ಸಾರಾಂಶ
ಎಟಿಎಂ ಮಿಶಿನ್ನಲ್ಲಿ 3 ಲಕ್ಷ ರು.ಗೂ ಹೆಚ್ಚು ನಗದು ಇತ್ತೆಂಬ ಮಾಹಿತಿ ಇದೆ. ತಂತ್ರಜ್ಞರು ಬಂದು ಮೆಶಿನ್ ತೆರೆದ ಬಳಿಕವಷ್ಟೇ ನಗದು ಇದೆಯೋ, ಕಳ್ಳರ ಪಾಲಾಗಿದೆಯೋ ಎಂದು ತಿಳಿದು ಬರಲಿದೆ.
ಉಪ್ಪಿನಂಗಡಿ: ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್ಯ ಮೂರುಗೋಳಿ ಎಂಬಲ್ಲಿ ಕಾರ್ಯಾಚರಿಸುವ ಎಟಿಎಂ ಕೇಂದ್ರಕ್ಕೆ ಸೋಮವಾರ ತಡರಾತ್ರಿ ಕಳ್ಳರು ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ನಡೆದಿದೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಭೆಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಮ್ಮದ್ ಹರ್ಷದ್ ಎಂಬವರು ನಿರ್ವಹಿಸುತ್ತಿರುವ ಈ ಎಟಿಎಂ ಕೇಂದ್ರಕ್ಕೆ ಸೋಮವಾರ ತಡರಾತ್ರಿ ೧.೩೦ರ ಸುಮಾರಿಗೆ ಒಳ ನುಗ್ಗಿದ ಮುಸುಕುಧಾರಿ ಕಳ್ಳರು , ಕೈಗೆ ಗ್ಲೌಸ್ ಹಾಕಿ ಎಟಿಎಂ ಮಿಶಿನ್ನ ಒಂದು ಬಾಗಿಲನ್ನು ಮುರಿದು ಎರಡನೇ ಬಾಗಿಲನ್ನು ಮುರಿಯಲು ಪ್ರಯತ್ನಿಸಲಾಗಿದೆ. ಎರಡನೇ ಬಾಗಿಲು ಪಾಸ್ವರ್ಡ್ ಆಧಾರಿತ ಚಾಲನೆಗೊಳ್ಳುವ ವ್ಯವಸ್ಥೆ ಹೊಂದಿರುವುದುದರಿಂದ ಅದನ್ನು ತೆರೆಯಲು ಸಾಧ್ಯವಾಗಿಲ್ಲ ಎಂಬುದು ಅಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಟಿಎಂ ಮಿಶಿನ್ನಲ್ಲಿ 3 ಲಕ್ಷ ರು.ಗೂ ಹೆಚ್ಚು ನಗದು ಇತ್ತೆಂಬ ಮಾಹಿತಿ ಇದೆ. ತಂತ್ರಜ್ಞರು ಬಂದು ಮೆಶಿನ್ ತೆರೆದ ಬಳಿಕವಷ್ಟೇ ನಗದು ಇದೆಯೋ, ಕಳ್ಳರ ಪಾಲಾಗಿದೆಯೋ ಎಂದು ತಿಳಿದು ಬರಲಿದೆ. ಉಪ್ಪಿನಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.