ಸಾರಾಂಶ
ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ಧಾರ್ಥ್ ಗೋಯಲ್ ಅಧ್ಯಕ್ಷತೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ಎಸ್ಸಿ ಎಸ್ಟಿ ಕುಂದುಕೊರತೆ ಪರಿಹಾರ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು.
ವಾರದ ಸಂತೆಯಲ್ಲಿ ಕೃತಕ ಬಣ್ಣ ಬಳಕೆ ಆರೋಪ, ಕಿನ್ನಿಗೋಳಿಯಲ್ಲಿ ಎಸ್ಟಿಪಿ ಸ್ಥಾಪನೆಗೆ ವಿರೋಧಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಾಸಿಕ ಠಾಣಾ ಮಟ್ಟದ ಎಸ್ಸಿ ಎಸ್ಟಿ ಕುಂದುಕೊರತೆ ಸಭೆಗಳನ್ನು ನಿಗದಿಪಡಿಸುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.ಡಿಸಿಪಿ (ಕಾನೂನು ಸುವ್ಯವಸ್ಥೆ) ಸಿದ್ಧಾರ್ಥ್ ಗೋಯಲ್ ಅಧ್ಯಕ್ಷತೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಭಾನುವಾರ ನಡೆದ ಎಸ್ಸಿ ಎಸ್ಟಿ ಕುಂದುಕೊರತೆ ಪರಿಹಾರ ಸಭೆಯಲ್ಲಿ ಈ ಒತ್ತಾಯ ಕೇಳಿಬಂತು.
ಕಮಿಷನರೆಟ್ ಕಚೇರಿಯಲ್ಲಿ ಪ್ರಸ್ತುತ 4ನೇ ಭಾನುವಾರ ಎಸ್ಸಿ ಎಸ್ಟಿ ಸಭೆ ನಡೆಯುತ್ತಿದೆ. ಪ್ರತಿ ತಿಂಗಳ ಮೂರನೇ ವಾರ ಠಾಣಾ ಮಟ್ಟದ ಸಭೆಗಳನ್ನು ನಡೆಸಿದರೆ ಅನುಕೂಲವಾಗಲಿದೆ ಎಂದು ಮುಖಂಡರು ಒತ್ತಾಯಿಸಿದದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಡಿಸಿಪಿ ತಿಳಿಸಿದರು.ಸ್ಮಶಾನಕ್ಕೆ ಮೂಲಸೌಕರ್ಯ:
ಮೂಡುಬಿದಿರೆಯಲ್ಲಿ 4 ವರ್ಷಗಳ ಹಿಂದೆ ಮಂಜೂರಾದ ಎಸ್ಸಿ ಎಸ್ಟಿ ಸ್ಮಶಾನದಲ್ಲಿ ಕಂಪೌಂಡ್ ಗೋಡೆ, ನೀರು ಮತ್ತು ಆಶ್ರಯಕ್ಕೆ ಸೂಕ್ತ ವ್ಯವಸ್ಥೆ ಇಲ್ಲ ಎಂದು ಎಸ್.ಪಿ. ಆನಂದ್ ಆರೋಪಿಸಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಒತ್ತಾಯಿಸಿದರು.ಕೃತಕ ಬಣ್ಣ ಬಳಕೆ:
ಮೂಡುಬಿದಿರೆಯ ವಾರದ ಸಂತೆಯಲ್ಲಿ ಬೀದಿ ವ್ಯಾಪಾರಿಗಳು ಕೃತಕ ಬಣ್ಣಗಳನ್ನು ಬಳಸುತ್ತಾರೆ. ಮಟ್ಕಾ ಇತ್ಯಾದಿ ಜೂಜಾಟ ಕೂಡ ನಡೆಯುತ್ತಿದೆ ಎಂದು ರಾಮಚಂದ್ರ ಆರೋಪಿಸಿದರು. ಐಕಳದಲ್ಲಿ ಅಕ್ರಮ ಕ್ವಾರಿಯಿಂದ ಹಾನಿಗೊಳಗಾದ ಮನೆಗಳಿಗೆ 2 ವರ್ಷಗಳ ನಂತರವೂ ಪರಿಹಾರ ನೀಡಲಾಗಿಲ್ಲ ಎಂದು ಹೇಳಿದರು.ಎಸ್ಸಿ ಎಸ್ಟಿಗೆ ಮಾತ್ರ ನೋಟಿಸ್:
ಕೆಲವೆಡೆ ಅತಿಕ್ರಮಣದ ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ ಕುಟುಂಬಗಳಿಗೆ ಮಾತ್ರ ಕಂದಾಯ ಇಲಾಖೆಯ ನೋಟಿಸ್ಗಳು ಬಂದಿವೆ. ಆದರೆ ಶ್ರೀಮಂತ ನಿವಾಸಿಗಳ ವಿರುದ್ಧ ಯಾವುದೇ ಕ್ರಮ ಇಲ್ಲ ಏಕೆ ಎಂದು ಚಂದ್ರಕುಮಾರ್ ಪ್ರಶ್ನಿಸಿದರು.ಎಸ್ಟಿಪಿ ಘಟಕ ಬೇಡ:
ಸ್ಥಳೀಯರ ವಿರೋಧದ ಹೊರತಾಗಿಯೂ ಕಿನ್ನಿಗೋಳಿ ಪಟ್ಟಣ ಪಂಚಾಯ್ತಿಯ ಯಳತ್ತೂರಿನಲ್ಲಿ ಒಳಚರಂಡಿ ಸಂಸ್ಕರಣಾ ಘಟಕ (ಎಸ್ಟಿಪಿ) ಸ್ಥಾಪಿಸಲು ಮುಂದಾಗುತ್ತಿದ್ದಾರೆ. ಈ ಪ್ರದೇಶದಲ್ಲಿ ಕೃಷಿ ಭೂಮಿಗೆ ನೀರುಣಿಸುವ ಕೆರೆ ಇದ್ದು, ಎಸ್ಟಿಪಿ ಸ್ಥಾಪನೆ ಮಾಡಿದರೆ ಕೆರೆ ಕಲುಷಿತವಾಗುವ ಅಪಾಯವಿದೆ. ಎಸ್ಟಿಪಿಯನ್ನು ಅಲ್ಲಿ ಸ್ಥಾಪನೆ ಮಾಡಬಾರದು ಎಂದು ಗಂಗಾಧರ ಮರಾಠಿ ಒತ್ತಾಯಿಸಿದರು.ಬಾಣಂತಿ ಸಾವು ಪ್ರಕರಣ:
ಜೂನ್ 14ರಂದು ಲೇಡಿಗೋಶನ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಹೆರಿಗೆಯ ನಂತರದ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಡಿಸಿಪಿ ಸಿದ್ಧಾರ್ಥ್ ಗೋಯಲ್, ಪ್ರಕರಣ ತನಿಖೆಯಲ್ಲಿದೆ. ಕುಟುಂಬದ ಆರ್ಥಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಲು ವೈದ್ಯಕೀಯ ಮಂಡಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.ಡಿಸಿಪಿ (ಅಪರಾಧ) ರವಿಶಂಕರ್, ಡಿಸಿಆರ್ಇ ಮಂಗಳೂರು ರೇಂಜ್ ಎಸ್ಪಿ ಸೈಮನ್ ಸಿ.ಎ. ಇದ್ದರು.