ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿಉಪ್ಪಿನಂಗಡಿಯಲ್ಲಿ ನದಿ ಒಡಲಿನಲ್ಲಿ ಮೂಡುತ್ತಿದೆ ಮರಳು ಮಣ್ಣು ಮಿಶ್ರಿತ ದಿಬ್ಬಗಳು. ವರ್ಷದಿಂದ ವರ್ಷಕ್ಕೆ ವಿಸ್ತಾರಗೊಳ್ಳುತ್ತಿದ್ದು, ಮಳೆಗಾಲದಲ್ಲಿ ಶೀಘ್ರ ನದಿ ನೀರು ಉಕ್ಕಿ ನೆರೆ ಸಂಭವಿಸುವ ಭೀತಿ ಮೂಡಿಸಿದೆ. ಕಳೆದೆರಡು ವರ್ಷಗಳಿಂದ ಬಿಳಿಯೂರು ಅಣೆಕಟ್ಟಿನಿಂದ ಹಿನ್ನೀರು ನಿಲುಗಡೆಯಾಗುತ್ತಿರುವ ನೇತ್ರಾವತಿ ನದಿಯ ಭಾಗದಲ್ಲೆಲ್ಲಾ ನದಿ ಒಡಲಿನಲ್ಲಿ ಈ ರೀತಿಯ ಮರಳು ಮಣ್ಣು ಮಿಶ್ರಿತ ದಿಬ್ಬಗಳು ಮೂಡುತ್ತಿವೆ. ಅಣೆಕಟ್ಟಿಗೆ ಗೇಟು ಅಳವಡಿಸಿದ ಬಳಿಕ ಸುರಿಯುವ ಮಳೆಯಿಂದಾಗಿ ಹರಿದು ಬರುವ ನೀರಿನಲ್ಲಿರುವ ಮಣ್ಣು ನಿಂತ ನೀರಿನಲ್ಲಿ ತಳ ಸೇರಿ ಈ ರೀತಿಯ ದಿಬ್ಬಗಳ ರಚನೆಗೆ ಕಾರಣವಾಗುತ್ತಿದೆ. ಉಪ್ಪಿನಂಗಡಿಯ ಸಂಗಮ ಸ್ಥಳದಿಂದ ನೇತ್ರಾವತಿ ಸೇತುವೆಯ ವರೆಗೆ ನದಿ ಒಡಲಿನಲ್ಲಿ ಸುಮಾರು 10-15 ಅಡಿ ವಿಸ್ತಾರದಲ್ಲಿ ಇಂತಹ ದಿಬ್ಬಗಳು ರಚಿತವಾಗಿದ್ದು, ಈ ದಿಬ್ಬಗಳ ರಚನೆಗೆ ನದಿ ಬದಿಯಲ್ಲಿ ಬೆಳೆದುನಿಂತ ಕುರುಚಲು ಗಿಡಗಳು ಸಹಕಾರಿಯಾಗಿದೆ. ಕೇವಲ ಎರಡೇ ವರ್ಷದ ಹಿನ್ನೀರು ನಿಲುಗಡೆಯಿಂದ ಈ ಮಟ್ಟದಲ್ಲಿ ದಿಬ್ಬಗಳ ರಚನೆಯಾದರೆ, ಮುಂದಿನ ಕೆಲ ವರ್ಷಗಳಲ್ಲಿ ಇದು ಮತ್ತಷ್ಟು ವಿಸ್ತಾರಗೊಂಡು ಮಳೆಗಾಲದಲ್ಲಿ ನೀರಿನ ಹರಿಯುವಿಕೆಗೆ ತಳ ಭಾಗದ ಸ್ಥಳಾವಕಾಶದ ಕೊರತೆ ಸೃಷ್ಟಿಸಿ ನದಿಯ ನೀರು ಉಕ್ಕಿ ಹರಿಯುವಂತಾಗಲು ಕಾರಣವಾದೀತೆಂಬ ಭೀತಿಯ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಮೂಡಿದೆ. ನದಿಯಲ್ಲಿ ಇದೀಗ ವರ್ಷದ ಬಹುತೇಕ ಎಲ್ಲಾ ದಿನಗಳಲ್ಲಿಯೂ ನೀರು ನಿಲುಗಡೆಯಾಗುತ್ತಿರುವುದರಿಂದ ಮರಳುಗಾರಿಕೆಗೂ ಅಡೆತಡೆಯಾಗಿದೆ. ನದಿಯ ಒಡಲು ಸಹಜ ಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳಲು ಮಳೆಗಾಲಕ್ಕೂ ಮೊದಲು ನದಿ ಒಅಡಲಿನಲ್ಲಿ ಮೂಡಿರುವ ಮಣ್ಣು ಮಿಶ್ರಿತ ಮರಳ ದಿಬ್ಬವನ್ನು ತೆರವುಗೊಳಿಸುವ ಅನಿವಾರ್ಯತೆ ಉಂಟಾಗಿದೆ. ............ಕಳೆದ ವರ್ಷ ನದಿಯಲ್ಲಿ ಹಿನ್ನೀರು ತುಂಬಿದಾಗ ಉಪ್ಪಿನಂಗಡಿಯ ದೇವಳದ ಬಳಿಯ ಮೆಟ್ಟಿಲುಗಳು ನೀರಿನಿಂದ ಮುಳುಗಡೆಯಾಗಿದ್ದರೆ, ಈ ಬಾರಿ ಮೆಟ್ಟಿಲ ಬಳಿಯೆಲ್ಲಾ ಮಣ್ಣಿನ ದಿಬ್ಬವೇ ಕಾಣಿಸಿತ್ತು. ನದಿಯುದ್ದಕ್ಕೂ ಇದೇ ರೀತಿಯ ಮರಳು ಮಿಶ್ರಿತ ಮಣ್ಣಿನ ದಿಬ್ಬಗಳು ಬಲವಾಗಿ ಬೆಳೆದಿದ್ದು, ಇದು ಈ ಬಾರಿಯ ಮಳೆಗಾಲದಲ್ಲಿ ನೀರಿನ ರಭಸದ ಹರಿಯುವಿಕೆಗೆ ಸಿಲುಕಿ ಕೊಚ್ಚಿ ಹೋಗದೇ ಇದ್ದರೆ ನದಿಯ ಒಡಲೇ ಮೇಲೇರಿದಂತಾಗಿ ನದಿ ನೀರು ಉಕ್ಕಿ ಹರಿಯಲು ಕಾರಣವಾದೀತು.
-ಸುಧಾಕರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ..................ನದಿಯ ಒಡಲಿನಲ್ಲಿ ನದಿ ದಂಡೆಯ ಸಮೀಪ ಮರಳು ಮಿಶ್ರಿತ ಮಣ್ಣಿನ ದಿಬ್ಬವು ರಚಿತವಾಗಿರುವುದರಿಂದ ನದಿ ದಡದಲ್ಲಿನ ಮಣ್ಣಿನ ಸವಕಳಿ ತಡೆಯಲು ಕಾರಣವಾದೀತೆಂಬ ಭಾವನೆ ಮುಡುತ್ತಿದೆ. ಆದರೆ ಇದರಿಂದಾಗಿ ತೀವ್ರ ಮಳೆಗಾಲದ ಸಮಯದಲ್ಲಿ ನೀರಿನ ಹರಿಯುವಿಕೆಗೆ ಸ್ಥಳಾವಕಾಶ ಸಾಕಾಗದೆ ಅನಗತ್ಯ ನೆರೆ ಭೀತಿ ಉದ್ಭವಿಸುವ ಸಾಧ್ಯತೆ ಕಂಡು ಬಂದಿರುವುದರಿಂದ ಈ ಸಮಸ್ಯೆಯ ನಿವಾರಣೆಗೆ ಆಡಳಿತ ವ್ಯವಸ್ಥೆ ಗಮನಹರಿಸಿದರೆ ಉತ್ತಮ.
-ಮಹೇಶ್ ಬಜತ್ತೂರು, ಯುವ ಸಾಮಾಜಿಕ ಕಾರ್ಯಕರ್ತ.