ನೇತ್ರಾವತಿ- ಕುಮಾರಧಾರಾ ಸಂಗಮ, ಬಾಗಿನ ಸಮರ್ಪಣೆ

| Published : Jul 31 2024, 01:08 AM IST

ನೇತ್ರಾವತಿ- ಕುಮಾರಧಾರಾ ಸಂಗಮ, ಬಾಗಿನ ಸಮರ್ಪಣೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿ ನದಿಗಳೆರಡು ದೇವಳದ ಮುಂಭಾಗದಲ್ಲಿ ಪುನರಪಿ ಸಂಗಮಿಸಿ ಪವಿತ್ರ ಸಂಗಮ ಪೂಜೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ದೇವಳದತ್ತ ಆಗಮಿಸಿದರು

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಸತತ ಮಳೆಯಿಂದಾಗಿ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳೆರಡು ಉಕ್ಕಿ ಹರಿದು ಮಂಗಳವಾರದಂದು ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿ ನದಿಗಳೆರಡು ಪುನರಪಿ ಸಂಗಮಿಸಿದವು. ಈ ಸಂದರ್ಭ ಬಾಗಿನ ಸಮರ್ಪಣೆ, ಗಂಗಾ ಪೂಜೆ ಹಾಗೂ ಪವಿತ್ರ ಸಂಗಮ ತೀರ್ಥ ಸ್ನಾನ ಜರುಗಿತು. ಮಂಗಳವಾರ ಮಧ್ಯಾಹ್ನದಿಂದ ಅಪಾಯದ ಮಟ್ಟವನ್ನು ಮೀರಿ ಹರಿದ ನೇತ್ರಾವತಿಯು ದೇವಾಲಯದ ಮಹಾಕಾಳಿ ಅಮ್ಮನವರ ಗುಡಿಯನ್ನು ಆವರಿಸಿ ಹರಿಯತೊಡಗಿತು. ಬಳಿಕ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗಕ್ಕೆ ವಿಸ್ತರಿಸಿ ಹರಿಯತೊಡಗಿದ ನೇತ್ರಾವತಿ ಸಂಜೆ ೬ ಗಂಟೆಯ ವರೆಗೆ ಏಕತ್ರವಾಗಿ ದೇವಾಲಯದ ಪ್ರಾಂಗಣವನ್ನು ಪ್ರವೇಶಿಸಿತು. ಅಷ್ಟರವರೆಗೆ ಸ್ವಲ್ಪಮಟ್ಟಿನ ಇಳಿಮುಖದಲ್ಲಿ ಹರಿಯ ತೊಡಗಿದ ಕುಮಾರಧಾರಾ ನದಿಯು ಬಳಿಕ ಏರಿಕೆಯಾಗಿ ದೇವಾಲಯದ ಪ್ರಾಂಗಣಕ್ಕೆ ಹರಿದು ಪವಿತ್ರ ಸಂಗಮ ನಡೆಯಿತು.

ದೇವಾಲಯಕ್ಕೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ನದಿಗೆ ಬಾಗಿನ ಸಮರ್ಪಿಸಿದರು. ಮುಖಂಡರಾದ ಸಂಜೀವ ಮಠಂದೂರು, ಅರುಣ್ ಕುಮಾರ್ ಪುತ್ತಿಲ, ತಹಸೀಲ್ದಾರ್ ಪುರಂದರ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ದೇವಿದಾಸ್ ರೈ, ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ , ರಮ್ಯಾ ರಾಜಾರಾಮ್, ಹರೀಶ್ ಉಪಾಧ್ಯಾಯ ಮೊದಲಾದವರು ಸ್ಥಳದಲ್ಲಿ ಉಪಸ್ಥಿತರಿದ್ದರು. ಸಂಗಮ ವೀಕ್ಷಣೆಗೆ ಆಗಮಿಸಿದ ಜನ ಸಾಗರ: ಈ ಬಾರಿ ನದಿಗಳೆರಡು ದೇವಳದ ಮುಂಭಾಗದಲ್ಲಿ ಪುನರಪಿ ಸಂಗಮಿಸಿ ಪವಿತ್ರ ಸಂಗಮ ಪೂಜೆ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ದೇವಳದತ್ತ ಆಗಮಿಸಿದರು. ಜನರ ಆಗಮನದ ನಿರೀಕ್ಷೆಯಲ್ಲಿ ಇದ್ದ ಪೊಲೀಸರು ಪ್ರಮುಖ ರಸ್ತೆಗಳಲ್ಲಿಯೇ ವಾಹನಗಳನ್ನು ನಿಯಂತ್ರಿಸಿದ್ದರು. ತಗ್ಗು ಪ್ರದೇಶಗಳೆಲ್ಲಾ ಜಲಾವೃತ: ಅತಿಯಾದ ಮಳೆಯಿಂದಾಗಿ ಕೊಪ್ಪಳ ಎಂಬಲ್ಲಿ ಮನೆಯೊಂದು ಕುಸಿದು ಬಿದ್ದಿದೆ. ಉಪ್ಪಿನಂಗಡಿ ಗ್ರಾಮದ ಪಂಜಳ, ಕಜೆಕ್ಕಾರ್, ನೂಜಿ, ನಟ್ಟಿಬೈಲು ಪ್ರದೇಶಗಳಲ್ಲಿನ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಅಲ್ಲಿನ ಅಪಾಯಕ್ಕೆ ಸಿಲುಕಿದ ನಿವಾಸಿಗರನ್ನು ಸ್ಥಳಾಂತರಿಸಲಾಗಿದೆ. ಉಪ್ಪಿನಂಗಡಿ ಪೇಟೆಯ ಸ್ಕಂದ ಹೋಟೆಲ್, ಇಂದ್ರಪ್ರಸ್ಥ ವಿದ್ಯಾಲಯದ ಪರಿಸರದಲ್ಲಿ ನೆರೆ ನೀರು ವ್ಯಾಪಿಸಿತ್ತು. ಉಭಯ ನದಿಗಳೂ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಭಾರಿ ಮಳೆಯಾಗುತ್ತಿರುವುದರಿಂದ ಈ ಬಾರಿಯೂ ಪೇಟೆ ನೆರೆ ಹಾವಳಿಗೆ ತುತ್ತಾಗುವ ಭೀತಿಯನ್ನು ಮೂಡಿಸಿದೆ. ಮಂಗಳವಾರ ರಾತ್ರಿಯ ವರೆಗೆ ಭಾರಿ ಮಳೆಯಾಯಿತು. ಹಲವು ಮನೆಗಳು ಜಲಾವೃತ: ಹಳೆಗೇಟು ಬಳಿಯ ಐತ ಮುಗೇರ ಎಂಬವರ ಮನೆಯು ನೇತ್ರಾವತಿ ನದಿ ನೀರಿನಿಂದ ಜಲಾವೃತಗೊಂಡಿತ್ತು. ಹಳೆಗೇಟು ಎಂಬಲ್ಲಲಿ ಹೆದ್ದಾರಿಯ ಬದಿಯಿರುವ ಹಡೀಲು ಗದ್ದೆಗಳು ಸಂಪೂರ್ಣ ನೀರಿನಿಂದಾವೃತವಾಗಿ ಸಾಗರದಂತೆ ಕಾಣುತ್ತಿವೆ. ಇನ್ನೊಂದೆಡೆ ಹಳೆಗೇಟಿನಲ್ಲಿ ವಸತಿ ಸಂಕೀರ್ಣ, ಮನೆಗಳು ಜಲಾವೃತವಾಗಿದ್ದು, ಇಲ್ಲಿನ ಸುಮಾರು ೧೨ ಮನೆಗಳವರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಮಠ ಹಿರ್ತಡ್ಕದಲ್ಲಿ ನೇತ್ರಾವತಿ ನದಿ ದಡದಲ್ಲಿರುವ ಸುಮಾರು ೪-೫ ಮನೆಗಳಿಗೆ ನದಿ ನೀರಿನಲ್ಲಿ ಮುಳುಗಡೆಯಾಗುವ ಭೀತಿಯಿದ್ದು, ಇದರಿಂದಾಗಿ ಈ ಮನೆಯವರು ಸಾಮನು - ಸರಂಜಾಮುಗಳನ್ನು ಬೇರೆಡೆ ವರ್ಗಾವಣೆ ಮಾಡಿದ್ದಾರೆ.ಕಂದಾಯ ಇಲಾಖಾಧಿಕಾರಿಗಳು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ನದಿಗಳ ನೀರು ಏರಿಕೆಯಾಗುತ್ತಲೇ ಇರುವುದರಿಂದ ಹೋಂಗಾರ್ಡ್‌ಗಳನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ಸನ್ನದ್ಧ ಸ್ಥಿತಿಯಲ್ಲಿದ್ದಾರೆ. ಜಲಾವೃತಗೊಂಡ ಮನೆಗಳ ನಿವಾಸಿಗಳು, ಅವರು ಸರಕುಗಳ ಸ್ಥಳಾಂತರಕ್ಕೆ ವಿಶ್ವಹಿಂದೂ ಪರಿಷತ್, ಬಜರಂಗ ದಳ, ಎಸ್ಸೆಸ್ಸೆಫ್, ಎಸ್ಕೆಎಸ್ಸೆಸ್ಸೆಫ್, ಎಸ್ಕೆಎಸ್ಸೆಸ್ಸೆಫ್ ವಿಖಾಯ ಸಂಘಟನೆಗಳ ಸದಸ್ಯರು ಸಹಕಾರ ನೀಡುತ್ತಿದ್ದಾರೆ. ಬಾಗಿನ ಸಮರ್ಪಣೆ, ಗಂಗಾ ಪೂಜೆ

ಉಪ್ಪಿನಂಗ : ದಕ್ಷಿಣಕಾಶಿ ಎಂದು ಪ್ರಸಿದ್ದವಾಗಿರುವ ಉಪ್ಪಿನಂಗಡಿಯಲ್ಲಿ ನೇತ್ರಾವತಿ ಕುಮಾರಧಾರಾ ನದಿಗಳೆರಡು ಶ್ರೀ ಸಹಸ್ರಲಿಂಗೇಶ್ವರ ದೇವಳದ ಮುಂಭಾಗದಲ್ಲಿ ಪುನರಪಿ ಸಂಗಮಿಸಿದ ಸಂದರ್ಭ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಬಾಗಿನ ಸಮರ್ಪಣೆ, ಗಂಗಾ ಪೂಜಾ ವಿಧಿ ವಿಧಾನಗಳು ನಡೆದವು.ದೇವಳದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಅವರ ವೇದಮಂತ್ರ ಘೋಷಣೆಯೊಂದಿಗೆ ನಡೆದ ಗಂಗಾ ಪೂಜೆಯಲ್ಲಿ ಸಮಸ್ತ ಭಕ್ತಾದಿಗಳ ಪರವಾಗಿ ಶಾಸಕರು ಗಂಗಾ ಮಾತೆಗೆ ಬಾಗಿನ ಸಮರ್ಪಿಸಿ ಪ್ರಾರ್ಥಿಸಿದರು. ಭಕ್ತರು ತೀರ್ಥ ಸಂಪ್ರೋಕ್ಷಣೆ ಮಾಡಿದರು, ಹಲವರು ತೀರ್ಥ ಸ್ನಾನ ಮಾಡಿದರು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಯಕ್, ಸದಸ್ಯರಾದ ದೇವಿದಾಸ್ ರೈ, ಅರ್ತಿಲ ಕೃಷ್ಣ ರಾವ್, ವೆಂಕಪ್ಪ ಪೂಜಾರಿ, ರಮ್ಯಾ ರಾಜಾರಾಮ್, ಕಂಗ್ವೆ ವಿಶ್ವನಾಥ ಶೆಟ್ಟಿ, ಹರಿರಾಮಚಂದ್ರ, ಶರತ್ ಕೋಟೆ, ಡಾ. ರಾಜಾರಾಮ್ ಕೆ.ಬಿ. ಮೊದಲಾದವರು ಉಪಸ್ಥಿತರಿದ್ದರು. ===