ಸಾರಾಂಶ
ಹುಬ್ಬಳ್ಳಿ: ಕಾಲ ಕಾಲಕ್ಕೆ ಬದಲಾಯಿಸುವ ಸರ್ಕಾರದ ನಿಯಮಾವಳಿಗಳು ಆಡಳಿತಾತ್ಮಕ ಹಿತದೃಷ್ಟಿಯಿಂದ ಎಲ್ಲರಿಗೂ ಅನುಕೂಲ ಆಗುವ ಉದ್ದೇಶ ಮತ್ತು ನ್ಯಾಯ ಸಮ್ಮತ ಆಡಳಿತ ನಡೆಸುವ ಉದ್ದೇಶ ಹೊಂದಿರುತ್ತವೆ. ಸರ್ಕಾರದ ಆದೇಶದಿಂದ ಯಾವುದೇ ವರ್ಗಕ್ಕೆ ಅನಾನುಕೂಲ ಆಗಿದ್ದರೆ ಅಂತಹ ನಿಯಮಾವಳಿಗಳನ್ನು ಮರು ಪರಿಶೀಲಿಸಿ ಆಗಿರುವ ಸಮಸ್ಯೆ ಬಗೆಹರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಶಾಸಕ, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ಅವರು ಭಾನುವಾರ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಕ್ಕೊತ್ತಾಯಗಳನ್ನು ಸ್ವೀಕರಿಸಿ ಮಾತನಾಡಿದರು.ರಾಷ್ಟ್ರೀಯ ಶಿಕ್ಷಣ ನೀತಿಯ ಶಿಫಾರಸುಗಳಿಗೆ ಅನುಕೂಲವಾಗುವಂತೆ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಯ ಪದನಾಮವನ್ನು ಬದಲಾಯಿಸಿ, ಹೊಸ ವೃಂದ ಹಾಗೂ ವೃಂದ ಬಲವನ್ನು ನಿರ್ಧರಿಸುವ ವಿಶೇಷ ರಾಜ್ಯ ಪತ್ರವನ್ನು ಮೇ 20, 2017ರಂದು ಹೊರಡಿಸಿದ ರಾಜ್ಯ ಸರ್ಕಾರ ಪ್ರಾಥಮಿಕ ಶಾಲಾ ಸಹ ಶಿಕ್ಷಕ ವೃಂದವನ್ನು ಮುಖ್ಯವಾಗಿ ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5ಕ್ಕೆ ಹಾಗೂ ಪದವೀಧರ ಪ್ರಾಥಮಿಕ ಶಿಕ್ಷಕರು 6 ರಿಂದ 8ಕ್ಕೆ ಎಂದು ವೃಂದವಾರು ಹುದ್ದೆಗಳನ್ನು ಮಂಜೂರಿಸಿ ದೇಶಿಸಿದೆ.
ತತ್ಪರಿಣಾಮವಾಗಿ 2016ಕ್ಕಿಂತ ಮೊದಲು 1 ರಿಂದ 7, 1 ರಿಂದ 8 ವೃಂದಕ್ಕೆ ನೇಮಕಾತಿಯಾದ ಎಲ್ಲ ಸಹ ಶಿಕ್ಷಕರು ಪ್ರಾಥಮಿಕ ಶಾಲಾ ಶಿಕ್ಷಕರು 1 ರಿಂದ 5 ಎಂದು ಪರಿಗಣಿಸಿದ್ದು, ಶಿಕ್ಷಕರಿಗೆ ತೀವ್ರ ಅನ್ಯಾಯವಾಗಿದೆ. ಹೀಗಾಗಿ ಕುರಿತು ಈ ಸರ್ಕಾರಕ್ಕೆ ಒತ್ತಾಯಿಸುವಂತೆ ಪ್ರಸಾದ ಅಬ್ಬಯ್ಯ ಅವರಿಗೆ ಮನವಿ ಮಾಡಿದರು.ಇದಕ್ಕೆ ಉತ್ತರಿಸಿದ ಶಾಸಕರು, ನಿಯಮಾವಳಿಯಿಂದ ಸಮಸ್ಯೆ ಆಗಿದ್ದರೆ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಲು ಸರ್ಕಾರವನ್ನು ಒತ್ತಾಯಿಸಲಾಗುವುದು. ನಿಯಮಗಳನ್ನು ಸರಿಪಡಿಸುವುದರ ಜತೆಗೆ ನಿರಂತರ ಸೇವಾನುಭವ ಮತ್ತು ಉನ್ನತ ವಿದ್ಯಾರ್ಹತೆ ಹೊಂದಿರುವ ಸೇವಾನಿರತ ಶಿಕ್ಷಕರಿಗೆ ಯಾವುದೇ ರೀತಿಯ ತಾರತಮ್ಯ ಹಾಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಸಂಘದ ಅಧ್ಯಕ್ಷ ಎಂ.ಎಚ್. ಜಂಗಳಿ, ಪ್ರಧಾನ ಕಾರ್ಯದರ್ಶಿ ಎಂ.ಯು. ಶಿರಹಟ್ಟಿ, ಉಪಾಧ್ಯಕ್ಷ ಎನ್.ಸಿ. ನಾಗರಳ್ಳಿ, ಗೌರವಾಧ್ಯಕ್ಷ ಎಚ್.ಎಂ. ಕುಂದರಗಿ, ಎ.ಎನ್. ರಾಯಚೂರಕರ, ಜಿ.ಎನ್. ಕುಬಿಹಾಳ, ಟಿ.ಎಸ್. ರೇವಡಿಗಾರ, ಬಿ.ಬಿ. ಕೇರಿ, ಪಿ.ವೈ. ಯಲಿಗಾರ, ಎಸ್.ಎಚ್. ಮೋಹಸಿನ್, ಎಸ್.ಬಿ. ಪಾಟೀಲ ಸೇರಿ ಹಲವರಿದ್ದರು.