ಪುರುಷೋತ್ತಮಾನಂದಪುರಿ ಶ್ರೀ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಕೆಳಗಿನ ಉಪ್ಪಾರಗೇರಿ ಗರಡಿ ಮನೆ ಹತ್ತಿರದ ಭಗೀರಥ ಮಹರ್ಷಿಗಳ ಭವ್ಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಅನಾವರಣ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಪ.ಜಾತಿ ಹಾಗೂ ಪ.ಪಂಗಡದವರಿಗಿಂತ ಉಪ್ಪಾರ ಸಮಾಜ ಹಿಂದುಳಿದಿದೆ. ಸಮಾಜವನ್ನು ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿಸಿ ಸಮಾಜದ ಏಳಿಗೆಗೆ ಸರ್ಕಾರ ಆದ್ಯತೆ ನೀಡಬೇಕು. ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆ ಇರುವ ಈ ಸಮಾಜದಿಂದ ಕನಿಷ್ಠ 10 ಜನರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಕರ್ನಾಟಕದಲ್ಲಿ ಉಪ್ಪಾರ ಸಮುದಾಯ ಅಧಿಕ ಜನಸಂಖ್ಯೆ ಹೊಂದಿದ್ದರೂ ನಿಗದಿತ ಪ್ರಮಾಣದ ರಾಜಕೀಯ ಪ್ರಾತಿನಿಧ್ಯ ಶಕ್ತಿ ದೊರಕಿಲ್ಲ. ಮುಂದಿನ ಬಾರಿ ಹರಪನಹಳ್ಳಿ ಕ್ಷೇತ್ರದಿಂದ ಡಾ.ಉಮೇಶ್ ಬಾಬು ಅವರಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಭಗೀರಥ ಮಹರ್ಷಿಗಳು ಕೇವಲ ಉಪ್ಪಾರ ಸಮಾಜಕ್ಕೆ ಸೀಮಿತರಾದವರಲ್ಲ. ಭೂಮಂಡಲದ ಪ್ರತಿ ಜೀವಿಯೂ ಅವರನ್ನು ಸ್ಮರಿಸಬೇಕು. ಗಂಗೆಯನ್ನು ಧರೆಗೆ ತರುವ ಮೂಲಕ ಸಕಲ ಜೀವರಾಶಿಗೆ ಜೀವನಾಧಾರ ನೀಡಿದ್ದಾರೆ. ಪೂರ್ವಜರ ಆತ್ಮಕ್ಕೆ ಶಾಂತಿ ಸಿಗಬೇಕೆಂದು ಭಗೀರಥರು ಬ್ರಹ್ಮ ಮತ್ತು ಈಶ್ವರನನ್ನು ಒಲಿಸಿಕೊಂಡು ಗಂಗೆಯನ್ನು ತಂದರು. ಭಗೀರಥ ಪ್ರಯತ್ನ ಇಂದಿನ ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆಯಾಗಿದೆ ಎಂದು ಕಿವಿಮಾತು ಹೇಳಿದರು.
ಹರಪನಹಳ್ಳಿಯಲ್ಲಿ ಕಳೆದ ಹಲವು ವರ್ಷಗಳಿಂದ ಉಪ್ಪಾರ ಸಮಾಜದ ಅಧ್ಯಕ್ಷರ ಆಯ್ಕೆಯಲ್ಲಿ ಗೊಂದಲವಾಗಿದ್ದು ಅದಷ್ಟು ಶೀಘ್ರದಲ್ಲಿ ಸಭೆ ಕರೆದು ಅಧ್ಯಕ್ಷರ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.2025-26ನೇ ಸಾಲಿನ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಉಮೇಶ್ ಬಾಬು, ದಾವಣಗೆರೆ ಮಹಾನಗರ ಪಾಲಿಕೆ ಉಪ ಮೇಯರ್ ಮಂಜಮ್ಮ, ತಾಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಅಂಜನಪ್ಪ, ಶಿಕ್ಷಕಿ ಲಕ್ಷ್ಮೀದೇವಿ, ರೈತ ಮುಖಂಡ ಪರಶುರಾಮ್ ಮಾತನಾಡಿದರು.ಈ ಸಂದರ್ಭದಲ್ಲಿ ಮಟ್ಟಿ ಹನುಮಂತಪ್ಪ, ಮಟ್ಟಿ ನಾಗರಾಜ್, ಉದ್ಯಮಿ ತಿರುಪತಿ, ಗುಡಿ ಕೆಂಚಪ್ಪ, ಜಮಾಲಿ ತಿಂದಪ್ಪ, ಜಮಾಲಿ ಕೆಂಚಪ್ಪ, ನಿವೃತ್ತ ಶಿಕ್ಷಕ ಭೀಮಪ್ಪ, ಇ.ಟಿ.ಶಿವಣ್ಣ, ಮಟ್ಟಿ ಮಾಲಪ್ಪ, ಹುಲುಗಪ್ಪ, ಕೆ.ತಿಮ್ಮಪ್ಪ, ಅಂಜಿನಪ್ಪ, ಗುಡಿ ಪರಶುರಾಮ್, ಯೋಗೀಶ್, ರಮೇಶ್, ಟಿ.ತಿಮ್ಮಣ್ಣ ಇದ್ದರು.