ಸಾರಾಂಶ
ಉಡುಪಿ: ಬ್ರಹ್ಮಾವರ ಕುಂಜಾಲು ರಸ್ತೆಯಲ್ಲಿ ಗೋವಿನ ರುಂಡ ಪತ್ತೆಯಾಗಿದ್ದು ಈ ಮೂಲಕ ಕೋಮು ಸೌಹಾರ್ದಕ್ಕೆ ಧಕ್ಕೆ ತಂದೊಡ್ದುತ್ತಿರುವ ದುಷ್ಕರ್ಮಿಗಳೇ ದ.ಕ., ಉಡುಪಿ ಹಾಗು ಶಿವಮೊಗ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಮು ನಿಗ್ರಹ ದಳಕ್ಕೆ ಮೊದಲ ಟಾಸ್ಕ್ ನೀಡಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ್ ಶ್ರೀನಿಧಿ ಹೆಗ್ಡೆ ಹೇಳಿದ್ದಾರೆ. ಹಿಂದುಗಳನ್ನು ಮಾತ್ರ ದಮನಿಸಲು ಕೋಮು ನಿಗ್ರಹ ದಳವನ್ನು ಸ್ಥಾಪಿಸಲಾಗಿದೆ ಎಂದು ಬಿಜೆಪಿ ಹೇಳುತ್ತಿದ್ದರೂ, ಕಾಂಗ್ರೆಸ್ ಇದನ್ನು ಅಲ್ಲಗಳೆಯುತ್ತಿತ್ತು. ಆದರೆ ಈಗ ಗೋವಿನ ರುಂಡ ಪತ್ತೆಯಾಗಿದ್ದು, ಗೋ ಹತ್ಯೆ ನಡೆದು, ರಾಜಾರೋಷವಾಗಿ ಸಾಗಾಟ ಮಾಡಿದರೂ ಪೋಲಿಸ್ ಇಲಾಖೆಗೆ ಮಾಹಿತಿ ದೊರಕದೇ ಇರುವುದು ಇಲಾಖೆಯ ವೈಫಲ್ಯವನ್ನು ಜಗಜ್ಜಾಹೀರು ಮಾಡಿದೆ ಎಂದವರು ಆರೋಪಿಸಿದ್ದಾರೆ. ಕಾಂಗ್ರೆಸ್ ಸರ್ಕಾರವೇ ಸ್ಥಾಪಿಸಿರುವ ಕೋಮು ನಿಗ್ರಹ ದಳಕ್ಕೆ ಇದನ್ನೇ ಮೊದಲ ಪ್ರಕರಣವನ್ನಾಗಿ ನೀಡಲಿ. ಕಾಂಗ್ರೆಸ್ ಸರಕಾರಕ್ಕೆ ಹಿಂದುಗಳ ಭಾವನೆಗಳ ಬಗ್ಗೆ ಅದೆಷ್ಟು ಕಾಳಜಿ ಇದೆ ಎಂಬುದು ಈಗ ತಿಳಿಯಲಿದೆ. ಗೃಹ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.